ಕಿಮ್ಸ್ ನಲ್ಲಿ ಒಕ್ಕಲಿಗರ ಸಂಘ ಚುನಾವಣೆ ಫಲಿತಾಂಶ
ಬೆಂಗಳೂರು, ಜ. 4: ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪೇಗೌಡ ವೈದ್ಯಕೀಯ ಕಾಲೇಜಿನ ಕಟ್ಟಡದಲ್ಲಿ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಯ ಮತ ಎಣಿಕೆ ಕಾರ್ಯ ಸೋಮವಾರ ನಡೆಯಲಿದ್ದು, ಸುಮಾರು 35 ನಿರ್ದೇಶಕರ ಭವಿಷ್ಯ ಬಹಿರಂಗವಾಗಲಿದೆ.
ಮತ ಎಣಿಕೆ ಹಿನ್ನೆಲೆಯಲ್ಲಿ ಜ.6ರ ಬೆಳಗ್ಗೆ 6ರಿಂದ ಮಧ್ಯ ರಾತ್ರಿ 12 ಗಂಟೆಯವರೆಗೆ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ ಕರ್ ತಿಳಿಸಿದ್ದಾರೆ.
ಕಾನೂನು ಭಂಗ ಉಂಟು ಮಾಡುವ ಉದ್ದೇಶದಿಂದ ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದು, ಮೆರವಣಿಗೆ ಮತ್ತು ಸಭೆ, ಸಮಾರಂಭ ನಡೆಸುವುದು, ಶಸ್ತ್ರ, ದೊಣ್ಣೆ, ಕತ್ತಿ, ಈಟಿ ಸೇರಿದಂತೆ ಮಾರಕಾಸ್ತ್ರ ಕೊಂಡೊಯ್ಯುವುದು ಹಾಗೂ ಸ್ಫೋಟಕ ಸಿಡಿಸುವುದು, ಪ್ರತಿಕೃತಿ ಪ್ರದರ್ಶನ ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ರಾಘವೇಂದ್ರ ಅವರು ಹೇಳಿದ್ದಾರೆ.
ಮದ್ಯ ಮಾರಾಟ ನಿಷೇಧ: ಒಕ್ಕಲಿಗರ ಸಂಘದ ಚುನಾವಣೆಯ ಮತ ಎಣಿಕೆಯ ಹಿನ್ನೆಲೆಯಲ್ಲಿ ಜ.6ರಂದು ಬೆಳಗ್ಗೆ 6ರಿಂದ ಮಧ್ಯರಾತ್ರಿ 12ಗಂಟೆಯವರೆಗೆ ದಕ್ಷಿಣ ವಿಭಾಗದ ಬನಶಂಕರಿ, ಕುಮಾರಸ್ವಾಮಿ ಲೇಔಟ್, ಸಿ.ಕೆ.ಅಚ್ಚುಕಟ್ಟು ಮತ್ತು ತ್ಯಾಗರಾಜ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲ ಮದ್ಯದಂಗಡಿಗಳನ್ನು ಮುಚ್ಚಲು ರಾಘವೇಂದ್ರ ಔರಾದ್ಕರ್ ಆದೇಶ ಹೊರಡಿಸಿದ್ದಾರೆ.
ಚುನಾವಣೆ ಅಕ್ರಮ: ಈ ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಬೆಂಗಳೂರು ನಗರ ಮತ್ತು ಜಿಲ್ಲಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವ್ಯವಸ್ಥೆಯಾಗಿದೆ ಎಂದು ಆರೋಪಿಸಿ ಚುನಾವಣಾ ಅಭ್ಯರ್ಥಿ ಎಂ.ಎನ್ ಪಿಳ್ಳಪ್ಪ ಎಂಬುವವರು ಸಿಟಿ ಸಿವಿಲ್ ಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

15 ನಿರ್ದೇಶಕರು ಆಯ್ಕೆ
ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಮತ್ತು ಹಾಸನ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರದ ಕಾವು ಹೆಚ್ಚಾಗಿದೆ. ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರದಿಂದ 15 ನಿರ್ದೇಶಕರು ಆಯ್ಕೆಯಾಗಲಿದ್ದಾರೆ.

ರಾಜ್ಯದ ಇತರೆಡೆ
ಮಂಡ್ಯದಿಂದ 4, ಮೈಸೂರು, ಕೋಲಾರ, ಹಾಸನ, ತುಮಕೂರು ಕ್ಷೇತ್ರಗಳಿಂದ ತಲಾ 3, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ ಕ್ಷೇತ್ರಗಳಿಂದ ತಲಾ 1 ಸ್ಥಾನಗಳಿಗೆ ಚುನಾವಣೆ ಭಾನುವಾರ ಚುನಾವಣೆ ನಡೆದಿದೆ.

ಐದು ಸಿಂಡಿಕೇಟ್ ಗಳು
ಒಕ್ಕಲಿಗರ ಸಂಘದ ಹಾಲಿ ಅಧ್ಯಕ್ಷ ಕೆಂಚಪ್ಪಗೌಡ, ಪ್ರೊ.ನಾಗರಾಜು, ಪ್ರೊ.ಕೆ.ಮಲ್ಲಯ್ಯ, ಅಪ್ಪಾಜಿಗೌಡ, ಕೆ.ವಿ.ಚಂದ್ರಶೇಖರ್ ಅವರ ನೇತೃತ್ವದಲ್ಲಿ ರಚಿಸಿಕೊಂಡಿರುವ ಐದು ಸಿಂಡಿಕೇಟ್ಗಳು ಸ್ಪರ್ಧಾ ಕಣದಲ್ಲಿವೆ. ನೂರಕ್ಕೂ ಹೆಚ್ಚು ಸ್ವತಂತ್ರ ಅಭ್ಯರ್ಥಿಗಳು, ವಕೀಲರು, ವೈದ್ಯರು, ಗೃಹಿಣಿಯರು, ಉದ್ಯಮಿಗಳು,ಶಾಸಕ, ಸಚಿವರುಗಳ ಬೆಂಬಲಿತ ಸ್ಪರ್ಧಿಗಳು ಕಣದಲ್ಲಿದ್ದಾರೆ.
ಪ್ರೊ.ಕೆ.ಮಲ್ಲಯ್ಯರ ಅಭ್ಯರ್ಥಿ
ಪ್ರೊ.ಕೆ.ಮಲ್ಲಯ್ಯರ ಅವರ ಸಿಂಡಿಕೇಟ್ ಗೆ ಸೇರಿರುವ ಶ್ರೀಮತಿ ಮಹದೇವಮ್ಮ ಅವರು ಯೂಟ್ಯೂಬ್ ಬಳಸಿ ಮತ ಪ್ರಚಾರ ಮಾಡಿದ್ದು ಹೀಗೆ.. ಮಹದೇವಮ್ಮ ಅವರಲ್ಲದೆ ಇನ್ನೂ ಅನೇಕ ಅಭ್ಯರ್ಥಿಗಳು ಯೂಟ್ಯೂಬ್, ಎಸ್ ಎಂಎಸ್, ಎಂಎಂಎಸ್, ಫೇಸ್ ಬುಕ್ ಸಂದೇಶಗಳ ಮೂಲಕ ಒಕ್ಕಲಿಗ ಸಮುದಾಯದ ಮತದಾರರನ್ನು ಸೆಳೆಯಲು ಯತ್ನಿಸಿದರು.

ಎಲ್ಲೆಡೆ ಫ್ಲೆಕ್ಸ್, ಬ್ಯಾನರ್ಸ್
ವಿಧಾನಸಭೆ ಚುನಾವಣೆ ಪ್ರಚಾರವನ್ನು ನಾಚಿಸುವಂತೆ ಒಕ್ಕಲಿಗರ ಸಂಘದ ಚುನಾವಣೆ ಪ್ರಚಾರ ನಡೆಸಲಾಗಿದೆ. ಬಿಬಿಎಂಪಿಯ ಕೃಪೆ ಪಡೆದು ಬೆಂಗಳೂರು ನಗರವನ್ನು ಚುನಾವಣಾ ಪ್ರಚಾರದ ಫ್ಲೆಕ್ಸ್ ಹಾಗೂ ಬ್ಯಾನರ್ ಗಳಿಂದ ಮುಚ್ಚಲಾಗಿದೆ.

ಮತ ಎಣಿಕೆ ಅಪ್ದೇಡ್
ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಭಾನುವಾರ ಬೆಳಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಿದೆ. ರಾಜ್ಯ ಸರ್ಕಾರ ಮುಖ್ಯ ಚುನಾವಣಾಧಿಕಾರಿಯನ್ನಾಗಿ ಬಿ.ಸಿ.ಸತೀಶ್ ಸೇರಿದಂತೆ 86 ಸಹಾಯಕ ಚುನಾವಣಾಧಿಕಾರಿಗಳು ಮತದಾನ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಿದ್ದಾರೆ.
ರಾಜ್ಯದ ಒಟ್ಟು 3 ಲಕ್ಷ 74 ಸಾವಿರದ 123 ಜನ ಸಂಘದ ಸದಸ್ಯರು ಮತದಾನ ಮಾಡಲಿದ್ದಾರೆ. ಬೆಂಗಳೂರಿನಲ್ಲೇ ಒಟ್ಟು 1 ಲಕ್ಷದ 15 ಸಾವಿರದ 373 ಜನ ಸದಸ್ಯರಿದ್ದಾರೆ. ಕಾರ್ಯಕಾರಿ ಸಮಿತಿಯ ಒಟ್ಟು 35 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಕಣದಲ್ಲಿ 254 ಜನ ಅಭ್ಯರ್ಥಿಗಳಿದ್ದು, 14 ಜಿಲ್ಲೆಗಳ 81 ಮತಕೇಂದ್ರಗಳಲ್ಲಿ ಮತದಾನ ನಡೆಯುತ್ತಿದೆ.
ಒಟ್ಟು ಮತಗಟ್ಟೆಗಳ ಸಂಖ್ಯೆ 699. ಇನ್ನು ಮತದಾನದಲ್ಲಿ 4 ಸಾವಿರದ 260 ಜನ ಚುನಾವಣಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭದ್ರತೆಗಾಗಿ 3 ಸಾವಿರದ 564 ಜನ ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ.












Click it and Unblock the Notifications