ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ಬೆಂಬಲವಿಲ್ಲ: ಕಾರಣವೇನು?
ಬೆಂಗಳೂರು, ಫೆಬ್ರವರಿ 12: ನಾಳೆ (ಫೆಬ್ರವರಿ 13) ರಂದು ನಡೆಯುತ್ತಿರುವ ಕರ್ನಾಟಕ ಬಂದ್ ಗೆ 'ಬಂದ್ ಕಿಂಗ್' ವಾಟಾಳ್ ನಾಗರಾಜ್ ಬೆಂಬಲ ನೀಡಿಲ್ಲ.
ಈ ಬಗ್ಗೆ ಸುದ್ದಿಗಾರರಿಗೆ ಸ್ಪಷ್ಟಪಡಿಸಿರುವ ವಾಟಾಳ್ ನಾಗರಾಜ್, 'ನಾಳೆ ನಡೆಯಲಿರುವ ಕರ್ನಾಟಕ ಬಂದ್ ಗೆ ನಮ್ಮ ಬೆಂಬಲ ಇಲ್ಲ' ಎಂದಿದ್ದಾರೆ.
ಹೌದು, ಬಂದ್ ಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು, ನಾಳೆ ನಡೆಯಲಿರುವ ಬಂದ್ ಗೆ ಬೆಂಬಲ ನೀಡುತ್ತಿಲ್ಲ. ಜೊತೆಗೆ ನಾಳೆ ಬಂದ್ ನಡೆಸುತ್ತಿರುವವರ ಮೇಲೆ ಅಸಮಾಧಾನವನ್ನೂ ಹೊರಹಾಕಿದ್ದಾರೆ.
'ಸರೋಜಿನಿ ಮಹಿಷಿ ವರದಿ ಜಾರಿಗೆ ಪೂರಕ ಸಮಿತಿ ರಚನೆ ಮಾಡುವ ವೇಳೆ ನಾನಿದ್ದೆ. ಸರೋಜಿನಿ ಮಹಿಷಿಯವರನ್ನು ನೇಮಿಸಿದ್ದೇ ನಾನು. ಇವತ್ತು ಹೋರಾಟ ಮಾಡುತ್ತಿರುವವರಿಗೆ ಇತಿಹಾಸ ಗೊತ್ತಿಲ್ಲ' ಎಂದು ಹೇಳಿದರು.

ಒಳಸತ್ಯ ಬಿಚ್ಚಿಟ್ಟ ವಾಟಾಳ್ ನಾಗರಾಜ್
ಬಂದ್ ಮಾಡುತ್ತಿರುವವರ ಮೇಲೆ ಕಿಡಿಕಾರಿದ ವಾಟಾಳ್ ನಾಗರಾಜ್, 'ನನ್ನನ್ನು ಯಾರೂ ಬಂದ್ ಗೆ ಕರೆದಿಲ್ಲ, ಬೆಂಬಲ ನೀಡುವಂತೆಯೂ ಕೇಳಿಲ್ಲ' ಎಂದು ಅವರು ಅಸಮಾಧಾನ ಹೊರಹಾಕಿದರು.

ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೀವಿ: ವಾಟಾಳ್
'ಸರೋಜಿನಿ ಮಹಿಷಿ ವರದಿ ಜಾರಿ ಆಗಬೇಕು ಎಂಬುದು ನಮ್ಮ ಒತ್ತಾಯ ಸಹ, ನಾವು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾರ್ಚ್ ತಿಂಗಳಲ್ಲಿ ಬೃಹತ್ ಹೋರಾಟ ಹಮ್ಮಿಕೊಂಡಿದ್ದೇವೆ. ಮಹಿಷಿ ವರದಿ ಜಾರಿ ಒತ್ತಾಯಿಸಿ ಮಾರ್ಚ್ 5 ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ' ಎಂದು ಹೇಳಿದ್ದಾರೆ.

ಕೋಡಿಹಳ್ಳಿ ವಿರುದ್ಧ ವಾಟಾಳ್ ನಾಗರಾಜ್ ಕಿಡಿ
ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧವೂ ಕಿಡಿಕಾರಿದ ವಾಟಾಳ್, 'ಕೋಡಿಹಳ್ಳಿ ಅವರಿಂದ ನಾನು ಬುದ್ಧಿ ಹೇಳಿಸಿಕೊಳ್ಳಬೇಕಾಗಿಲ್ಲ. ಏನು ಮಾಡಬೇಕು, ಏನು ಮಾಡಬಾರದು ಎಂದು ನನಗೆ ಗೊತ್ತಿದೆ. ಮಾರ್ಚ್ 5ರಂದು ನಾನೂ ಹೋರಾಟ ಮಾಡುತ್ತೇನೆ ನೋಡಿ' ಎಂದರು.

ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದು ಏನು?
ಅಸಮಾಧಾನ ಮರೆತು ಎಲ್ಲರೂ ಒಂದಾಗಿ ಹೋರಾಟ ಮಾಡಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದರು. ಅವರ ಹೇಳಿಕೆ ವಾಟಾಳ್ ನಾಗರಾಜ್ ಕುರಿತಂತೆಯೇ ಆಗಿತ್ತು.












Click it and Unblock the Notifications