ಜ್ಯೋತಿಷಿ ರಾಮಸ್ವಾಮಿ ದೇವಿಶ್ರೀ ರಾಸಲೀಲೆ ಬಹಿರಂಗ
ಬೆಂಗಳೂರು, ಏ. 26 : ಮಹಿಳೆಯೊಬ್ಬರೊಂದಿಗೆ ಜ್ಯೋತಿಷಿಯೊಬ್ಬರು ರಾಸಲೀಲೆಯಾಡುತ್ತಿರುವ ವಿಡಿಯೋ ಕ್ಲಿಪ್ಪಿಂಗ್ ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ರೊಚ್ಚಿಗೆದ್ದಿರುವ ಕನ್ನಡಪರ ಹೋರಾಟಗಾರರು ಬೆಂಗಳೂರಿನ ಎಚ್ಎಸ್ಆರ್ ಬಡಾವಣೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಜ್ಯೋತಿಷಿಗೆ ಸೇರಿದ ಓಮ್ನಿ ಕಾರನ್ನು ಜಖಂ ಮಾಡಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೆ ಹೊಸಹಳ್ಳಿ ಎಂಬ ಗ್ರಾಮದ ನಿವಾಸಿಯಾಗಿರುವ 40ರ ಆಸುಪಾಸಿನ ರಾಮಸ್ವಾಮಿ ದೇವಿಶ್ರೀ ಎಂಬ ಜ್ಯೋತಿಷಿ ಬೆಂಗಳೂರಿನ ಎಚ್ಎಸ್ಆರ್ ಬಡಾವಣೆಯ 26ನೇ 'ಬಿ' ಮತ್ತು 27ನೇ ಮುಖ್ಯರಸ್ತೆಯಲ್ಲಿ ಮನೆ ಮಾಡಿ ಜ್ಯೋತಿಷ್ಯಾಲಯ ಇಟ್ಟುಕೊಂಡಿದ್ದ. ಸಾಕಷ್ಟು ಹೆಸರು ಮತ್ತು ಹಣ ಕೂಡ ಗಳಿಸಿಕೊಂಡಿದ್ದ.
ದೇವಿಶ್ರೀ ಕೋಲಾರದ ಮೂಲದವರಾದರೂ ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಕೆಲ ಖಾಸಗಿ ವಾಹಿನಿಗಳಲ್ಲಿ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಕೂಡ ನಡೆಸಿಕೊಡುತ್ತಿದ್ದರು. ಆದರೆ, ಶನಿವಾರ ಬೆಳಿಗ್ಗೆ, ದೇವಿಶ್ರೀ ಅವರು ಜೀನ್ಸ್ ತೊಟ್ಟಿದ್ದ ಮಹಿಳೆಯೊಬ್ಬರ ತುಟಿಗೆ ಮುತ್ತಿಡುತ್ತಿರುವ ದೃಶ್ಯಾವಳಿ ಪ್ರಸಾರವಾಗುತ್ತಿದ್ದಂತೆ ಕನ್ನಡಪರ ಸಂಘಟನೆಗಳು ಅವರ ವಿರುದ್ಧ ಹೋರಾಟಕ್ಕಿಳಿದಿವೆ.

ಈ ದೃಶ್ಯಾವಳಿ ಯಾವುದೋ ಚಾನಲ್ ನಡೆಸಿದ ಸ್ಟಿಂಗ್ ಆಪರೇಷನ್ ಪರಿಣಾಮವಲ್ಲ. ಆತನಿದ್ದ ಜ್ಯೋತಿಷ್ಯಾಲಯದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದೆ. ಈ ವಿಡಿಯೋ ತುಣುಕನ್ನು ಮಾಧ್ಯಮಗಳಿಗೆ ರವಾನಿಸಲಾಗಿದೆ. ಸುಶಿಕ್ಷಿತಳಂತೆ ಕಾಣಿಸುವ ಮಹಿಳೆಗೆ ಮುತ್ತಿಡುತ್ತಿರುವ, ಹಿಂದಿನಿಂದ ತಬ್ಬಿಕೊಳ್ಳುವ ದೃಶ್ಯಾವಳಿ ಪ್ರಸಾರವಾಗುತ್ತಿದ್ದಂತೆ ಜ್ಯೋತಿಷಿ ದೇವಿಶ್ರೀ ಪರಾರಿಯಾಗಿದ್ದಾರೆ.
ಜ್ಯೋತಿಷ್ಯಾಲಯದ ಮುಂದೆ ಕನ್ನಡಪರ ಹೋರಾಟಗಾರರು ಜಮಾಯಿಸಿದ್ದು, ದೇವಿಶ್ರೀ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಆತನನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಕೆಲ ಮಹಿಳೆಯರು ಕೂಡ ತಮಗೆ ಜ್ಯೋತಿಷಿಯಿಂದ ಅನ್ಯಾಯವಾಗಿದೆ ಎಂದು ಟಿವಿ ಚಾನಲ್ಲುಗಳಲ್ಲಿ ಅಲವತ್ತುಕೊಳ್ಳುತ್ತಿದ್ದಾರೆ.
ಮಧ್ಯವಯಸ್ಕ ಜ್ಯೋತಿಷಿಗೆ ಮದುವೆಯಾಗಿದ್ದು, ಇಬ್ಬರು ಹೆಣ್ಣುಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಹೆಂಡತಿ ಮತ್ತು ಮಕ್ಕಳು ಆತನನ್ನು ಗುರೂಜಿ ಎಂದೇ ಸಂಬೋಧಿಸುತ್ತಾರೆ ಎಂದು ಕೂಡ ತಿಳಿದುಬಂದಿದೆ. ಕೋಲಾರದ ಕೆ. ಹೊಸಹಳ್ಳಿಯಲ್ಲಿಯ ಮನೆಗೆ ಕೂಡ ಬೀಗ ಜಡಿಯಲಾಗಿದೆ. ದೇವಿಶ್ರೀ ಶಾಂತಮಲೈ ಅಯ್ಯಪ್ಪ ದೇವಸ್ಥಾನದಲ್ಲಿ ಈ ಮೊದಲು ಅರ್ಚಕನಾಗಿದ್ದ.
ಚಾಲಕನ ಕೈಚಳಕ : ದೇವಿಶ್ರೀ ಕಾರಿನ ಚಾಲಕ ಈ ವಿಡಿಯೋ ಬಳಸಿ ಜ್ಯೋತಿಷಿಯ ಬ್ಲಾಕ್ ಮೇಲ್ ಮಾಡುತ್ತಿದ್ದ. ದೇವಿಶ್ರೀಯಿಂದ 10 ಲಕ್ಷ ರು. ಬೇಡಿಕೆ ಇಟ್ಟಿದ್ದ. ಮೊದಲ ಕಂತಾಗಿ 5 ಲಕ್ಷ ರು. ದೇವಿಶ್ರೀ ಚಾಲಕನಿಗೆ ಕೊಟ್ಟಿದ್ದ. ಆದರೆ ಉಳಿದ 5 ಲಕ್ಷ ರು. ಕೊಡಲು ನಿರಾಕರಿಸಿದ್ದರಿಂದ ಚಾಲಕನೇ ಮಾಧ್ಯಮಗಳಿಗೆ ವಿಡಿಯೋ ಬಿಡುಗಡೆ ಮಾಡಿದ್ದಾನೆ.
ಕಾರ್ಯಕ್ರಮ ರದ್ದು : ಮಲ್ಲೇಶ್ವರ ವೃತ್ತದಲ್ಲಿರುವ ಮೈದಾನದಲ್ಲಿ ರಾಮಸ್ವಾಮಿ ದೇವಿಶ್ರೀ ಗುರೂಜಿ ಭಾನುವಾರ ಬೆಳಿಗ್ಗೆ 'ರುದ್ರಾಭಿಷೇಕ' ಕಾರ್ಯಕ್ರಮ ಆಯೋಜಿಸಿದ್ದ. ಆದರೆ, ವಿಡಿಯೋ ಬಹಿರಂಗವಾಗಿರುವ ಮತ್ತು ಆತ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮ ರದ್ದಾಗಿದೆ. ರುದ್ರಾಭಿಷೇಕ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತಾದಿಗಳು ಭಾಗವಹಿಸುವವರಿದ್ದರು.












Click it and Unblock the Notifications