ಬೆಂಗಳೂರಿನಲ್ಲಿ ಶತಕ ಬಾರಿಸಿದ ತರಕಾರಿ ಬೆಲೆಯಲ್ಲಿ ಕುಸಿತ
ಬೆಂಗಳೂರು, ಜನವರಿ 14: ಸಿಲಿಕಾನ್ ಸಿಟಿಯಲ್ಲಿ ಶತಕದ ಗಡಿ ದಾಟಿದ ತರಕಾರಿ, ಹಣ್ಣುಗಳ ಬೆಲೆಯು ಮಕರ ಸಂಕ್ರಾಂತಿ ಹಬ್ಬದ ಹೊಸ್ತಿಲಿನಲ್ಲಿ ಕುಸಿತ ಕಂಡಿದೆ. ಬೆಂಗಳೂರಿನ ಪಕ್ಕದ ಜಿಲ್ಲೆಗಳಿಂದಲೇ ಹೆಚ್ಚುವರಿ ತರಕಾರಿ ಪೂರೈಕೆ ಆಗುತ್ತಿರುವ ಹಿನ್ನೆಲೆ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬೀನ್ಸ್ ಬೆಲೆ ವಿಶೇಷವಾಗಿ ತಿಂಗಳ ಹಿಂದೆ 120 ರೂ.ನಿಂದ 20 ರೂ.ಗೆ ಕುಸಿದಿದೆ. ಕಲಾಸಿಪಾಳ್ಯ ಸಗಟು ಮಾರುಕಟ್ಟೆಯಲ್ಲಿ ಕ್ಯಾರೆಟ್ ಸಹ ಕಿಲೋಗೆ 100 ರೂ.ನಿಂದ 60 ರೂ.ಗೆ ಇಳಿಕೆಯಾಗಿದೆ.
"ನಾವು ಹೆಚ್ಚಾಗಿ ಉತ್ತರ ಭಾರತದ ರಾಜ್ಯಗಳಿಂದ ಬರಲು ಉತ್ಪನ್ನವನ್ನು ಅವಲಂಬಿಸಿರುವುದರಿಂದ ಕಳೆದ ವಾರದವರೆಗೆ ಬೆಲೆಗಳು ಹೆಚ್ಚಾಗಿದ್ದವು. ಅಕಾಲಿಕ ಮಳೆಯಿಂದ ದಕ್ಷಿಣದ ಬಹುತೇಕ ರಾಜ್ಯಗಳಲ್ಲಿ ಬೆಳೆ ಹಾನಿಯಾಗಿದೆ. ಹೀಗಾಗಿ ಬೆಲೆ ಹೆಚ್ಚಾಗಿತ್ತು. ಆದರೆ ಹವಾಮಾನ ಸ್ಥಿರತೆಯಿಂದಾಗಿ ಪೂರೈಕೆ ಸರಪಳಿ ಪುನಃಸ್ಥಾಪಿಸಲಾಗಿದೆ," ಎಂದು ವ್ಯಾಪಾರಿ ಹಾಗೂ ಕಲಾಸಿಪಾಳ್ಯ ಸಗಟು ತರಕಾರಿ ವರ್ತಕರ ಸಂಘದ ಸದಸ್ಯ ಶ್ರೀಧರ್ ಹೇಳಿದ್ದಾರೆ.
ಕರ್ಫ್ಯೂ ಮಧ್ಯೆ ಹಬ್ಬದ ಆಚರಣೆ ಹೇಗೆ?:
ಬೆಂಗಳೂರಿನಲ್ಲಿ ವಾರಾಂತ್ಯದ ಕರ್ಫ್ಯೂ ಹಿನ್ನೆಲೆ ಮಾರುಕಟ್ಟೆಗಳಲ್ಲಿ ಜನಸಂದಣಿ ಕಡಿಮೆಯಾಗಿದೆ. ಇದರಿಂದ ತರಕಾರಿ ತುಳಿತವೂ ಕಡಿಮೆಯಾಗಿದ್ದು, ಕರ್ಫ್ಯೂ ನಡುವೆ ನಾವು ಹೇಗೆ ಹಬ್ಬವನ್ನು ಆಚರಿಸಬೇಕು ಎನ್ನುವುದು ವ್ಯಾಪಾರಿಯೊಬ್ಬರ ಪ್ರಶ್ನೆಯಾಗಿದೆ.
ಈರುಳ್ಳಿ, ಟೊಮಾಟೋ ಬೆಲೆ ಇಳಿಕೆ:
ರಾಜ್ಯ ರಾಜಧಾನಿಯಲ್ಲಿ ಗುಣಮಟ್ಟದ ಸಮಸ್ಯೆಯಿಂದ ಗಗನಕ್ಕೇರಿರುವ ಟೊಮಾಟೊ ಮತ್ತು ಈರುಳ್ಳಿ ಬೆಲೆಗಳಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಸಗಟು ಮಾರುಕಟ್ಟೆಯಲ್ಲಿ ಟೊಮಾಟೊ ಕಿಲೋಗೆ 30 ರೂ.ಗೆ ಮಾರಾಟವಾಗುತ್ತಿದ್ದರೆ, ನಗರದ ಹಲವು ಪ್ರದೇಶಗಳಲ್ಲಿ ಈರುಳ್ಳಿ ಮೂರು ಕಿಲೋಗೆ 100 ರೂ. ಬದನೆಕಾಯಿಯ ಬೆಲೆ ಎಲ್ಲೋ ಒಂದು ಕಿಲೋಗೆ 40 ರಿಂದ 50 ರೂಪಾಯಿ ಆಗಿದೆ.
ಯಶವಂತಪುರ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರ:
ಬೆಂಗಳೂರಿನ ಯಶವಂತಪುರ ಈರುಳ್ಳಿ ಮತ್ತು ಆಲೂಗೆಡ್ಡೆ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಹೈದರಾಬಾದ್ನಿಂದ ಆಲೂಗಡ್ಡೆ ಬರುತ್ತಿದ್ದು, ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಈರುಳ್ಳಿ ಪೂರೈಕೆಯಾಗುತ್ತಿದೆ. ತರಕಾರಿಗಳು ಉತ್ತಮ ಗುಣಮಟ್ಟ ಹೊಂದಿಲ್ಲದಿದ್ದರೂ, ಕೆಲವು ಉತ್ತಮವಾದ ತಳಿಗಳು ಉತ್ತಮ ಬೆಲೆಗೆ ಮಾರಾಟವಾಗುತ್ತಿವೆ," ಎಂದು ಯಶವಂತಪುರದ ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಸಿ ಉದಯಶಂಕರ್ ಹೇಳಿದ್ದಾರೆ.
ಮಾರುಕಟ್ಟೆ ಪರಿಸ್ಥಿತಿ ಊಹಿಸುವುದೇ ಸವಾಲು:
ಅನಿರೀಕ್ಷಿತ ಹವಾಮಾನದಿಂದಾಗಿ ಮಾರುಕಟ್ಟೆ ಪರಿಸ್ಥಿತಿ ಊಹಿಸುವುದೇ ವ್ಯಾಪಾರಿಗಳಿಗೆ ಸವಾಲಾಗಿದೆ. "ಮುಂದಿನ ಎರಡು ವಾರಗಳಲ್ಲಿ ಮಳೆಯಾದರೆ ಬೆಲೆಗಳು ಗಗನಕ್ಕೇರುತ್ತವೆ. ಯಾವುದೇ ಅಸ್ವಾಭಾವಿಕ ಬದಲಾವಣೆಯು ಗುಣಮಟ್ಟವನ್ನು ಹಾಳು ಮಾಡುತ್ತವೆ. ಇದರ ಮಧ್ಯೆ ನಾವು ಕಾಯಬೇಕಾಗಿದ್ದು, ಮುಂಬರುವ ದಿನಗಳಲ್ಲಿ ಬೆಲೆ ಹೇಗಿರುತ್ತದೆ ಎಂಬುದನ್ನು ನೋಡಬೇಕಾಗಿದೆ. ಎಂದು ಶ್ರೀಧರ್ ಹೇಳಿದ್ದಾರೆ.
ಹೂವಿನ ಬೆಲೆಯೂ ಏರಿಕೆ ಕಂಡಿಲ್ಲ:
ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ಹೂವುಗಳ ಬೆಲೆಯಲ್ಲೂ ಯಾವುದೇ ರೀತಿ ಏರಿಕೆಯಾಗಿಲ್ಲ. ಮಲ್ಲಿಗೆ ಕಿಲೋಗೆ 800 ರೂ., ಕ್ರಾಸ್ಸಂದ್ರ 500 ರೂ., ಸೇವಂತಿಗೆ 100 ರಿಂದ 120 ರೂ., ಗುಂಡಿ ಗುಲಾಬಿ ಕಿಲೋಗೆ 160 ರೂಪಾಯಿ ಇದೆ. "ನಾವು ಈಗ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಕಂಡುಕೊಳ್ಳುವುದಿಲ್ಲ. ಸಂಕ್ರಾಂತಿಯಂದು ಜನರು ಹೆಚ್ಚಾಗಿ ಬಾಳೆಹಣ್ಣು ಖರೀದಿಸುತ್ತಾರೆ. ಆದರೆ ಈ ಬಾರಿ ಅದಕ್ಕೂ ಹೆಚ್ಚಿನ ಬೇಡಿಕೆ ಇಲ್ಲ' ಎನ್ನುತ್ತಾರೆ ಎಲೆಕ್ಟ್ರಾನಿಕ್ಸ್ ಸಿಟಿಯ ಹಣ್ಣಿನ ವ್ಯಾಪಾರಿ ಏಳುಮಲೈ.