ಬೆಂಗಳೂರಲ್ಲಿ ಮಳೆಗೆ 4 ಬಲಿ; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ
ಬೆಂಗಳೂರು, ಅಕ್ಟೋಬರ್ 13: ನಗರದಲ್ಲಿ ಸಂಜೆಯಿಂದ ಧಾರಕಾರ ಮಳೆ ಸುರಿಯುತ್ತಿದೆ. ಎಂದಿಗಿಂತ ಜೋರಾಗಿ ಗುಡುಗು ಸಹಿತ ಮಳೆ ಬೀಳುತ್ತಿದ್ದು ರಾಜಕಾಲುವೆಯಲ್ಲಿ ಇಬ್ಬರು ಕೊಚ್ಚಿಹೋಗಿದ್ದಾರೆ. ಇನ್ನಿಬ್ಬರು ಗೋಡೆ ಕುಸಿದು ಸತ್ತಿದ್ದಾರೆ. ಅಲ್ಲದೆ ಒಬ್ಬರು ನಾಪತ್ತೆಯಾಗಿದ್ದು ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇನ್ನೂ 2-3ದಿನ ಮಳೆ
ಕುರುಬರ ಹಳ್ಳಿ ವಾರ್ಡ್ ನ ಎಚ್.ಬಿ.ಕೆ ಲೇಔಟ್ ಸಮೀಪದ ವೆಂಕಟರಮಣ ಸ್ವಾಮಿ ದೇಗುಲದ ಬಳಿ ರಾಜಕಾಲುವೆಯಲ್ಲಿ ಅರ್ಚಕ ವಾಸುದೇವಾಚಾರ್ ಕೊಚ್ಚಿ ಹೋಗಿದ್ದಾರೆ. ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು ಅರ್ಚಕರಿಗಾಗಿ ಬಿರುಸಿನ ಹುಡುಕಾಡ ನಡೆಸಿದ್ದಾರೆ.
ತಾಯಿ ಮಗಳು ನೀರು ಪಾಲು
ಲಗ್ಗೆರೆಯಲ್ಲಿ ರಾಜಕಾಲುವೆಯಲ್ಲಿ ತಾಯಿ ಮಗಳು ಕೊಚ್ಚಿ ಹೋಗಿದ್ದಾರೆ. ಸಾವಿಗೀಡಾದವರನ್ನು ತಾಯಿ ಮೀನಾಕ್ಷಿ (57) ಹಾಗೂ ಮಗಳು ಪುಷ್ಪಾ (22) ಎಂದು ಗುರುತಿಸಲಾಗಿದೆ. ಮೃತರ ಮನೆ ರಾಜಕಾಲುವೆಯ ಪಕ್ಕವೇ ಇತ್ತು ಎಂದು ತಿಳಿದು ಬಂದಿದೆ.
In Pics : ಬೆಂಗಳೂರನನ್ನು ಮುಳುಗಿಸಿದ ಪ್ರಳಯಸದೃಶ ಮಳೆ
ಗೋಡೆ ಕುಸಿದು ದಂಪತಿ ಸಾವು
ಇನ್ನು ಕುರುಬರ ಹಳ್ಳಿಯ 18ನೇ ಕ್ರಾಸ್ ನಲ್ಲಿ ಮನೆಯ ಗೋಡೆ ಕುಸಿದು ದಂಪತಿ ಸಾವನ್ನಪ್ಪಿದ್ದಾರೆ. ಶಂಕರಪ್ಪ ಮತ್ತು ಕಮಲಪ್ಪ ಮೃತರಾಗಿದ್ದಾರೆ.
ಮಳೆಯಿಂದ ಮಂತ್ರಿಮಾಲ್ ಪಾರ್ಕಿಂಗ್ ಲಾಟ್ ಗೆ ನೀರು ನುಗ್ಗಿದ್ದು ಜಲಾವೃತವಾಗಿದೆ.
ಎಲ್ಲೆಲ್ಲೂ ಮಳೆ
ಬೆಂಗಳೂರಿನ ಸಿದ್ದಾಪುರ, ಜೆಪಿ ನಗರ, ಜಯನಗರ, ನಾಯಂಡಹಳ್ಳಿ, ಮೆಜೆಸ್ಟಿಕ್, ಕುರುಬರಹಳ್ಳಿ, ಯಶವಂತಪುರ, ಎಸ್.ಎಸ್.ಆರ್ ಲೇಔಟ್, ಬಿಟಿಎಂ ಲೇಔಟ್, ಬಸವನಗುಡಿ, ಮಾಗಡಿ ರಸ್ತೆ, ಕೆ.ಆರ್ ಮಾರುಕಟ್ಟೆ, ವಿಜಯನಗರ, ಮಲ್ಲೇಶ್ವರಂ, ಶಿವಾಜಿನಗರ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಮಳೆ ಆರ್ಭಟಿಸಿದೆ.
ಜೆಸಿ ರೋಡ್, ಸಿದ್ದಾಪುರ, ನಾಯಂಡಹಳ್ಳಿ, ಸಂಪಿಗೆ ರಸ್ತೆ ಮೊದಲಾದೆಡೆ ರಸ್ತೆ ಮೇಲೆ ನೀರು ನಿಂತಿದ್ದು ಟ್ರಾಫಿಕ್ ಜಾಂ ಉಂಟಾಗಿದೆ.
ಬಸ್ ನಿಲ್ದಾಣದೊಳಕ್ಕೆ ನೀರು
ಯಶವಂತಪುರ ಬಸ್ ನಿಲ್ದಾಣದೊಳಕ್ಕೆ ನೀರು ನುಗ್ಗಿದ್ದು ಎರಡು ಅಡಿಯಷ್ಟು ನೀರು ನಿಂತಿದೆ. ಶಿವಾನಂದ ಸರ್ಕಲ್ ರೈಲ್ವೇ ಅಂಡರ್ ಪಾಸ್ ನಲ್ಲಿ ಎರಡು ಕಾರುಗಳು ಜಲಾವೃತವಾಗಿವೆ. ರೈಲ್ವೇ ಅಂಡರ್ ಪಾಸ್ ನಲ್ಲಿ ಬಸ್ಸೊಂದು ಸಿಲುಕಿಕೊಂಡಿದ್ದು ಅರ್ಧದಷ್ಟು ಮುಳುಗಡೆಯಾಗಿದೆ.
ಭಾರೀ ಮಳೆಯಿಂದ ಹೆಬ್ಬಾಳ ಹೆಣ್ಣೂರು ಕೆರೆ ಕೋಡಿ ಬಿದ್ದಿದೆ. ಹೀಗೆ ನಗರದಲ್ಲಿ ಸುರಿದ ನಿರಂತರ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ.
ಮೃತರ ಕುಟುಂಬಕ್ಕೆ ಐದು ಲಕ್ಷ ಪರಿಹಾರ
ನಗರದಲ್ಲಿ ಮಳೆ ಸೃಷ್ಟಿಸಿರುವ ಅವಾಂತರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿ ಆಯುಕ್ತರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಮಳೆಯಿಂದ ಮೃತಪಟ್ಟವರ ಕುಟುಂಬಕ್ಕೆ ಮೇಯರ್ ಸಂಪತ್ ರಾಜ್ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಮಳೆಯ ಹಿನ್ನಲೆಯಲ್ಲಿ ನಾಳಿನ ಬಿಬಿಎಂಪಿ ಸಿಬ್ಬಂದಿಗಳ ರಜೆಯನ್ನು ಮೇಯರ್ ರದ್ದು ಮಾಡಿದ್ದಾರೆ.