ಸಚಿವ ಯು.ಟಿ.ಖಾದರ್ ಉಳಿದವರಿಗೆ ಮಾದರಿಯಾಗಲಿ
ಬೆಂಗಳೂರು, ಜು. 7 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಪಘಾತದಲ್ಲಿ ಗಾಯಗೊಂಡಿದ್ದ ದಂಪತಿಯನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕಳುಹಿಸಿ, ಅವರು ಆಟೋದಲ್ಲಿ ತೆರಳಿದ ಘಟನೆ ಬೆಂಗಳೂರಿನಲ್ಲಿ ಭಾನುವಾರ ಸಂಜೆ ನಡೆದಿದೆ.
ನಗರದ ಮೇಕ್ರಿ ಸರ್ಕಲ್ ಬಳಿ ಭಾನುವಾರ ಸಂಜೆ ವಾಹನವೊಂದು ಡಿಕ್ಕಿ ಹೊಡೆದು ಪಾದಚಾರಿಗಳಾದ ಹರಿಹರನ್ (71) ಮತ್ತು ಪತ್ನಿ ಶಾಂತಾ ತಲೆಗೆ ತೀವ್ರ ಪೆಟ್ಟಾಗಿತ್ತು. ಈ ಮಾರ್ಗದಲ್ಲಿ ಸಾಗುತ್ತಿದ್ದ ಸಚಿವ ಖಾದರ್, ತಮ್ಮ ಕಾರಿನಲ್ಲಿ ಇಬ್ಬರನ್ನು ಆಸ್ಪತ್ರೆಗೆ ಕಳುಹಿಸಿ, ಆಟೋದಲ್ಲಿ ತೆರಳಿ ಮಾನವೀಯತೆ ಮೆರೆದಿದ್ದಾರೆ.

ಗಾಯಗೊಂಡ ದಂಪತಿಗಳನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದ ಸಚಿವರ ಕಾರಿನ ಚಾಲಕ, ಹಿಂತಿರುಗಿ ಬಂದು ಸಚಿವರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ದಂಪತಿಗೆ ವಯಸ್ಸಾಗಿದ್ದು, ರಸ್ತೆ ದಾಟುತ್ತಿದ್ದ ವೇಳೆ ರಸ್ತೆ ಅಪಘಾತವಾಗಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದೆ ಎಂದು ಸಚಿವ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. [ಆರು ಮಂದಿ ಜೀವ ಉಳಿಸಿದ ಸಚಿವ ರತ್ನಾಕರ್ ಸಿಬ್ಬಂದಿ]
ಇಫ್ತಾರ್ ಕೂಟಕ್ಕೆ ತೆರಳುತ್ತಿದ್ದರು : ಅಪಘಾತ ನಡೆದ ವೇಳೆಯಲ್ಲಿ ಸಚಿವ ಖಾದರ್ ರಂಜಾನ್ ಪ್ರಯುಕ್ತ ಸ್ನೇಹಿತರೊಬ್ಬರು ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ತೆರಳುತ್ತಿದ್ದರು. ದಂಪತಿಗೆ ಅಪಘಾತವಾಗಿ ಅವರು, ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಗಮನಿಸಿ ಕೂಡಲೇ ತಮ್ಮ ಕಾರಿನಲ್ಲಿ ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ದಂಪತಿಗೆ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿರುವ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತ ಮಾಡಿದವರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಸದಾಶಿವನಗರದ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications