ಸೇಫ್ ಸಿಟಿ ಯೋಜನೆ ಟೆಂಡರ್ ನಲ್ಲಿ ಅಕ್ರಮ : ಪತ್ರ ತೆರೆದಿಟ್ಟ ಸತ್ಯ
ಬೆಂಗಳೂರು, ಡಿಸೆಂಬರ್ 27: ಕರ್ನಾಟಕ ಪೊಲೀಸ್ ಇಲಾಖೆಯ ಸೇಫ್ ಸಿಟಿ ಯೋಜನೆ ಸಂಬಂಧ ಕರೆದಿರುವ ಟೆಂಡರ್ ನಲ್ಲಿ ಏಳು ನೂರು ಕೋಟಿ ರೂಪಾಯಿ ಅಕ್ರಮ ನಡೆದಿರುವ ಬಗ್ಗೆ ಕ್ರಮ ಜರುಗಿಸುವಂತೆ ಕೋರಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಒಳಾಡಳಿತ ಇಲಾಖೆಯ ಅಪರ ಕಾರ್ಯದರ್ಶಿಗೆ ಪತ್ರ ಬರೆದಿರುವ ಸಂಗತಿ ಬೆಳಕಿಗೆ ಬಂದಿದೆ.
ಸೇಫ್ ಸಿಟಿ ಯೋಜನೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಗೃಹ ಇಲಾಖೆ ಕಾರ್ಯದರ್ಶಿ ಡಿ. ರೂಪಾ ಅವರು ಧ್ವನಿಯೆತ್ತಿದ್ದರು. ಇದಕ್ಕೆ ಸಂಬಂಧ ಪಟ್ಟಂತೆ ಸೇಫ್ ಸಿಟಿ ಯೋಜನೆ ಟೆಂಡರ್ ನಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿವೆ ಎಂದು ಭಾನುವಾರವಷ್ಟೇ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದರು. ಇದರ ಬೆನ್ನಲ್ಲೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಜಾಗೃತ ವಿಭಾಗದ ಅಧೀನ ಕಾರ್ಯದರ್ಶಿ ಅಕ್ರಮ ಕುರಿತು ಬರೆದಿರುವ ಪತ್ರ ಬಿರುಗಾಳಿ ಎಬ್ಬಿಸಿದೆ.
ಸೇಫ್ ಸಿಟಿ ಪ್ರಾಜೆಕ್ಟ್ ಟೆಂಡರ್ ನಲ್ಲಿ ಎಲ್ಲವೂ ಲೀಗಲ್ : ಹೇಮಂತ್ ನಿಂಬಾಳ್ಕರ್ ಸ್ಪಷ್ಟನೆ
ಪೊಲೀಸ್ ಇಲಾಖೆಯ ಸೇಫ್ ಸಿಟಿ ಯೋಜನೆ ಕುರಿತು ಅಖಿಲ ಭಾರತ ಭ್ರಷ್ಟಾಚಾರ ನಿರ್ಮೂಲನಾ ಸೊಸೈಟಿ ಪ್ರಧಾನ ಕಾರ್ಯದರ್ಶಿ ಶರದ್ ಅಜಾದ್ ಅವರು ಸಲ್ಲಿಸಿರುವ ದೂರನ್ನು ಉಲ್ಲೇಖಿಸಿರುವ ಅಧೀನ ಕಾರ್ಯದರ್ಶಿ ಅಂಜನಾಮೂರ್ತಿ ಅವರು, ಎರಡನೇ ಸುತ್ತಿನ ಟೆಂಡರ್ ಉಲ್ಲೇಖಿಸಿ( Tender for selection of service provider of design, implementation and maintenance of bengaluru safe city project Tender Ref No: STS (#) /MOD 1/2018-19/ Call 2) ಕುರಿತ ದೂರು ಅರ್ಜಿಯ ಬಗ್ಗೆ ಕ್ರಮ ಜರುಗಿಸಲು ಕೋರಿ ಒಳಾಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಅನಧಿಕೃತ ಟಿಪ್ಪಣಿ ಮೂಲಕ ಕೋರಿದ್ದಾರೆ. ಕಾಲ್ - 2 ನಲ್ಲಿ ಎರಡು ವಿವಿಧ ಉಪಕರಣ ಖರೀದಿಯಲ್ಲಿ ಸುಮಾರು 700 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ದೂರುದಾರ ಶರದ್ ಆಜಾದ್ ಆರೋಪಿಸಿದ್ದಾರೆ. ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆಧರಿಸಿ 2020 ಮಾರ್ಚ್ ನಲ್ಲಿಯೇ ದೂರು ಸಲ್ಲಿಸಲಾಗಿದೆ. ದೂರು ಅರ್ಜಿ ಪ್ರಾಥಮಿಕ ಪರಿಶೀಲನೆ ಬಳಿಕ ಸಿಬ್ಬಂದಿ ಮತ್ತು ಆಡಳಿತ ಇಲಾಖೆಯ ಜಾಗೃತ ದಳದ ವಿಭಾಗದಿಂದ ಒಳಾಡಳಿತ ಇಲಾಖೆಗೆ ಪತ್ರ ಬರೆಯಲಾಗಿದೆ.
Recommended Video
ಬೆಂಗಳೂರು ಸೇಫ್ ಸಿಟಿ ಯೋಜನೆ ಸಂಬಂಧ ಕರೆದಿರುವ ಟೆಂಡರ್ ನಲ್ಲಿ ಅಕ್ರಮ ನಡೆದಿರುವ ಬಗ್ಗೆ ದೂರು ಬಂದಿದ್ದು, ಇದು ಒಳಾಡಳಿತ ಇಲಾಖೆಗೆ ಸಂಬಂಧಿಸಿದ ಅಕ್ರಮವಾಗಿರುವ ಕಾರಣ ಸೂಕ್ತ ಕ್ರಮ ಜರುಗಿಸಿ ಈ ಕುರಿತ ವರದಿಯನ್ನು ಅರ್ಜಿದಾರರಿಗೆ ನೇರವಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ. ಒಳಾಡಳಿತ ಇಲಾಖೆಗೆ ಬರೆದಿರುವ ಪತ್ರದ ಪ್ರತಿ ಒನ್ ಇಂಡಿಯಾ ಕನ್ನಡಕ್ಕೆ ಲಭ್ಯವಾಗಿದೆ. ದೂರು ಸ್ವೀಕರಿಸಿದ ಒಂದೇ ತಿಂಗಳಲ್ಲಿ ಒಳಾಡಳಿತ ಇಲಾಖೆಗೆ ಅನಧಿಕೃತ ಟಿಪ್ಪಣಿ ರವಾನಿಸಲಾಗಿದೆ. ಆದರೆ, ಕಾಲ್ - 2 ಗೆ ಸಂಬಂಧಿಸಿದ ಟೆಂಡರ್ ರದ್ದು ಪಡಿಸಿರುವುದಾಗಿ ಇವತ್ತಿನ ಸುದ್ದಿಗೋಷ್ಠಿಯಲ್ಲಿ ನಿಂಬಾಳ್ಕರ್ ಸ್ಪಷ್ಟನೆ ನೀಡಿರುವುದರಿಂದ, ಇದರ ಇನ್ನಷ್ಟು ಸತ್ಯಾಂಶಗಳನ್ನು ಒಳಾಡಳಿತ ಇಲಾಖೆ ಜನರ ಮುಂದಿಡುವ ಅಗತ್ಯವಿದೆ.