ಬೆಂಗಳೂರು ಪ್ರವೇಶಿಸದಂತೆ ಪ್ರವೀಣ್ ತೊಗಾಡಿಯಾಗೆ ನಿಷೇಧ
ಬೆಂಗಳೂರು, ಫೆ.3 : ಬೆಂಗಳೂರಿನಲ್ಲಿ ನಡೆಯುವ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳದಂತೆ ವಿಶ್ವ ಹಿಂದೂ ಪರಿಷತ್ನ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರಿಗೆ ಬೆಂಗಳೂರು ಪೊಲೀಸರು ನಿಷೇಧ ಹೇರಿದ್ದಾರೆ. ಪ್ರಚೋದನಾಕಾರಿ ಭಾಷಣ ಮಾಡಬಹುದು ಎಂಬ ಮಾಹಿತಿ ಹಿನ್ನಲೆಯಲ್ಲಿ ನಗರ ಪ್ರವೇಶ ನಿಷೇಧಿಸಲಾಗಿದೆ.
ಮಂಗಳವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಈ ಆದೇಶದ ಅನ್ವಯ ಫೆ.5ರಿಂದ 10ರ ವರೆಗೆ ಪ್ರವೀಣ್ ತೊಗಾಡಿಯಾ ಅವರು ಬೆಂಗಳೂರು ನಗರಕ್ಕೆ ಪ್ರವೇಶಿಸುವಂತಿಲ್ಲ.

ಬೆಂಗಳೂರು ನಗರದಲ್ಲಿ ಫೆ.8ರಂದು ಹಿಂದೂ ಸಮಾಜೋತ್ಸವ ನಡೆಯಲಿದೆ. ಪ್ರವೀಣ್ ತೊಗಾಡಿಯಾ ಅವರು ಇದರಲ್ಲಿ ಪಾಲ್ಗೊಳ್ಳಬೇಕಿತ್ತು. ಇಲ್ಲಿ ಪ್ರಚೋದನಾಕಾರಿ ಭಾಷಣ ಮಾಡಬಹುದು ಎಂಬ ಹಿನ್ನಲೆಯಲ್ಲಿ ನಗರ ಪ್ರವೇಶಿಸದಂತೆ ನಿಷೇಧ ಹೇರಲಾಗಿದೆ. [ಫೆ.8ರಂದು ಬೆಂಗಳೂರಿನಲ್ಲಿ ಹಿಂದೂ ಸಮಾಜೋತ್ಸವ]
ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಫೆ.8ರಂದು ಹಿಂದೂ ಸಮಾಜೋತ್ಸವ ನಡೆಯಲಿದೆ. ಪ್ರವೀಣ್ ತೊಗಾಡಿಯಾ ಅವರು ಇದರಲ್ಲಿ ಪಾಲ್ಗೊಂಡು ಭಾಷಣ ಮಾಡಬೇಕಿತ್ತು. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಪೊಲೀಸರು ಅವರ ನಗರ ಭೇಟಿಯನ್ನು ನಿಷೇಧಿಸಿದ್ದಾರೆ.
ಒವೈಸಿ ಸಮಾವೇಶಕ್ಕೆ ಅನುಮತಿ ಇಲ್ಲ : ಫೆ.8ರಂದು ಅಸಾವುದ್ದೀನ್ ಒವೈಸಿ ನೇತೃತ್ವದ ಎಂಐಎಂ ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಸಮಾವೇಶಕ್ಕೆ ಅನುಮತಿ ನೀಡಲು ಬೆಂಗಳೂರು ಪೊಲೀಸರು ನಿರಾಕರಿಸಿದ್ದರು. ಸಿಬ್ಬಂದಿ ಕೊರತೆ ಇದೆ ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸಮಾವೇಶದ ದಿನಾಂಕವನ್ನು ಮುಂದೂಡುವಂತೆ ನಿರ್ದೇಶನ ನೀಡಿದ್ದರು.[ಒವೈಸಿ ಸಮಾವೇಶಕ್ಕೆ ಪೊಲೀಸರು ಒಪ್ಪಿಗೆ ನೀಡಿಲ್ಲ]
ಮಜ್ಲಿಸ್-ಎ-ಇತ್ತ್ ಹಾದುಲ್ ಮುಸ್ಲಿಮೀನ್ (ಎಂಐಎಂ) ಮುಖ್ಯಸ್ಥ ಅಸಾವುದ್ದೀನ್ ಒವೈಸಿ ಅವರು ಮುಂಬರುವ ಬಿಬಿಎಂಪಿ ಚುನಾವಣೆ ಹಿನ್ನಲೆಯಲ್ಲಿ ಫೆಬ್ರವರಿ 8ರಂದು ಶಿವಾಜಿನಗರದಲ್ಲಿರುವ ಚೋಟಾ ಮೈದಾನದಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಿದ್ದರು. ಆದರೆ, ಅಂದು ಹಿಂದೂ ಸಮಾಜೋತ್ಸವವಿರುವ ಕಾರಣ ಅನುಮತಿ ನೀಡಲು ಸಾಧ್ಯವಿಲ್ಲ, ಸಮಾವೇಶದ ದಿನಾಂಕವನ್ನು ಬದಲಾವಣೆ ಮಾಡುವಂತೆ ಪೊಲೀಸರು ಸೂಚಿಸಿದ್ದರು.












Click it and Unblock the Notifications