ಜನಾ ರೆಡ್ಡಿಗೆ 100 ಕೋಟಿ ಅರೇಂಜ್ ಮಾಡಿದ್ದು ಭೀಮಾ ನಾಯ್ಕ್, ಹೌದೇ?
ಬೆಂಗಳೂರು, ಡಿಸೆಂಬರ್ 7: ಮಂಡ್ಯದ ಮದ್ದೂರಿನ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಚಾಲಕ ರಮೇಶ್ ಬರೆದಿರುವ ಮರಣ ಪತ್ರದಿಂದ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಕೆಐಎಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾ ನಾಯ್ಕ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ನಾಯ್ಕ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಎಫ್ ಐಆರ್ ದಾಖಲಿಸಲಾಗಿದೆ.
ಮಾಜಿ ಸಚಿವ ಜನಾರ್ದನ ರೆಡ್ಡಿಯ ಮಗಳ ಮದುವೆಗೆ ನೂರು ಕೋಟಿ ರುಪಾಯಿ ಹಣವನ್ನು ಬದಲಿಸಿಕೊಟ್ಟವರು ಇದೇ ನಾಯ್ಕ್, ಮುಂದಿನ ಚುನಾವಣೆಗೆ ಟಿಕೆಟ್ ಗಾಗಿ ಕೂಡ ಹಣ ನೀಡಿದ್ದಾರೆ. ಲೋಕಾಯುಕ್ತದಲ್ಲಿ ದಾಖಲಾಗಿದ್ದ ತಮ್ಮ ವಿರುದ್ಧದ ಪ್ರಕರಣದಲ್ಲಿ ಪ್ರಭಾವ ಬೀರಲು ಜಡ್ಜ್ ಗೆ ಹಣ ನೀಡಿದ್ದಾರೆ ಎಂದು ಮರಣ ಪತ್ರದಲ್ಲಿ ದಿನ ಮತ್ತಿತರ ಮಾಹಿತಿಯನ್ನು ಕೂಡ ಬರೆದಿದ್ದಾರೆ.[ಹೊಗಳಿಕೆ ಟೀಕೆ ಅಪಹಾಸ್ಯಕ್ಕೀಡಾದ ರೆಡ್ಡಿ ಮಗಳ ಮದುವೆ!]

ಅಧಿಕಾರಿ ಭೀಮಾ ನಾಯ್ಕ್ ಅಕ್ರಮ ಸಂಪಾದನೆ ಮಾಡಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದ್ದು, ಮೃತನ ಸಂಬಂಧಿಕರು ತನಿಖೆಗಾಗಿ ಆಗ್ರಹಿಸಿದ್ದಾರೆ. ಇದೇ ವೇಳೆ ಭೀಮಾ ನಾಯ್ಕ್ ಬಗ್ಗೆ ಅದಾಯ ತೆರಿಗೆ ಇಲಾಖೆಗೆ ದೂರು ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಕಪ್ಪು ಹಣ ಕೈ ಬದಲಿಸಿದ ಬಗ್ಗೆ ಸಮಗ್ರವಾದ ತನಿಖೆಯಾಗುವ ಸಾಧ್ಯತೆ ಇದೆ.
ಭೀಮಾ ನಾಯ್ಕ್ ಗೊತ್ತಿಲ್ಲ: ಭೀಮಾ ನಾಯ್ಕ್ ಯಾರು ಅಂತಲೇ ಗೊತ್ತಿಲ್ಲ. ನಮಗೆ ಅತನ ಪರಿಚಯವೇ ಇಲ್ಲ. ನಮಗೆ ಅಗದವರು ಯಾರೋ ಡೆತ್ ನೋಟ್ ನಲ್ಲಿ ಹೆಸರು ಸೇರಿಸಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರರೆಡ್ಡಿ ಬಳ್ಳಾರಿಯಲ್ಲಿ ಬುಧವಾರ ಹೇಳಿಕೆ ನೀಡಿದ್ದಾರೆ.
ತನಿಖೆ ಆಗಲಿ: ಏನು ತನಿಖೆ ಆಗುತ್ತದೋ ಆಗಲಿ. ನಮಗೆ ಭೀಮಾ ನಾಯ್ಕ್ ಗೂ ಯಾವುದೇ ಸಂಬಂಧವಿಲ್ಲ. ಆತ ಒಬ್ಬ ನೌಕರ. ಅಂತಹವರ ಜತೆ ವ್ಯವಹಾರ ನಡೆಸಬೇಕಾದ ಅಗತ್ಯ ಇಲ್ಲ. ನಮ್ಮ ಮೇಲೆ ಯಾಕೆ ಇಂಥ ಆರೋಪ ಬರುತ್ತಿದೆಯೋ ಗೊತ್ತಿಲ್ಲ. ಅವನ್ಯಾರೋ ಡ್ರೈವರ್. ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಮ್ಮ ಹೆಸರು ಯಾಕೆ ತಂದನೋ? ಒಟ್ಟಿನಲ್ಲಿ ಎಲ್ಲ ಆರೋಪ ಸುಳ್ಳು ಎಂದು ಸಂಸದ ಬಿ.ಶ್ರೀರಾಮುಲು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.












Click it and Unblock the Notifications