ಬೆಂಗಳೂರಿನ ಈ ಮಾರ್ಗದಲ್ಲಿ 30 ದಿನ ವಾಹನ ಸಂಚಾರ ನಿಷೇಧ: ಪರ್ಯಾಯ ಮಾರ್ಗಗಳ ವಿವರ ತಿಳಿಯಿರಿ
ಬೆಂಗಳೂರು, ಏಪ್ರಿಲ್, 5: ಕಾಮಗಾರಿ ನಡೆಯುವಂತಹ ಮಾರ್ಗಗಳಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗುತ್ತದೆ. ಹಾಗೆಯೇ ಇದೀಗ ಬೆಂಗಳೂರಿನ ಈ ಮಾರ್ಗದಲ್ಲಿ ಏಪ್ರಿಲ್ 5ರಿಂದ ಒಂದು ತಿಂಗಳು ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹಾಗಾದ್ರೆ ಕಾರಣ ಏನು ಹಾಗೂ ಪರ್ಯಾಯ ಮಾರ್ಗಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬೆಂಗಳೂರು ಆನಂದರಾವ್ ವೃತ್ತ ಮತ್ತು ಮೇಲ್ಸೇತುವೆ ಕಡೆಯಿಂದ ಹಳೇ ಜೆಡಿಎಸ್ ಕಚೇರಿ, ಸಿ. ರಂಗಸ್ವಾಮಿ ವೃತ್ತದ ವರೆಗಿನ ಲೂಪ್ ರಸ್ತೆಯಲ್ಲಿ ವೈಟ್ಟಾಪಿಂಗ್ ಕಾರ್ಯ ಆರಂಭ ಆಗಿದೆ. ಆದ್ದರಿಂದ ಇಂದಿನಿಂದ 30 ದಿನ ಅಂದರೆ ಮೇ 5ರ ವರೆಗೂ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಇನ್ನು ಈ ರಸ್ತೆ ಕಡೆಗೆ ಸಂಚರಿಸುವ ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ಬೆಂಗಳೂರು ಸಂಚಾರ ಪೊಲೀಸರು ಸೂಚಿಸಿದ್ದಾರೆ.

ಪರ್ಯಾಯ ಮಾರ್ಗಗಳ ವಿವರ: ಆನಂದ ರಾವ್ ವೃತ್ತದ ಮೇಲ್ಸೇತುವೆ ಕಡೆಯಿಂದ ಚಾಲುಕ್ಯ ವೃತ್ತದ ಕಡೆಗೆ ಹೋಗಲು ಲಘು ಹಾಗೂ ಭಾರಿ ವಾಹನ ಸವಾರರು ಶೇಷಾದ್ರಿ ರಸ್ತೆಯಲ್ಲಿ ಚಲಿಸಿ ಮಹಾರಾಣಿ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಸಿಐಡಿ ಜಂಕ್ಷನ್-ಚಾಲುಕ್ಯ ವೃತ್ತದ ಮುಖಾಂತರ ವಿಧಾನಸೌಧದ ಕಡೆಗೆ, ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ಪೋರ್ಟ್ ಕಡೆಗೆ, ಶಿವಾಜಿನಗರದ ಕಡೆಗೆ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಕಡೆಗೆ ಸಂಚಾರ ಮಾಡಬಹುದು.
ಆನಂದ್ ರಾವ್ ವೃತ್ತದಿಂದ ಮಾಧವನಗರ, ಶೇಷಾದ್ರಿಪುರಕ್ಕೆ: ಆನಂದ ರಾವ್ ವೃತ್ತದ ಮೇಲ್ಸೇತುವೆ ಕಡೆಯಿಂದ ಶೇಷಾದ್ರಿ ರಸ್ತೆಯಲ್ಲಿ ಚಲಿಸಿ ಮಹಾರಾಣಿ ಜಂಕ್ಷನ್ಲ್ಲಿ ಎಡ ತಿರುವು ಪಡೆದು ಸಿಐಡಿ ಜಂಕ್ಷನ್-ಚಾಲುಕ್ಯ ವೃತ್ತದಲ್ಲಿ ಎಡ ತಿರುವು ಪಡೆದು ರೇಸ್ ಕೋರ್ಸ್ ರಸ್ತೆಯಲ್ಲಿ ಚಲಿಸಿ ಟ್ರಿಲೈಟ್ ಜಂಕ್ಷನ್ ಬಲ ತಿರುವು ಪಡೆದು ಶಿವಾನಂದ ವೃತ್ತದ ಮೂಲಕ ಲಘು ಮತ್ತು ಭಾರಿ ವಾಹನ ಚಾಲಕರು ಸಂಚಾರ ಮಾಡಬಹುದು.
ಆನಂದ್ ರಾವ್ ವೃತ್ತದಿಂದ ಮಾಧವ ನಗರ, ಶೇಷಾದ್ರಿಪುರ, ರೇಸ್ಕೋರ್ಸ್ ರಸ್ತೆ, ಕುಮಾರಕೃಪಾ ರಸ್ತೆ ಕಡೆಗೆ ಹೋಗುವವರಿಗೆ ಪರ್ಯಾಯ ಮಾರ್ಗಗಳನ್ನು ಇಲ್ಲಿ ನೀಡಲಾಗಿದೆ. ಲಘು ವಾಹನ ಸವಾರರು ಆನಂದರಾವ್ ವೃತ್ತದ ಕಡೆಯಿಂದ ಶೇಷಾದ್ರಿ ರಸ್ತೆಯಲ್ಲಿ ಚಲಿಸಿ ಮೌರ್ಯ ಜಂಕ್ಷನ್ ಸುಬ್ಬಣ್ಣ ವೃತ್ತದಲ್ಲಿ ಎಡ ತಿರುವು ಪಡೆದು ರೇಸ್ ಕೋರ್ಸ್ ರಸ್ತೆಯ ಮೂಲಕ ಹಳೇ ಜೆಡಿಎಸ್ ಕಚೇರಿ, ಸಿ.ರಂಗಸ್ವಾಮಿ ವೃತ್ತಕ್ಕೆ ಬಂದು ಬಲ ತಿರುವು ಪಡೆದು ಕುಮಾರಕೃಪಾ ರಸ್ತೆ, ರೇಸ್ ಕೋರ್ಸ್ ರಸ್ತೆಯ ಕಡೆಗೆ ಸಂಚರಿಸಬಹುದು.
ಇನ್ನು ಹಳೇ ಜೆಡಿಎಸ್ ಕಚೇರಿ, ಸಿ.ರಂಗಸ್ವಾಮಿ ವೃತ್ತದಲ್ಲಿ ನೇರವಾಗಿ ಯಮುನಾಬಾಯಿ ರಸ್ತೆಯ ಮೂಲಕ ನೆಹರು ನಗರ, ಕುಮಾರ ಪಾರ್ಕ್ ಈಸ್ಟ್-ವೆಸ್ಟ್ ಕಡೆಗೆ ಸಹ ಸಂಚರಿಸಬಹುದು. ಇನ್ನು ಭಾರಿ ವಾಹನಗಳು ಆನಂದ್ ರಾವ್ ವೃತ್ತದಿಂದ ಶೇಷಾದ್ರಿ ರಸ್ತೆಯಲ್ಲಿ ಚಲಿಸಿ ಮೌರ್ಯ ಜಂಕ್ಷನ್ ಸುಬ್ಬಣ್ಣ ವೃತ್ತದಲ್ಲಿ ಎಡ ತಿರುವು ಪಡೆದು ರೇಸ್ ಕೋರ್ಸ್ ರಸ್ತೆಯ ಮೂಲಕ ಹಳೇ ಜೆಡಿಎಸ್ ಕಚೇರಿ, ಸಿ.ರಂಗಸ್ವಾಮಿ ವೃತ್ತಕ್ಕೆ ಬಂದು ಬಲತಿರುವು ಪಡೆದು ರೇಸ್ ಕೋರ್ಸ್ ರಸ್ತೆಗೆ ತಲುಪಬಹುದು.
ಆನಂದರಾವ್ ಜಂಕ್ಷನ್ನಲ್ಲಿ ವೈಟ್ ಟಾಪಿಂಗ್ ಕೆಲಸ ನಡೆಯುತ್ತಿರುವುದರಿಂದ ಮೌರ್ಯ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.












Click it and Unblock the Notifications