ಜೀವನ್ಮರಣ ಹೋರಾಟದಲ್ಲಿರುವ ಗಜರಾಜ ಸಿದ್ದನಿಗಾಗಿ ಪ್ರಾರ್ಥನೆ
ಮಂಚನಬೆಲೆ ಜಲಾಶಯದ ಹಿನ್ನೀರಿನಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ಆನೆ ಸಿದ್ದನಿಗೆ ಕೊನೆಗೂ ಚಿಕಿತ್ಸೆ ಭಾಗ್ಯವನ್ನು ಕರ್ನಾಟಕ ಸರ್ಕಾರ ಕರುಣಿಸಿದೆ.
ಬೆಂಗಳೂರು, ಅಕ್ಟೋಬರ್ 21: ಮಂಚನಬೆಲೆ ಜಲಾಶಯದ ಹಿನ್ನೀರಿನಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ಆನೆ ಸಿದ್ದನಿಗೆ ಕೊನೆಗೂ ಚಿಕಿತ್ಸೆ ಭಾಗ್ಯವನ್ನು ಕರ್ನಾಟಕ ಸರ್ಕಾರ ಕರುಣಿಸಿದೆ. ಬನ್ನೇರುಘಟ್ಟದ ಪಶು ವೈದ್ಯರ ಜೊತೆ ಕೇರಳ ಹಾಗೂ ಅಸ್ಸಾಂನಿಂದ ಬಂದಿರುವ ತಜ್ಞರು ಸಿದ್ದನ ಆರೈಕೆ ಮಾಡುತ್ತಿದ್ದಾರೆ. ಆದರೆ, ಜೀವನ್ಮರಣ ಹೋರಾಟದಲ್ಲಿರುವ ಸಿದ್ದ ಆಹಾರ ಸೇವನೆ ನಿಲ್ಲಿಸಿದ್ದು, ಚಿಕಿತ್ಸೆ ಬಳಿಕವೂ ಬದುಕುಳಿಯುವುದು ಕಷ್ಟ ಎನ್ನಲಾಗಿದೆ.
ಆಗಸ್ಟ್ 30ರಂದು ಸಾವನದುರ್ಗ ಕಾಡಿನಿಂದ ಬನ್ನೇರುಘಟ್ಟ ಅರಣ್ಯದ ಕಡೆಗೆ ಆಹಾರ ಹುಡುಕಿಕೊಂಡು ಬರುತ್ತಿದ್ದ ಸಿದ್ದ ಮಾರ್ಗ ಮಧ್ಯದಲ್ಲಿ ಗೋಪಾಲಪುರದ ಬಳಿಯ ಕಾಲುವೆಯಲ್ಲಿ ಗಾಯಗೊಂಡಿದ್ದ.[ವಿಡಿಯೋ: ನದಿಗೆ ಬಿದ್ದ ಮಾನವನನ್ನು ರಕ್ಷಿಸಿದ ಆನೆಮರಿ]
ಸಿದ್ದನ ಬಲಗಾಲಿಗೆ ಬಲವಾದ ಪೆಟ್ಟಾಗಿತ್ತು. ಸಿದ್ದನನ್ನು ಮಾಗಡಿಯ ಮಂಚನಬೆಲೆ ಜಲಾಶಯದ ಹಿನ್ನೀರಿಗೆ ತಂದು ಬಿಟ್ಟ ಅರಣ್ಯ ಇಲಾಖೆ ಸಿಬ್ಬಂದಿ, ಚಿಕಿತ್ಸೆ ನೀಡಿದ್ದರು. ಆದರೆ, ಸೂಕ್ತ ಚಿಕಿತ್ಸೆ ತುರ್ತಾಗಿ ಅಗತ್ಯವಿತ್ತು.[ಕರ್ನಾಟಕದ ಆನೆಗಳಿಗೂ ಆಧಾರ್ ಸಂಖ್ಯೆ]
ಈ ಬಗ್ಗೆ ವಿಜ್ಞಾನಿ ನಾಗೇಶ ಹೆಗಡೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಾರ್ವಜನಿಕರನ್ನು ಜಾಗೃತಗೊಳಿಸಿದರು. ಇದಾದ ಬಳಿಕ ಕೊನೆಗೂ ಎಚ್ಚೆತ್ತುಕೊಂಡ ಸರ್ಕಾರ, ಡಾ. ಕುಶಾಲ್ ಶರ್ಮ, ಡಾ ಅರುಣ್ ಝಕಾರಿಯಾ ನೇತೃತ್ವದ ಪ್ರಾಣಿ ತಜ್ಞರ ತಂಡವನ್ನು ಸಿದ್ದನ ಆರೈಕೆಗೆ ನಿಯೋಜಿಸಿದೆ. [ದಸರಾ ಮುಗಿದ ಖುಷಿಯಲ್ಲಿ ಗಜಪಡೆ ಮಾವುತರು]
ಥಾಯ್ಲೆಂಡ್, ಕಾಂಬೋಡಿಯಾ, ಬರ್ಮಾ ಗಡಿಯಲ್ಲಿ ನೆಲಬಾಂಬಿಗೆ ಸಿಕ್ಕು ಇಡೀ ಕಾಲನ್ನೇ ಕಳೆದುಕೊಂಡ ಆನೆಗಳಿಗೆ ಶುಶ್ರೂಷೆ ನೀಡಿ, ಕೃತಕ ಕಾಲುಗಳನ್ನು ಕೊಟ್ಟ ಎಷ್ಟೊಂದು ಸಾಹಸಿ ಉದಾಹರಣೆಗಳು ಅಂತರಜಾಲದಲ್ಲಿವೆ. ನಾವೂ ಅಂಥದ್ದೊಂದು ಸಾಹಸಕ್ಕೆ ಪ್ರೇರಣೆ ನೀಡೋಣ ಬನ್ನಿ. ಸಿದ್ದನನ್ನು ನಡುನೀರಲ್ಲಿ ಕೈಬಿಡಬೇಡಿ' ಎಂದು ಡಾ. ನಾಗೇಶ್ ಹೆಗಡೆ ಬರೆದುಕೊಂಡಿದ್ದರು.