ಬೆಂಗಳೂರು: ಮತದಾರ ಪಟ್ಟಿ ಪರಿಷ್ಕರಣೆ, ಬಿಎಲ್ಎ ನಿಯೋಜನೆಗೆ ರಾಜಕೀಯ ಪಕ್ಷಗಳಿಗೆ ಬಿಬಿಎಂಪಿ ಸೂಚನೆ
ಬೆಂಗಳೂರು, ಡಿಸೆಂಬರ್ 23 : ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿರುವ 28 ವಿಧಾನಸಭಾ ಕ್ಷೇತ್ರಗಳಿಗೆ ರಾಜಕೀಯ ಪಕ್ಷಗಳಿಂದ ಬೂತ್ ಮಟ್ಟದ ಏಜೆಂಟರನ್ನು (ಬಿಎಲ್ಎ) ನಿಯೋಜಿಸಬೇಕು. ಡಿಸೆಂಬರ್ 29ರ ಸೋಮವಾರದೊಳಗೆ
ನಿಯೋಜನೆಗೊಂಡ ಏಜೆಂಟರುಗಳ ಪಟ್ಟಿಯನ್ನು ಸಲ್ಲಿಸಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಸೂಚಿಸಿದರು.
ಬೆಂಗಳೂರು: ಒತ್ತುವರಿ ತೆರವುಗೊಳಿಸಲು ಬಿಬಿಎಂಪಿ ಖಡಕ್ ಸೂಚನೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ- 2023ರ ಕಾರ್ಯಚಟುವಟಿಕೆಗಳ ಕುರಿತು ರಾಜಕೀಯ ಪಕ್ಷದ ಪ್ರತಿನಿಧಿಗಳ ಜೊತೆ ಶುಕ್ರವಾರ ಸಭೆ ನಡೆಯಿತು. ಈ ವೇಳೆ ಪ್ರಗತಿ ಪರಿಶೀಲನೆ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತರು ಹಲವು ಸೂಚನೆಗಳನ್ನು ನೀಡಿದರು.
ಈ ವೇಳೆ ಮಾತನಾಡಿದ ತುಷಾರ್ ಗಿರಿನಾಥ್, ಬಿಬಿಎಂಪಿಯಿಂದ ಈಗಾಗಲೇ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಗಳನ್ನು ನಿಯೋಜಿಸಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯ ಕಾರ್ಯವು ಪ್ರಗತಿಯಲ್ಲಿರುತ್ತದೆ. ಈ ಪೈಕಿ ರಾಜಕೀಯ ಪಕ್ಷಗಳಿಂದಲೂ ಕೂಡಲೇ ಬೂತ್ ಮಟ್ಟದ ಏಜೆಂಟ್ ಗಳನ್ನು ನಿಯೋಜಿಸಲು ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ತಿಳಿಸಿದರು.
ಪ್ರತಿವಾರ ಇದೇ ರೀತಿ ಸಭೆ
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಕುರಿತು ರಾಜಕೀಯ ಪ್ರತಿನಿಧಿಗಳ ಜೊತೆ ಪ್ರತಿ ವಾರವೂ ಜಿಲ್ಲಾ ಚುನಾವಣಾಧಿಕಾರಿಯ ಅಧ್ಯಕ್ಷತೆಯಲ್ಲಿ ಒಂದು ಸಭೆ ನಡೆಯಲಿದೆ. ಇದರ ಜೊತೆಗೆ ಆಯಾ 28 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಅಪರ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಬೂತ್ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅವರು ಸೂಚನೆ ನೀಡಿದರು.
ಮತದಾರರ ಮಾಹಿತಿ ರಾಜಕೀಯ ಪಕ್ಷಗಳಿಗೆ ರವಾನೆ
ರಾಜಕೀಯ ಪಕ್ಷಗಳಿಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಪ್ರತಿ 3 ದಿನಕ್ಕೊಮ್ಮೆ ರಾಜಕೀಯ ಪಕ್ಷಗಳ ಕಛೇರಿಯ ಇ-ಮೇಲ್ ಐಡಿ ಗೆ ಕಳುಹಿಸಿಕೊಡಲಾಗುವುದು. ಇನ್ನೂ ಹೆಚ್ಚಿನ ಇ-ಮೇಲ್ ಐಡಿಗೆ ಕಳುಹಿಸಿಕೊಡಬೇಕಾದರೆ ರಾಜಕೀಯ ಪಕ್ಷಗಳಿಂದ ಅಧಿಕೃತ ಇ-ಮೇಲ್ ಐಡಿ ಎಂದು ದೃಢೀಕರಿಸಿಕೊಂಡು ಪಾಲಿಕೆಗೆ ಸಲ್ಲಿಸಿದರೆ ಅದಕ್ಕೂ ವಿವರಗಳನ್ನು ಕಳುಹಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು.
ವೆಬ್ಸೈಟ್ನಲ್ಲಿ ಅಧಿಕಾರಿಗಳ ಪಟ್ಟಿ ಪ್ರಕಟಿಸಿ
ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬರುವ ಬೂತ್ ಗಳಿಗೆ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ)ಗಳನ್ನು ನಿಯೋಜಿಸಿರುವ ಸಂಬಂಧ ಪಾಲಿಕೆಯ ವೆಬ್ ಸೈಟ್ (https://site.bbmp.gov.in/Election1.html)ನಲ್ಲಿ ಎಲ್ಲಾ ಬೂತ್ ಮಟ್ಟದ ಅಧಿಕಾರಿಗಳ ವಿವರ ಅಳವಡಿಸಿದೆ. ಅಂದರೆ ವಿಧಾನಸಭಾ ಕ್ಷೇತ್ರದ ವಿವರ, ಹೆಸರು, ಪದನಾಮ, ಮೊಬೈಲ್ ಸಂಖ್ಯೆ, ಭಾವಚಿತ್ರ ಹಾಗೂ ಸಹಿಯೊಂದಿಗಿನ ಪಟ್ಟಿ ಅಪ್ಲೋಡ್ ಮಾಡಿ. ರಾಜಕೀಯ ಪಕ್ಷಗಳು ಅಥವಾ ಸಾರ್ವಜನಿಕರು ಸಂಬಂಧಪಟ್ಟ ಬಿಎಲ್ಒಗಳನ್ನು ಸಂಪರ್ಕಿಸಿ ಅಗತ್ಯ ಮಾಹಿತಿಯನ್ನು ಪಡೆಯಲು ಅನುಕೂಲವಾಗುವಂತೆ ನೋಡಿಕೊಳ್ಳಿ ಎಂದರು.
ಮನೆ ಮನೆ ಸಮೀಕ್ಷೆ ಬಗ್ಗೆ ಪ್ರಸ್ತಾಪ
ಇಷ್ಟೇ ಅಲ್ಲದೇ ನಗರದಲ್ಲಿನ 28 ವಿಧಾನ ಸಭಾ ಕ್ಷೇತ್ರಗಳಲ್ಲಿ ಅರ್ಜಿ ನಮೂನೆಗಳ ವಿಲೇವಾರಿ ಆಗಿರುವ ಬಗ್ಗೆ ಹಾಗೂ ಮನೆ ಮನೆ ಸಮೀಕ್ಷೆ ನಡೆಸುತ್ತಿರುವ ಕುರಿತು ಪ್ರಸ್ತಾಪಿಸಲಾಯಿತು. ಮತದಾರರ ದತ್ತಾಂಶ ಕಳ್ಳತನ ಪ್ರಕರಣದಲ್ಲಿ ಕೇಳಿ ಬಂದಿದ್ದ ಚಿಕ್ಕಪೇಟೆ-ಶಿವಾಜಿನಗರ-ಮಹದೇವಪುರ ವ್ಯಾಪ್ತಿಯಲ್ಲಿ ಸೇರ್ಪಡೆ ಆಗಿರುವ ಮತ್ತು ಮತದಾರರ ಪಟ್ಟಿಯಿಂದ ತೆಗೆದು ಹಾಕಿರುವ ಮತದಾನ ಗುರುತಿನ ಚೀಟಿ ವಿತರಣೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಉಜ್ವಲ್ ಕುಮಾರ್ ಘೋಷ್, ಅಪರ ಜಿಲ್ಲಾ ಚುನಾವಣಾಧಿಕಾರಿಗಳು (ಕೇಂದ್ರ, ಉತ್ತರ, ಬೆಂಗಳೂರು ನಗರ ಹಾಗೂ ಪಶ್ಚಿಮ), ಚುನಾವಣಾ ವಿಭಾಗದ ಸಹಾಯಕ ಆಯುಕ್ತರಾದ ಉಮೇಶ್, ರಾಜಕೀಯ ಪಕ್ಷದ ಪ್ರತಿನಿಧಿಗಳು ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.