ಶಾಲೆಯಲ್ಲಿ ನೀರಿಲ್ಲ: ಮಕ್ಕಳಿಗೆ ರಜೆ ಘೋಷಣೆ
ಬನ್ನೇರ್ಘಟ್ಟ ಮಾರ್ಚ್ 7: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಆದರೀಗ ಈ ಸಮಸ್ಯೆ ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೂ ಸಹ ಹರಡಿದೆ. ಹೀಗೆ ನೀರಿಲ್ಲ ಎಂಬ ಕಾರಣಕ್ಕೆ ಶಾಲೆಯನ್ನೇ ಮಚ್ಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು... ನೀರಿನ ಸಮಸ್ಯೆಯಿಂದ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಶಾಲೆವೊಂದು ಮಂಗಳವಾರದಿಂದ ಮುಚ್ಚಿದೆ. ಸುಮಾರು 100 ವಿದ್ಯಾರ್ಥಿಗಳಿರುವ ಖಾಸಗಿ ಶಾಲೆಯ ಅಭಿಕ್ ಅಕಾಡೆಮಿಯ ಆಡಳಿತ ಮಂಡಳಿಯು ಶಾಲೆಯಲ್ಲಿ ನೀರಿನ ಕೊರತೆಯ ಕಾರಣ ಮಾರ್ಚ್ 5 ರಿಂದ 10 ರವರೆಗೆ ರಜೆ ಘೋಷಿಸಿದೆ.

'ಶಾಲೆಯ ದೈನಂದಿನ ಬಳಕೆಗೆ ನಾವು ಬೋರ್ವೆಲ್ ನೀರನ್ನೇ ಅವಲಂಬಿಸಿದ್ದೇವೆ. ಆದರೆ ಈಗ ಆ ನೀರು ಸಂಪೂರ್ಣ ಬತ್ತಿ ಹೋಗಿದೆ. ಟ್ಯಾಂಕರ್ಗಳಿಂದ ನೀರು ಖರೀದಿಸಲು ನಾವು ಸಿದ್ಧರಿದ್ದೇವೆ. ಆದರೆ ಹೆಚ್ಚಿನ ಬೆಲೆಗೆ ನಾವು ಅದನ್ನು ಖರೀದಿಸಲು ಸಿದ್ಧರಿಲ್ಲ. ಆದ್ದರಿಂದ ನಾವು ನೀರಿನ ವ್ಯವಸ್ಥೆ ಮಾಡುವವರೆಗೂ ಶಾಲೆಯನ್ನು ಒಂದು ವಾರ ಮುಚ್ಚಿದ್ದೇವೆ. ಇದರ ಹೊರತುಪಡಿಸಿ ಬೇರೆ ದಾರಿಯಿಲ್ಲ' ಎಂದು ಶಾಲೆಯ ಸಿಬ್ಬಂದಿಯೊಬ್ಬರು ಹೇಳಿದರು.
ಹೊಸಕೆರೆಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಏಳು ತಿಂಗಳಿಂದ ನೀರಿನ ಸಮಸ್ಯೆ ಆರಂಭವಾಗಿದೆ. "ಶಾಲೆಯಲ್ಲಿ ಪ್ರತ್ಯೇಕ ಬೋರ್ವೆಲ್ ಇದೆ. ಆದರೆ ಅದು 2023ರ ಆಗಸ್ಟ್ನಲ್ಲಿ ಬತ್ತಿಹೋಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅದನ್ನು ಪುನಃ ಕೊರೆಸಿದೆ. ಆದರೆ ಅದು ಒಂದು ತಿಂಗಳಲ್ಲಿ ಬತ್ತಿಹೋಗಿದೆ. ಅಂದಿನಿಂದ ನಾವೇ ಟ್ಯಾಂಕರ್ ನೀರು ಖರೀದಿಸುತ್ತಿದ್ದೇವೆ. ಆದರೆ ಈಗ ಬೆಲೆಗಳು ಹೆಚ್ಚಾದಂತೆ ಅಷ್ಟು ಹಣ ಕೊಟ್ಟು ನೀರನ್ನು ನಾವು ಖರೀದಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಇಲ್ಲಿ 350 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಕುರಿತು ಇಲಾಖೆ ಅಧಿಕಾರಿಗಳಿಗೆ ಹಾಗೂ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ'' ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಎಂ ಗಂಗಮ್ಮ ತಿಳಿಸಿದರು.
ಈಗ ಸ್ಥಳೀಯ ಸಮುದಾಯದವರು ಶಾಲೆಗೆ ನೀರಿನ ವ್ಯವಸ್ಥೆ ಮಾಡಲು ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. "ನಮ್ಮ ಪ್ರಸ್ತಾವನೆಯು ಸರಳವಾದರೂ ಪರಿಣಾಮಕಾರಿಯಾಗಿದೆ: ನೀರಿನ ಸಮಸ್ಯೆ ಇರುವ ಶಾಲೆಗಳಲ್ಲಿ ವಾರಕ್ಕೆ ಎರಡು ಬಾರಿಯಾದರೂ ನೀರಿನ ಟ್ಯಾಂಕ್ ಪೂರೈಕೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಈ ಉದಾತ್ತ ಕಾರ್ಯದಲ್ಲಿ ನಮ್ಮೊಂದಿಗೆ ಸೇರಲು ಮತ್ತು ಜಿಎಚ್ಪಿಎಸ್ ಹೊಸಕೆರೆಹಳ್ಳಿಯಲ್ಲಿ ನೀರಿನ ಸಮಸ್ಯೆಗೆ ಸುಸ್ಥಿರ ಪರಿಹಾರವನ್ನು ಒದಗಿಸಲು ಕೊಡುಗೆ ನೀಡುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತೇವೆ, "ಎಂದು ಅಭಿಯಾನವು ಮನವಿ ಮಾಡಿದೆ.












Click it and Unblock the Notifications