ಲೈಸನ್ಸ್ ನವೀಕರಣ: ಕೇಬಲ್ ಆಪರೇಟರ್ಗಳಿಗೆ ಎಚ್ಚರಿಕೆ
ಬೆಂಗಳೂರು, ಆ. 28: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ವಾರ್ಷಿಕ ಪರವಾನಗಿ ನವೀಕರಿಸದೇ ಕಾರ್ಯ ನಿರ್ವಹಿಸುತ್ತಿರುವ ಕೇಬಲ್ ಆಪರೇಟರ್ಗಳಿಗೆ ಕೂಡಲೇ ನೋಟಿಸ್ ಜಾರಿ ಮಾಡುವಂತೆ ಬೆಂಗಳೂರು ನಗರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಶ್ರೀರೂಪ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಕೇಬಲ್ ಟೆಲಿವಿಷನ್ ನೆಟ್ವರ್ಕ್ ಕಾಯ್ದೆ ನಿರ್ವಹಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ನೋಟಿಸ್ ನಂತರವೂ ನವೀಕರಿಸದೆ ಕಾರ್ಯನಿರ್ವಹಿಸುವ ಆಪರೇಟರ್ಗಳ ವಿರುದ್ಧ ಕಾಯ್ದೆ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
Recommended Video
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅಂಚೆ ಇಲಾಖೆಯ ಒಟ್ಟು ನಾಲ್ಕು ವಿಭಾಗಗಳಲ್ಲಿ 1,649 ಕೇಬಲ್ ಆಪರೇಟರ್ಗಳು ಲೈಸನ್ಸ್ ಪಡೆದುಕೊಂಡಿದ್ದಾರೆ. ಆದರೆ 914 ಕೇಬಲ್ ಆಪರೇಟರ್ಗಳು ಈವರೆಗೂ ಲೈಸನ್ಸ್ ನವೀಕರಣ ಮಾಡಿಸಿಕೊಳ್ಳದಿರುವುದು ಸಭೆಯಲ್ಲಿ ಬಹಿರಂಗವಾಗಿದೆ. ಅಂತಹ ಕೇಬಲ್ ಆಪರೇಟರ್ಗಳ ಮೇಲೆ ಕ್ರಮಕ್ಕೆ ಸೂಚಿಸಲಾಗಿದೆ.
ನಿಮಗೆ ಬೇಕಾದ ಟಿವಿ ಚಾನೆಲ್ ನೀವೆ ಆಯ್ಕೆ ಮಾಡಿಕೊಳ್ಳಿ: ಟ್ರಾಯ್
ರಾಜಾಜಿನಗರ ವಲಯ
ಪಶ್ಚಿಮ ವಿಭಾಗದ ರಾಜಾಜಿನಗರ ವಲಯದಲ್ಲಿ ಒಟ್ಟು 401 ಕೇಬಲ್ ಆಪರೇಟರ್ಗಳು ಪರವಾನಗಿ ಪಡೆದಿದ್ದು ಕೇವಲ 275 ಆಪರೇಟರ್ಗಳು ಪ್ರಸ್ತುತ ತಮ್ಮ ಪರವಾನಗಿ ನವೀಕರಿಸಿಕೊಂಡಿದ್ದಾರೆ. ಜಾಲಹಳ್ಳಿ ವಲಯದಲ್ಲಿ ಒಟ್ಟು 252 ಕೇಬಲ್ ಆಪರೇಟರ್ಗಳು ಪರವಾನಗಿ ಪಡೆದಿದ್ದು ಕೇವಲ 143 ಆಪರೇಟರ್ಗಳು ವಾರ್ಷಿಕ ನವೀಕರಣ ಮಾಡಿಸಿದ್ದಾರೆ ಹಾಗೂ ಆರ್.ಟಿ.ನಗರ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 320 ಕೇಬಲ್ ಆಪರೇಟರ್ಗಳಲ್ಲಿ ಕೇವಲ 37 ಆಪರೇಟರ್ಗಳು ಪರವಾನಗಿ ನವೀಕರಿಸಿದ್ದಾರೆಂದು ವಿಭಾಗದ ಸಾರ್ವಜನಿಕ ಸಂಪರ್ಕ ನಿರೀಕ್ಷಕ ದ್ರುವರಾಜ್ ಅವರು ಸಭೆಗೆ ಮಾಹಿತಿ ನೀಡಿದರು.
ಬೆಂಗಳೂರು ದಕ್ಷಿಣ ವಲಯ
ಬೆಂಗಳೂರು ದಕ್ಷಿಣ ವಲಯದ ಸಾರ್ವಜನಿಕ ಸಂಪರ್ಕ ನಿರೀಕ್ಷಕ ಆನಂದ್ ಅವರು ಮಾತನಾಡಿ ಬಸವನಗುಡಿ ವಲಯದಲ್ಲಿ ಒಟ್ಟು 285 ಕೇಬಲ್ ಆಪರೇಟರ್ಗಳು ನೋಂದಣಿಯಾಗಿದ್ದು, ಕೇವಲ 20 ಆಪರೇಟರ್ಗಳು ತಮ್ಮ ವಾರ್ಷಿಕ ಪರವಾನಗಿ ನವೀಕರಿಸಿಕೊಂಡಿದ್ದಾರೆ ಮತ್ತು ಜಯನಗರ ವ್ಯಾಪ್ತಿಯಲ್ಲಿ 200 ಆಪರೇಟರ್ಗಳಲ್ಲಿ 190 ಆಪರೇಟರ್ಗಳ ಪರವಾನಗಿ ನವೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು
ಜಿ.ಪಿ.ಒ
ವಲಯದಲ್ಲಿ
ಒಟ್ಟು
191
ಆಪರೇಟರ್ಗಳಲ್ಲಿ
ಕೇವಲ
70
ಆಪರೇಟರ್ಗಳು
ಪರವಾನಗಿ
ನವೀಕರಿಸಿಕೊಂಡಿದ್ದಾರೆಂದು
ಜಿ.ಪಿ.ಒ
ಸಾರ್ವಜನಿಕ
ಸಂಪರ್ಕ
ನಿರೀಕ್ಷಕ
ಉಮೇಶ್
ಅವರು
ಸಭೆಗೆ
ತಿಳಿಸಿದರು.
ಕನಿಷ್ಟ ಪರವಾನಗಿ`ಶುಲ್ಕ
ಪರವಾನಗಿ ನವೀಕರಣದ ಮೊತ್ತ ಕೇವಲ ರೂ.500ಗಳಾಗಿದ್ದು ಅದನ್ನು ಹೆಚ್ಚಿಸಿ ನವೀಕರಣ ವಿಳಂಬ ಮಾಡಿದವರಿಗೆ ದಂಡ ವಿಧಿಸುವಂತೆ ನಿಯಮ ರೂಪಿಸಲು ಉನ್ನತ ಮಟ್ಟದ ಸಮಿತಿಗೆ ಶಿಫಾರಸ್ಸು ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಲ್ಲದೇ, ಪರವಾನಗಿ ನವೀಕರಿಸದೇ ಅಕ್ರಮವಾಗಿ ಕಾರ್ಯ ನಿರ್ವಹಿಸುವಂತ ಕೇಬಲ್ ಆಪರೇಟರ್ಗಳ ಕಛೇರಿಗೆ ಭೇಟಿ ನೀಡಿ ತಪಾಸಣೆ ನಡೆಸಲು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಕಾರ್ಯಪಡೆಯನ್ನು ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ದೂರು ಸಲ್ಲಿಸಲು ಅವಕಾಶ
ಸ್ಥಳೀಯ ಕೇಬಲ್ ಹಾಗೂ ಸ್ಯಾಟಲೈಟ್ ವಾಹಿನಿಗಳಲ್ಲಿ ಬಿತ್ತರಗೊಳ್ಳುವ ಕಾರ್ಯಕ್ರಮ ಅಂಶಗಳ ಬಗ್ಗೆ ಆಕ್ಷೇಪವಿದ್ದಲ್ಲಿ ಸಾರ್ವಜನಿಕರು ದೂರು ಸಲ್ಲಿಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿಯಲ್ಲಿ ದೂರು ನಿರ್ವಹಣಾ ಕೋಶವೊಂದನ್ನು ನಿರ್ಮಿಸಬೇಕು. ಅದರ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಶ್ರೀರೂಪ ಅವರು ಸೂಚಿಸಿದರು.
ಆದರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯವಾಣಿಗೆ ಜಿಲ್ಲೆಗೆ ಸಂಬಂಧಿಸಿದಂತೆ ಯಾವುದೇ ದೂರು ಬಂದಿಲ್ಲ ಎಂದು ಸಮಿತಿಯ ಕಾರ್ಯದರ್ಶಿ ಪಲ್ಲವಿ ಹೊನ್ನಾಪುರ ಅವರು ತಿಳಿಸಿದರು.
ಸಭೆಯಲ್ಲಿ ಮಾನವ ಚಾರಿಟೀಸ್ ಅಧ್ಯಕ್ಷ ರಾಜೇಂದ್ರ ಕುಲಕರ್ಣಿ, ಕನ್ನಡ ಪ್ರಾಧ್ಯಾಪಕ ಡಾ. ಸುಮ, ವಿದ್ಯಾರಣ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಸಿ. ರಮೇಶ್, ಪೊಲೀಸ್ ಇಲಾಖೆಯ ಸಹಾಯಕ ಉಪ ಆಯುಕ್ತ ಎಂ.ಬಾಬು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.