ಬೆಂಗಳೂರು; ಕಸ ಹಾಕುವುದು ತಡೆಯಲು ರಸ್ತೆಗಿಳಿದ ಗಸ್ತು ಪಡೆ
ಬೆಂಗಳೂರು, ಅಕ್ಟೋಬರ್ 02 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೋವಿಡ್ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸುವವರನ್ನು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಲು ಮಾರ್ಷಲ್ಗಳ ಗಸ್ತು ಪಡೆ ರಚನೆ ಮಾಡಿದೆ.
ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು 8 'ಮಾರ್ಷಲ್ ಗಸ್ತು ಪಡೆ' ವಾಹನಗಳಿಗೆ ಆಡಳಿತಾಧಿಕಾರಿ ಗೌರವ್ ಗುಪ್ತ, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಚಾಲನೆ ನೀಡಿದರು.
ಬೆಂಗಳೂರು; ಕಸ ಸಂಗ್ರಹಣೆ ಟಿಪ್ಪರ್ ಮಾಹಿತಿ ಬೆರಳ ತುದಿಯಲ್ಲಿ
ಬಿಬಿಎಂಪಿಯ 8 ವಲಯಕ್ಕೆ ಒಂದೊಂದು ಗಸ್ತು ವಾಹನವನ್ನು ನೀಡಲಾಗಿದೆ. ರಾತ್ರಿ ಮತ್ತು ಹಗಲು ಈ ಪಡೆ ಕಾರ್ಯ ನಿರ್ವಹಣೆ ಮಾಡಲಿದೆ. ಪ್ರತಿ ಗಸ್ತು ವಾಹನದಲ್ಲಿ ಐವರು ಮಾರ್ಷಲ್ಗಳು ಒಬ್ಬರು ಮೇಲ್ವಿಚಾರಕರು ಇರಲಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದಿದ್ದರೆ 1 ಸಾವಿರ ರೂ. ದಂಡ
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕೋವಿಡ್ ನಿಯಮ ಉಲ್ಲಂಘನೆ ಮಾಡಿದರೆ ಈ ವಾಹನದಲ್ಲಿರುವ ಮಾರ್ಷಲ್ಗಳು ದಂಡ ಹಾಕಲಿದ್ದಾರೆ.
ಕಸ ಸಂಗ್ರಹಕ್ಕೆ ಬಿಬಿಎಂಪಿ ಹೊಸ ವ್ಯವಸ್ಥೆ
ದಂಡ ವಿಧಿಸಲು ಗಸ್ತು ವಾಹನ
ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೆ ಅಡ್ಡಾಡುವುದು, ಸಾಮಾಜಿಕ ಅಂತರ ಕಾಪಾಡದಿರುವುದು ಮುಂತಾದ ಕೋವಿಡ್ ನಿಯಂತ್ರಣ ನಿಯಮಗಳ ಉಲ್ಲಂಘನೆ ಪತ್ತೆ ಹಚ್ಚಿ ದಂಡ ವಿಧಿಸಲು ಈ ಗಸ್ತು ವಾಹನ ಬಳಸಿಕೊಳ್ಳಲಾಗುತ್ತದೆ. ಬೆಂಗಳೂರಲ್ಲಿ ಮಾಸ್ಕ್ ಧರಿಸದಿದ್ದರೆ 1 ಸಾವಿರ ರೂ. ದಂಡ ಕಟ್ಟಬೇಕು.
ಕ್ರಮ ಕೈಗೊಳ್ಳುವ ಅಧಿಕಾರ
ಗಸ್ತು ವಾಹನದಲ್ಲಿರುವ ಮಾರ್ಷಲ್ಗಳು ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರನ್ನೂ ಪತ್ತೆ ಹಚ್ಚಿ ಸ್ಥಳದಲ್ಲೇ ದಂಡ ವಿಧಿಸಲಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯವನ್ನು ಎಸೆಯುವವರು, ರಸ್ತೆ ಬದಿಯಲ್ಲಿ ಸುರಿಯುವವರು, ಹೊರ ವರ್ತುಲ ರಸ್ತೆ, ಕೆರೆಗಳು, ರಾಜಕಾಲುವೆಗಳಲ್ಲಿ ತ್ಯಾಜ್ಯ ವಿಲೇ ಮಾಡುವವರ ವಿರುದ್ಧ ಘನತ್ಯಾಜ್ಯ ನಿಯಮದಡಿ ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ.
ಬ್ಲಾಕ್ ಸ್ಪಾಟ್ ನಿರ್ಮಾಣ
ಅಕ್ರಮವಾಗಿ ಕಸವನ್ನು ತೆಗೆದುಕೊಂಡು ಹೋಗುವ ವಾಹನಗಳನ್ನು ವಶಕ್ಕೆ ಪಡೆಯಲಿದ್ದಾರೆ. ಮಾಂಸ, ಕೋಳಿ ತಾಜ್ಯಗಳು, ಕಟ್ಟಡ ನಿರ್ಮಾಣ ತ್ಯಾಜ್ಯಾ, ವೈದ್ಯಕೀಯ ತ್ಯಾಜ್ಯಗಳನ್ನು ರಸ್ತೆಯಲ್ಲಿ ಸುರಿದು ಬ್ಲಾಕ್ ಸ್ಪಾಟ್ ನಿರ್ಮಾಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
ಮಾರ್ಷಲ್ ವಾಹನಗಳು
ಗಸ್ತು ವಾಹನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಚೀಫ್ ಮಾರ್ಷಲ್, ವಿಶೇಷ ಆಯುಕ್ತರುಗಳಾದ ಡಿ. ರಂದೀಪ್, ಬಸವರಾಜ್, ರವೀಂದ್ರ, ಜೆ.ಮಂಜುನಾಥ್, ತುಳಸಿ ಮದ್ದಿನೇನಿ, ಮನೋಜ್ ಜೈನ್, ರಾಜೇಂದ್ರ ಚೋಳನ್, ಹೆಪ್ಸಿಬಾ ರಾಣಿ ಕೊರ್ಲಪಾಟಿ ಮುಂತಾದವರು ಇದ್ದರು.