ಖಾಕಿ ಭದ್ರತೆಯಲ್ಲಿ ನವಯುಗ ಟೋಲ್ ನಲ್ಲಿ ಶುಲ್ಕ ಸಂಗ್ರಹ
ಬೆಂಗಳೂರು, ಏಪ್ರಿಲ್ 27: ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 7ರಲ್ಲಿ ದೇವನಹಳ್ಳಿ ಟೋಲ್ ಪ್ಲಾಜಾದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಹೋಗುವ ಮತ್ತು ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರಿಗೂ ಟೋಲ್ ಬಿಸಿ ತಟ್ಟಿದೆ.
ನವಯುಗ ಸಂಸ್ಥೆ ಕೆಐಎಗೆ ಹೋಗುವ ವಾಹನಗಳಿಂದಲೂ ಶುಲ್ಕ ಸಂಗ್ರಹಿಸಲಾರಂಭಿಸಿದೆ. ಏ.1ರಿಂದ ಟೋಲ್ ದರ ಪರಿಷ್ಕರಣೆ ಜತೆಗೆ ಹೊಸ ಶುಲ್ಕ ಸಂಗ್ರಹ ವಿಮಾನ ನಿಲ್ದಾಣ ಪ್ರಯಾಣಿಕರ ಮೇಲೆ ಹೊರೆ ಹೆಚ್ಚಲಿದೆ.ಹೋಗುವ ವಾಹನಗಳು ನಿಲ್ದಾಣದಿಂದ ಹಿಂತಿರುಗುವಾಗ 130 ರೂ. ಶುಲ್ಕ ಪಾವತಿಸುತ್ತಿದೆ.
ವಿಮಾನ ನಿಲ್ದಾಣಕ್ಕೆ ಇತ್ತೀಚೆಗಷ್ಟೇ ಉದ್ಘಾಟನೆಯಾಗಿರುವ ಪರ್ಯಾಯ ರಸ್ತೆಯಿಂದಾಗಿ ದೇವನಹಳ್ಳಿ ಟೋಲ್ ಆದಾಯ ಡಿಢೀರ್ ಕುಸಿತವಾಗಿದೆ. ಹೀಗಾಗಿ ಬೆಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳಿಂದಲೂ ಶುಲ್ಕ ಪಡೆಯಲು ನವಯುಗ ಸಂಸ್ಥೆ ಚಿಂತನೆ ನಡೆಸಿತ್ತು. ಆದರೆ, ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದ ಕಾರಣ ಸೂಕ್ತ ಪೊಲೀಸ್ ಭದ್ರತೆಯಿಲ್ಲದೆ ಶುಲ್ಕ ಸಂಗ್ರಹ ಪ್ರಾರಂಭಿಸದಿರಲು ನಿರ್ಧರಿಸಲಾಗಿತ್ತು.

ಅದರಂತೆ ಭದ್ರತೆ ಒದಗಿಸಲು ನವಯುಗ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಮನವಿ ಪುರಸ್ಕರಿಸಿದ್ದ ಹೈಕೋರ್ಟ್, ದೇವನಹಳ್ಳಿ ಟೋಲ್ ಗೆ ತಕ್ಷಣವೇ ಸೂಕ್ತ ಪೊಲೀಸ್ ರಕ್ಷಣೆ ಒದಗಿಸುವಂತೆ ನಗರ ಪೊಲೀಸ್ ಕಮಿಷನರ್ ಗೆ ಆದೇಶಿಸಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ಟೋಲ್ ಗೆ ಭದ್ರತೆ ಒದಗಿಸಿದ್ದರು.
ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ 15 ಶುಲ್ಕ ವಸೂಲಾತಿ ಬೂತ್ ಇವೆ. ಹೆಚ್ಚುವರಿಯಾಗಿ 4 ಮೊಬೈಲ್ ಶುಲ್ಕ ಸಂಗ್ರಹ ಕೇಂದ್ರ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications