ಉದ್ಯಮಿ ಮನೆಯಲ್ಲಿ 2 ಕೋಟಿ ಕದ್ದು ಮಾದಪ್ಪನ ಹರಕೆ ತೀರಿಸುವಾಗ ಸಿಕ್ಕಿಬಿದ್ದ ಕಳ್ಳರು!
ಬೆಂಗಳೂರು, ಏ. 07: ಒಬ್ಬ ಗಾಂಜಾ ವ್ಯಸನಿ. ಮತ್ತೊಬ್ಬ ಮನೆಗಳ್ಳ. ಇಬ್ಬರೂ ರಾಮನಗರ ಜೈಲಿನಲ್ಲಿ ಪರಿಚಯವಾಗ್ತಾರೆ. ಮನೆ ಕಳ್ಳತನ ಪ್ಲಾನ್ ಮಾಡ್ತಾರೆ. ಒಂದು ಲಕ್ಷ ಹಣ ಸಿಕ್ಕರೆ ಸಾಕು ಎಂದು ಮಲೈ ಮಹದೇಶ್ವರ ಮಾದಪ್ಪನಲ್ಲಿ ಬೇಡಿಕೊಂಡು ಒಂದು ಮನೆಗೆ ಕನ್ನ ಹಾಕ್ತಾರೆ. ಆದರೆ ಸಿಕ್ಕಿದ್ದು ಬರೋಬ್ಬರಿ ಎರಡು ಕೋಟಿ ರೂ. ನಗದು. ಹಣ ಚೀಲದಲ್ಲಿ ಹೊತ್ತು ಎಸ್ಕೇಪ್ ಆಗಿದ್ದ ಕಳ್ಳರಲ್ಲಿ ಒಬ್ಬ ತನ್ನ ಪಾಲು ಪಡೆದು ಮನೆ ಸೇರಿದ್ದ. ಇನ್ನೊಬ್ಬ ಮಾದಪ್ಪನಿಗೆ ಹರಕೆ ತೀರಿಸಲು ಹೋಗಿದ್ದ. ಇನ್ನೇನು ಜೀವನ ಸೆಟ್ಲ್ ಆಯ್ತು ಅನ್ನುವಷ್ಠರಲ್ಲಿ ಪೊಲೀಸರ ಕೈಗೆ ತಗಲಾಕ್ಕೊಂಡಿದ್ದಾರೆ. ಪೊಲೀಸರ ಕ್ರೈಂ ಇನ್ವೆಸ್ಟಿಗೇಷನ್ ಸ್ಟೋರಿ ಇಲ್ಲಿದೆ ನೋಡಿ.
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಮುಂದೆ ಗುರುವಾರ ಬೆಳಗ್ಗೆ ಜನವೋ ಜನ. ಕಂತೆ ಕಂತೆ ನೋಟು ನೋಡಿ ನಿಬ್ಬೆರಗಾಗಿದ್ದರು. ಇಷ್ಟು ದುಡ್ಡು ಮಾಡೋಕೆ ಸಾಧ್ಯವಿಲ್ಲ, ಕಣ್ಣು ತುಂಬಿಕೊಂಡು ಹೋಗುತ್ತಿದ್ದರು. ಬರೋಬ್ಬರಿ 1.76 ಕೋಟಿ ನಗದು ಹಣದ ಕಂತೆಗಳು. ಹೌದು ಮಲೈ ಮಹದೇಶ್ವರ ಮಾದಪ್ಪನ ಭಕ್ತನಾಗಿರುವ ಮನೆಗಳ್ಳರಿಬ್ಬರು ದೋಚಿದ್ದ ಹಣದ ಕಂತೆಗಳು. ಈ ಇಬ್ಬರು ಮನೆಗಳ್ಳರ ಸ್ಟೋರಿ ಆರಂಭವಾಗುವುದೇ ರಾಮನಗರ ಜೈಲಿನಿಂದ.
ಅವನ ಹೆಸರು ಸುನೀಲ್ ಕುಮಾರ್ ಅಲಿಯಾಸ್ ತೊರೆ. ಸುಬ್ರಮಣ್ಯಪುರದ ಬಳಿ ಇರುವ ವಸಂತನಗರ ನಿವಾಸಿ. ಮಾಡಗಿಯಲ್ಲಿ ಅನೇಕ ಕಳ್ಳತನ ಮಾಡಿ ರಾಮನಗರ ಜೈಲಿಗೆ ಹೋಗಿದ್ದ. ಇನ್ನೊಬ್ಬನ ಹೆಸರು ದಿಲೀಪ್, ಗಾಂಜಾ ವ್ಯಸನಿ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೆಬ್ಬೆಹಳ್ಳಿ ನಿವಾಸಿ. ಗಾಂಜಾ ಸೇವನೆ ಮಾಡಿದ ಕೇಸಿನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದ. ಇಬ್ಬರೂ ರಾಮನಗರ ಜೈಲಿನಲ್ಲಿದ್ದಾಗ ಒಬ್ಬರಿಗೊಬ್ಬರು ಪರಿಚಯವಾಗಿದ್ದರು. ಇಬ್ಬರೂ ಸೇರಿ ಮನೆ ಕಳ್ಳತನ ಮಾಡುವ ಪ್ಲಾನ್ ಮಾಡಿದ್ದರು.

ಮಾದಪ್ಪನಿಗೆ ಹರಕೆ ಹೊತ್ತಿದ್ದ:
ಮನೆ ಬೀಗ ಹೊಡೆದು ಕೇವಲ ಒಂದು, ಎರಡು ಲಕ್ಷ ಕದ್ದು ತೃಪ್ತಿ ಪಡೆಯುತ್ತಿದ್ದ ಸುನೀಲ್ ಕುಮಾರ್ ಕಳ್ಳತನದಲ್ಲಿ ನಿಪುಣ. ಮಿಗಿಲಾಗಿ ಮಾದಪ್ಪನ ಭಕ್ತ. ಕಳ್ಳತನ ಮಾಡುವ ಮುನ್ನ ಮಲೈ ಮಹದೇಶ್ವರ ಮಾದಪ್ಪನನ್ನು ನೆನಪಿಸಿಕೊಂಡು ಮಾ. 28 ರಂದು ಕುಮಾರಸ್ವಾಮಿ ಲೇಔಟ್ ಮನೆಯೊಂದಕ್ಕೆ ಬೀಗ ಹೊಡೆದು ಕಳ್ಳತನಕ್ಕೆ ಸ್ಕೆಚ್ ಹಾಕಿದ್ದರು.
ಆತನ ಹೆಸರು ಮೋಹಲ್ ಲಾಲ್. ಕುಮಾರಸ್ವಾಮಿ ಲೇಔಟ್ ದಯಾನಂದಸಾಗರ್ ಕಾಲೇಜು ಬಳಿ ಮನೆ ಹೊಂದಿದ್ದು, ಪತ್ನಿ ಮತ್ತು ಪುತ್ರ ಸಂದೀಪ್ ಲಾಲ್ ಜತೆ ವಾಸವಾಗಿದ್ದರು. ಕೋವಿಡ್ ಕಾರಣದಿದಾಗಿ ಮೋಹನ್ ಲಾಲ್ ಬೇರಡೆ ಮನೆ ಮಾಡಿಕೊಂಡಿದ್ದರು. ಈ ಮನೆಯಲ್ಲಿ ಸಂದೀಪ್ ಲಾಲ್ ಒಬ್ಬನೇ ವಾಸವಾಗಿದ್ದ. ಕೆಲಸದ ನಿಮಿತ್ತ ಸಂದೀಪ್ ಲಾಲ್ ಮಾ. 28 ರಂದು ಚೆನ್ನೈಗೆ ಹೋಗಿದ್ದವನು ವಾಪಸು ಬಂದಿರಲಿಲ್ಲ.

ಮನೆಯಲ್ಲಿ ಯಾರೂ ಇಲ್ಲದನ್ನು ನೋಡಿ ಬೀಗ ಮುರಿದು ಒಳ ನುಗ್ಗಿದ್ದ ಕಳ್ಳರು, ಮನೆಯಲ್ಲಿದ್ದ ನಗದು ಹಣ, ಲ್ಯಾಪ್ ಟಾಪ್, ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಮರುದಿನ ಬೆಳಗ್ಗೆ ಸಂದೀಪ್ ಲಾಲ್ ಬಂದು ನೋಡಿದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದ್ದು, ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಷ್ಟು ಹಣ ಕಳ್ಳತನ ಅಗಿದೆ ಎಂದು ಎಫ್ಐಆರ್ ನಲ್ಲಿ ಮಾಹಿತಿ ಕೂಡ ಉಲ್ಲೇಖಿಸಿರಲಿಲ್ಲ!
ಪೊಲೀಸರ ತನಿಖೆ:
ಈ ಪ್ರಕರಣದ ಮಹತ್ವ ತಿಳಿದು ಡಿಸಿಪಿ ಹರೀಶ್ ಪಾಂಡೆ ಸುಬ್ರಮಣ್ಯಪುರ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಿದ್ದರು. ಕಳ್ಳತನ ಮನೆಗೆ ಹೋಗಿ ಪರಿಶೀಲಿಸಿದಾಗ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕಳ್ಳರ ಬೆರಳು ಮುದ್ರೆ ಸೇರಿದಂತೆ ಹಲವು ಸಾಂದರ್ಭಿಕ ಸಾಕ್ಷಿಗಳನ್ನು ಸಂಗ್ರಹಿಸಿಕೊಂಡು ಪೊಲೀಸರು ತನಿಖೆ ಅರಂಭಿಸಿದ್ದರು.

ಹಳೇ ಮನೆಗಳ್ಳರ ಜಾಡು ಹಿಡಿದು ತನಿಖೆ ನಡೆಸಿದಾಗ ಮನೆಗಳ್ಳ ಸುನೀಲ್ ಕುಮಾರ್ ಕಳ್ಳತನ ಮಾಡಿರುವ ಬಗ್ಗೆ ಪೊಲೀಸರು ಸುಳಿವು ಪಡೆದು ಸಾಕ್ಷಿ ಸಂಗ್ರಹಿಸಿದ್ದರು. ಅದಾದ ನಂತರ ಹೊಸ ಕಳ್ಳ ದಿಲೀಪ್ ಭಾಗಿಯಾಗಿರುವುದು ಸಾಂದರ್ಭಿಕ ಸಾಕ್ಷಗಳು ಪತ್ತೆಯಾಗಿದ್ದವು. ಇದರ ಜಾಡು ಹಿಡಿದು ತನಿಖೆ ನಡೆಸಿದಾಗ ಮೊದಲ ಆರೋಪಿ ಸುನೀಲ್ ಕುಮಾರ ಕದ್ದ ಹಣವನ್ನು ಮನೆಯಲ್ಲಿಟ್ಟುಕೊಂಡು ಕನಸು ಕಾಣುತ್ತಿದ್ದ. ಅದನ್ನು ಬಿಟ್ಟು ಹೊರ ಹೋಗಲಾರದೇ ಮನೆಯಲ್ಲಿ ತಂಗಿದ್ದ. ಈತನನ್ನು ವಶಕ್ಕೆ ಪಡೆದಾಗ ಲಕ್ಷ ಲಕ್ಷ ಹಣ ಸಮೇತ ಸಿಕ್ಕಿಬಿದ್ದಿದ್ದಾನೆ.
ಮಾದಪ್ಪನ ಅಂಗಳದಲ್ಲಿ ದಿಲೀಪ:
ಕೇವಲ ಸಣ್ಣ ಪುಟ್ಟ ಕಳ್ಳತನ ಮಾಡಿ ಗಾಂಜಾ ಸೇವನೆ ಮಾಡುತ್ತಿದ್ದ ದಿಲೀಪ್ ಮಾದಪ್ಪನ ಹರಕೆ ತೀರಿಸಲು ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ. ವಾಪಸು ಬರುವಷ್ಟರಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸರು ಆತನನ್ನು ಹಿಡಿದು ಕೋಳ ತೊಡಿಸಿದ್ದಾರೆ. ಇಬ್ಬರಿಂದಲೂ ಬರೋಬ್ಬರಿ 1.88 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದ್ದು ಅರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಣದ ಮೂಲ ಲೆಕ್ಕ ಇಲ್ಲ:
ಮನೆಯಲ್ಲಿ ಹಣ ಕಳ್ಳತನ ಬಗ್ಗೆ ಸಂದೀಪ್ ಲಾಲ್ ದೂರು ನೀಡಿದ್ದ. ಅದರೆ, ಎರಡು ಕೋಟಿ ರೂ. ಹಣ ರೀಕವರಿಯಾದ ಮೇಲೆ ಆತನೇ ದೂರುದಾರನೂ ಬೆಚ್ಚಿಬಿದ್ದಿದ್ದಾನೆ. ಎರಡು ಕೋಟಿ ಹಣದ ಮೂಲದ ಬಗ್ಗೆ ಸಂದೀಪ್ ಲಾಲ್ ಪೊಲೀಸರಿಗೆ ವಿವರ ಕೊಟ್ಟಿಲ್ಲ. ಹೀಗಾಗಿ ಈತನ ಹಣವನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದೇವೆ. ಜತೆಗೆ ಹಣದ ಮೂಲದ ಬಗ್ಗೆ ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಅಕ್ರಮ ಹಣ ಗಳಿಕೆ ಕುರಿತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನೀಕೆ ನಡೆಸಲಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ 'ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.
ಹಣ ಕಳೆದುಕೊಂಡ ಮಾಲೀಕ ಹಣ ಸಿಕ್ಕರೂ ಅದನ್ನು ಪಡೆಯಲಾಗದೇ ಇದೀಗ ಲೆಕ್ಕ ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ. ಕೇವಲ ಚಿಲ್ಲರೆ ಕಾಸಿಗಾಗಿ ಮನೆ ಬೀಗ ಒಡೆಯುತ್ತಿದ್ದ ಕಳ್ಳರು ಕೋಟಿ ಕೋಟಿ ಕದ್ದು ಸಿಕ್ಕಿಬಿದ್ದು ಮತ್ತೆ ಜೈಲಿಗೆ ಹೋಗಿದ್ದಾರೆ. ಡಿಸಿಪಿ ಹರೀಶ್ ಪಾಂಡೆ ಅವರ ಮಾರ್ಗದರ್ಶನದಲ್ಲಿ ಈ ಪ್ರಕರಣ ಪತ್ತೆ ಮಾಡಿದ ಕುಮಾರಸ್ವಾಮಿ ಲೇಔಟ್ ಪೊಲೀಸರ ಕಾರ್ಯ ವೈಖರಿಯನ್ನು ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.
Recommended Video













Click it and Unblock the Notifications