ಇಬ್ಬರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ರದ್ದು
ಬೆಂಗಳೂರು, ಆಗಸ್ಟ್ 02: ನಿನ್ನೆಯಷ್ಟೆ ವರ್ಗಾವಣೆ ಮಾಡಿದ್ದ ಇಬ್ಬರು ಐಪಿಎಸ್ ಅಧಿಕಾರಿಗಳ ವರ್ಗಾವಣೆಯನ್ನು ಇಂದು ರಾಜ್ಯ ಸರ್ಕಾರ ರದ್ದು ಮಾಡಿ ಆದೇಶ ಹೊರಡಿಸಿದೆ.
ಎಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿಗಳಾದ ರವಿಕಾಂತೇಗೌಡ, ಉಮೇಶ್ ಕುಮಾರ್ ಅವರನ್ನು ನಿನ್ನೆ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಆದರೆ ಇಂದು ವರ್ಗಾವಣೆಯನ್ನು ರದ್ದು ಮಾಡಿದೆ.
ನಿನ್ನೆ ಈ ಇಬ್ಬರೂ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತಾದರೂ ಯಾವುದೇ ಸ್ಥಳ ನಿಯೋಜನೆ ಮಾಡಿರಲಿಲ್ಲ. ಇಂದು ವರ್ಗಾವಣೆ ರದ್ದಾಗಿರುವ ಕಾರಣ ಇಬ್ಬರೂ ಅಧಿಕಾರಿಗಳು ಎಸಿಬಿಯಲ್ಲಿಯೇ ಮುಂದುವರೆಯಲಿದ್ದಾರೆ. ಇಬ್ಬರೂ ಅಧಿಕಾರಿಗಳು ಅತ್ಯಂತ ಪ್ರಮುಖ ಪ್ರಕ್ರಣಗಳ ತನಿಖೆ ನಡೆಸುತ್ತಿದ್ದರು.

ರವಿಕಾಂತೇಗೌಡ ಅವರು, ಐಎಂಎ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ. ಉಮೇಶ್ ಕುಮಾರ್ ಅವರೂ ಸಹ ಹಲವು ಪ್ರಮುಖ ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ.
ನಿನ್ನೆಯಿಂದ ಹಲವು ಐಪಿಎಸ್ ಅಧಿಕಾರಿಗಳನ್ನು ಯಡಿಯೂರಪ್ಪ ಅವರ ಸರ್ಕಾರವು ವರ್ಗಾವಣೆ ಮಾಡಿದ್ದು, ಪ್ರಮುಖವಾಗಿ ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಆ ಸ್ಥಾನಕ್ಕೆ ಭಾಸ್ಕರ ರಾವ್ ಅವರನ್ನು ನೇಮಿಸಲಾಗಿದೆ. ಅಲೋಕ್ ಕುಮಾರ್ ಅವರು ಬೆಂಗಳೂರು ಆಯುಕ್ತರಾಗಿ ನೇಮಕಗೊಂಡು ಕೇವಲ 47 ದಿನಗಳಷ್ಟೆ ಆಗಿತ್ತು.












Click it and Unblock the Notifications