ತುರ್ತುಪರಿಸ್ಥಿತಿಯಲ್ಲಿ ಸೆರೆವಾಸ ಅನುಭವಿಸಿದವರಿಗೆ ವಿಜಯ ದಿವಸ
ಬೆಂಗಳೂರು, ಮಾರ್ಚ್ 21: ತುರ್ತು ಪರಿಸ್ಥಿತ ವಿರುದ್ಧ ಹೋರಾಡಿ ಜೈಲು ಸೇರಿದ ಹಿರಿಯರ ಸಭೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆಯಿತು.
ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ 1975 ಜುಲೈ 25 ರಂದು ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ದೇಶದಾದ್ಯಂತ ತುರ್ತುಪರಿಸ್ಥಿತಿ ಹೇರಿದ್ದರು.
'ನಿಜವಾದ ಅಸಹಿಷ್ಣುತೆ ಎಂದರೆ ತುರ್ತು ಪರಿಸ್ಥಿತಿ ಕಾಲ'
ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ದನಿ ಎತ್ತುವವರನ್ನೆಲ್ಲ ಜೈಲಿಗೆ ತಳ್ಳಲಾಗಿತ್ತು. ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿತ್ತು. ಅಕ್ಷರಶಃ ಸರ್ವಾಧಿಕಾರಿ ಆಡಳಿತ ಜಾರಿಗೆ ಬಂದಿತ್ತು. ಇದರ ವಿರುದ್ಧ ಹಲವು ದೇಶಪ್ರೇಮಿಗಳು ಧ್ವನಿ ಎತ್ತಿದ್ದರು, ತುರ್ತುಪರಿಸ್ಥಿತಿಯ ವಿರುದ್ಧ ಹೋರಾಟ ಆರಂಭಿಸಿದ್ದರು. ಇದರ ಫಲವಾಗಿ ಲಕ್ಷಾಂತರ ಜನರನ್ನು ಜೈಲಿಗೆ ತಳ್ಳಲಾಗಿತ್ತು.
ಹೀಗೆ ಜೈಲಿಗೆ ತೆರಳಿದ್ದ ನೂರಾರು ಜನರನ್ನು ಒಂದೆಡೆ ಸೇರಿಸಿ ಪ್ರತಿ ವರ್ಷ ಮಾರ್ಚ್ 21 ಅನ್ನು 'ವಿಜಯ ದಿವಸ್' ಎಂದು ಆಚರಿಸಲು ನಿರ್ಧರಿಸಲಾಗಿದ್ದು, ಅದರ ಮೊದಲ ಆಚರಣೆ ಇಂದು ನಡೆದಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಜನರ ನಿರಂತರ ಒತ್ತಡ, ಸರ್ಕಾರದ ವಿರುದ್ಧದ ಪ್ರತಿಭಟನೆಗೆ ಮಣಿದು ಮಾರ್ಚ್ 21, 1977 ರಂದು ಸರ್ಕಾರ ತುರ್ತು ಪರಿಸ್ಥಿತಿಯನ್ನು ಹಿಂಪಡೆದಿತ್ತು. ಇದನ್ನು ದೇಶಪ್ರೇಮಿಗಳಿಗೆ ಸಂದ ಜಯ ಎಂದು ಪರಿಗಣಿಸಲಾಗಿತ್ತು. ಈ ಸುದಿನದ ಸವಿನೆನಪಿಗಾಗಿ ಮಾ.21 ಅನ್ನು ವಿಜಯ ದಿವಸ್ ಎಂದು ಆಚರಿಸಲಾಯಿತು.
ಈ ಸಭೆಯಲ್ಲಿ ಹಿರಿಯ ಆರ್ ಎಸ್ ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್, ಮಾಜಿ ಮುಖ್ಯಮಂತ್ರಿ, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಂತಾದವರು ಉಪಸ್ಥಿತರಿದ್ದರು.