Towing: ಮುಂದಿನ ವಾರವೇ ಬೆಂಗಳೂರಿನಲ್ಲಿ ವಾಹನಗಳ ಟೋಯಿಂಗ್ ಆರಂಭ
ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಮತ್ತು ಅಕ್ರಮವಾಗಿ ನಿಲುಗಡೆ ಮಾಡಲಾದ ಹಾಗೂ ಅನಾಥ ವಾಹನಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಟೋಯಿಂಗ್ ವಾಹನಗಳನ್ನು ಪಡೆದುಕೊಳ್ಳಲು ಉದ್ದೇಶಿಸಲಾಗಿದೆ. ಈ ಸಂಬಂಧ ಬೆಂಗಳೂರಿನ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ದಂಡ ಹಾಕಲು ತೀರ್ಮಾನಿಸಲಾಗಿದೆ.
ಶನಿವಾರ ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ಟೋಯಿಂಗ್ ವಾಹನ ಪರಿಶೀಲನಾ ಕಾರ್ಯವನ್ನು ಇಂದು ಪಾಲಿಕೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತ ಟೋಯಿಂಗ್ ವಾಹನ ಪರಿಶೀಲನಾ ಕಾರ್ಯದಲ್ಲಿ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರು ಭಾಗವಹಿಸಿ, ಟೋಯಿಂಗ್ ವಾಹನಗಳ ಕಾರ್ಯ ನಿರ್ವಹಣೆಯನ್ನು ವೀಕ್ಷಿಸಿದರು. ಮುಂದಿನ ವಾರದಿಂದಲೇ ಪಾಲಿಕೆ ವ್ಯಾಪ್ತಿಯಲ್ಲಿ ವಾಹನಗಳ ಟೋಯಿಂಗ್ ಜಾರಿ ಮಾಡಲಾಗುವುದು ಎಂದರು.

ಟೋಯಿಂಗ್ ವಾಹನಗಳ ಬಾಡಿಕೆ
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲು ಒಟ್ಟು 6 ಟೋಯಿಂಗ್ ವಾಹನಗಳನ್ನು ಬಾಡಿಗೆಗೆ ಪಡೆಯಲಾಗಿದೆ. ವಾಹನಗಳ ಕಾರ್ಯಕ್ಷಮತೆ ಮತ್ತು ಗುತ್ತಿಗೆದಾರರ ಅರ್ಹತೆಯನ್ನು ಪರಿಶೀಲಿಸಿದ ನಂತರ, ಮುಂದಿನ ವಾರದಿಂದ ಈ ವಾಹನಗಳು ಅಧಿಕೃತವಾಗಿ ಟ್ರಾಫಿಕ್ ಪೊಲೀಸರ ಉಸ್ತುವಾರಿಯಲ್ಲಿ ರಸ್ತೆಗಿಳಿದು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.
ತಪ್ಪಲಿದೆ ರಸ್ತೆ ಅಡೆತಡೆ, ಪಾರ್ಕಿಂಗ್ ಕಿರಿಕಿರಿ
ಅನವಶ್ಯಕ ಪಾರ್ಕಿಂಗ್ ವಾಹನಗಳಿಂದ ಉಂಟಾಗುತ್ತಿದ್ದ ಕಿರಿಕಿರಿಯನ್ನು, ರಸ್ತೆಗಳಲ್ಲಿನ ಅಡೆತಡೆಗಳನ್ನು ನಿವಾರಿಸಿ ಸುಗಮ ಸಂಚಾರಕ್ಕೆ ಟೋಯಿಂಗ್ ವಾಹನಗಳು ಸಹಕಾರಿಯಾಗಲಿವೆ ಎಂದು ತಿಳಿಸುತ್ತಾ, ವಾಹನ ಸವಾರರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜನಗಣತಿ: ಗೈರು ಅಧಿಕಾರಿಗಳಿಗೆ ಎಚ್ಚರಿಕೆ
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯಲಿರುವ ಭಾರತದ ರಾಷ್ಟ್ರೀಯ ಜನಗಣತಿ-2027 ಕಾರ್ಯದ ಅಂಗವಾಗಿ ಗಣತಿದಾರರು ಮತ್ತು ಮೇಲ್ವಿಚಾರಕರಾಗಿ ನೇಮಕಗೊಂಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಎಲ್ಲಾ ಅಧಿಕಾರಿ ಮತ್ತು ನೌಕರರುಗಳು ಈ ಕೂಡಲೇ ತಮಗೆ ನಿಯೋಜಿಸಿರುವ ಗಣತಿ ಬ್ಲಾಕ್ ಹಾಗೂ ಮೇಲ್ವಿಚಾರಕರ ಸರ್ಕಲ್ ಗಳಲ್ಲಿ ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸುವಂತೆ ಆಯುಕ್ತರು ಹಾಗೂ ಪ್ರಧಾನ ಜನಗಣತಿ ಅಧಿಕಾರಿ ಡಿ.ಎಸ್.ರಮೇಶ್ ತಿಳಿಸಿದರು.
ಗಣತಿದಾರರು, ಮೇಲ್ವಿಚಾರಕರಿಗೆ ಅಂತಿಮ ಕರೆ
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ 3,373-ಗಣತಿದಾರರು ಮತ್ತು 557-ಮೇಲ್ವಿಚಾರಕರನ್ನು ರಾಷ್ಟ್ರೀಯ ಜನಗಣತಿ 2027ರ ಕಾರ್ಯಕ್ಕೆ ಈಗಾಗಲೇ ನಿಯೋಜಿಸಿ ಆದೇಶಿಸಲಾಗಿದೆ. ನಿಯೋಜಿತ ಎಲ್ಲಾ ಅಧಿಕಾರಿ ಮತ್ತು ನೌಕರರಿಗೆ ದಿನಾಂಕ ಏಪ್ರಿಲ್ 6 ರಿಂದ 14 ರವರೆಗೆ ಎರಡು ಹಂತಗಳಲ್ಲಿ ತರಬೇತಿ ನೀಡಲಾಗಿದೆ. ತರಬೇತಿಗೆ ಗೈರು ಹಾಜರಾಗಿರುವ ಅಧಿಕಾರಿ ಮತ್ತು ನೌಕರರಿಗೆ ಈಗಾಗಲೇ ಕಾರಣ ಕೇಳಿ ಪತ್ರ ಜಾರಿಗೊಳಿಸಲಾಗಿದೆ.
ತರಬೇತಿಗೆ ಗೈರು ಹಾಜರಾಗಿರುವ ಹಾಗೂ ತರಬೇತಿಗೆ ಹಾಜರಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿರುವ ಗಣತಿದಾರರು ಮತ್ತು ಸೂಪರ್ ವೈಸರ್ಗಳು ಈ ಕೂಡಲೇ ನಿಯೋಜಿಸಲ್ಪಟ್ಟ ವಾರ್ಡ್ ವ್ಯಾಪ್ತಿಯಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು.ಇಲ್ಲವಾದರೆ ಕಾನೂನು ರಿತ್ಯಾ ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.














Click it and Unblock the Notifications