ಉಪಚುನಾವಣೆ: ಕಾಂಗ್ರೆಸ್ಸಿಗೆ ಪೆಡಂಭೂತದಂತೆ ಕಾಡುತ್ತಿರುವ ಬಿಜೆಪಿಯ ಈ ಬ್ರಹ್ಮಾಸ್ತ್ರ
ಈ ರಾಜಕೀಯವೇ ಹಾಗೇ, ಇಲ್ಲಿ ಯಾರನ್ನೂ ನಂಬುವ ಹಾಗಿಲ್ಲ, ತಲೆಮೇಲೆ ಹೊತ್ತು ಹೊರಲೂ ಸಾಧ್ಯವಿಲ್ಲ. ಅದಕ್ಕೆ ಕೊಡಬಹುದಾದ ಉದಾಹರಣೆ, ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಬಾಂಧವ್ಯ. ಹಾವು-ಮುಂಗುಸಿಯಂತಿದ್ದ ಇವರಿಬ್ಬರು, ಸಮ್ಮಿಶ್ರ ಸರಕಾರದ ವೇಳೆ ಕುಚುಕು ಕುಚುಕುಗಳಾದರು. ಈಗ ಬ್ಯಾಕ್ ಟು ಸೇಮ್..
ಉಪಚುನಾವಣೆಯ ಈ ವೇಳೆ, ಒಬ್ಬರು ಚಾಪೆ ಕೆಳಗೆ ತೂರಲು ಹೋದರೆ, ಇನ್ನೊಬ್ಬರು ರಂಗೋಲಿಯೊಳಗೆ ತೂರುತ್ತಾರೆ. ಅವರನ್ನು ಮಣಿಸಲು ಇವರು, ಇವರನ್ನು ಸೋಲಿಸಲು ಅವರು ಸಾಧ್ಯವಾದ ಎಲ್ಲಾ ಕಾರ್ಯತಂತ್ರವನ್ನು ಬಳಸುತ್ತಿದ್ದಾರೆ. ಸದ್ಯದ ಈ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಮೇಲಾಟದಲ್ಲಿ ಜೆಡಿಎಸ್ ಮಂಕಾದಂತಿದೆ.
ಕಳೆದ ಆರ್.ಆರ್.ನಗರದ ಚುನಾವಣೆಯಲ್ಲಿ ಜೆಡಿಎಸ್ ಸುಮಾರು ಅರವತ್ತು ಸಾವಿರಕ್ಕೂ ಅಧಿಕ ಮತವನ್ನು ಪಡೆದು, ಎರಡೂ ಪಕ್ಷಳಿಗೆ ಉತ್ತಮ ಫೈಟ್ ಅನ್ನು ನೀಡಿತ್ತು. ಆದರೆ, ಈ ಬಾರಿ ಕ್ಷೇತ್ರಕ್ಕೆ ಮತ್ತು ಕಾರ್ಯಕರ್ತರ ವಲಯದಲ್ಲಿ ಅಷ್ಟೇನೂ ಹೆಸರಿಲ್ಲದ ಅಭ್ಯರ್ಥಿಯನ್ನು ಜೆಡಿಎಸ್ ಕಣಕ್ಕಿಳಿಸಿದೆ.
ಸಿಕ್ಕಿದ್ದೇ ಸೀರುಂಡೆ ಎಂದು ಆಖಾಡಕ್ಕೆ ಇಳಿದ ಡಿ.ಕೆ.ಶಿವಕುಮಾರ್ ಬ್ರದರ್ಸ್, ಜೆಡಿಎಸ್ಸಿನಲ್ಲಿ ಗುರುತಿಸಿಕೊಂಡಿರುವ ಮುಖಂಡರು/ಕಾರ್ಯಕರ್ತರನ್ನು ತನ್ನತ್ತ ಸೆಳೆದುಕೊಂಡಿದೆ. ಆದರೆ, ಉಪಚುನಾವಣೆಯ ವೇಳೆ, ಬಿಜೆಪಿ ಬಿಡಬಹುದಾದ ಬ್ರಹ್ಮಾಸ್ತ್ರವೇ ಕಾಂಗ್ರೆಸ್ಸಿಗೆ ನುಂಗಲಾರದ ತುತ್ತಾಗುವ ಸಾಧ್ಯತೆಯಿದೆ. ಅದೇನು?

ಕ್ಷೇತ್ರದ ಉತ್ತಮ ಪರಿಚಯವನ್ನು ಹೊಂದಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ
ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದ ಉತ್ತಮ ಪರಿಚಯವನ್ನು ಹೊಂದಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರನ್ನು ಸೋಲಿಸುವುದು ಡಿಕೆಶಿ ಸಹೋದರರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಡಿಕೆಶಿಗೆ, ಮೇಲ್ನೋಟಕ್ಕೆ ಮುನಿರತ್ನ ಅವರನ್ನು ಸೋಲಿಸುವುದು ಕಷ್ಟ ಎನ್ನುವುದು ಗೊತ್ತಿರುವ ವಿಚಾರ. ಇದರ ಜೊತೆಗೆ, ಬಿಜೆಪಿ, ಚುನಾವಣಾ ದಿನಾಂಕದ ಆಸುಪಾಸಿನಲ್ಲಿ ಬಿಡಬಹುದಾದ ರಾಜಕೀಯ ನಡೆ, ಕಾಂಗ್ರೆಸ್ಸಿಗೆ ಭಾರೀ ಹಿನ್ನಡೆಯನ್ನು ತಂದೊಡ್ಡುವ ಸಾಧ್ಯತೆಯಿಲ್ಲದಿಲ್ಲ. ಅದೇನು?

ಆಗಸ್ಟ್ ಹದಿಮೂರು
ಆಗಸ್ಟ್ ಹದಿಮೂರರಂದು, ಬೆಂಗಳೂರು ಪೂರ್ವ ವಲಯದ ದೇವರ ಜೀವನ (ಡಿಜೆ)ಹಳ್ಳಿ ಮತ್ತು ಕಾಡುಗೊಂಡನ (ಕೆಜೆ)ಹಳ್ಳಿಯಲ್ಲಿ ನಡೆದ ಘಟನೆ, ಇಡೀ, ನಗರವನ್ನೇ ಬೆಚ್ಚಿಬೀಳಿಸಿತ್ತು. ಪ್ರವಾದಿ ಪೈಗಂಬರ್ ಬಗ್ಗೆ ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿಯ ಕುಟುಂಬದ ವ್ಯಕ್ತಿ ಹಾಕಿದ್ದ ಪೋಸ್ಟ್ ಭಾರೀ ಹಿಂಸಾಚಾರಕ್ಕೆ ಕಾರಣವಾಗಿತ್ತು. ಘಟನೆಯ ನಂತರ, ನಡೆದ ಬೆಳವಣಿಗೆಗಳು/ತನಿಖೆಗಳು ಇದರ ಹಿಂದಿನ ಅಸಲಿಯತ್ತು ಬೇರೇಯೇ ಇದೆ ಎನ್ನುವುದು, ತನಿಖಾಧಿಕಾರಿಗಳಿಗೆ ಯಾಕೆ, ಸಾರ್ವಜನಿಕರಿಗೂ ಗೊತ್ತಾಗುತ್ತಾ ಸಾಗಿತು.

ಮಾಜಿ ಗೃಹಮಂತ್ರಿಗಳ (ಕೆ.ಜೆ.ಜಾರ್ಜ್, ರಾಮಲಿಂಗ ರೆಡ್ಡಿ) ನೇತೃತ್ವದಲ್ಲಿ ಸಮಿತಿ
ಕಾಂಗ್ರೆಸ್ಸಿನವರು ಮಾಜಿ ಗೃಹಮಂತ್ರಿಗಳ (ಕೆ.ಜೆ.ಜಾರ್ಜ್, ರಾಮಲಿಂಗ ರೆಡ್ಡಿ) ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಆಂತರಿಕ ವರದಿಯನ್ನು ತರಿಸಿಕೊಂಡಿತು. ವರದಿಯಲ್ಲಿ ಬಿಜೆಪಿಯ ಆಡಳಿತ ವೈಫಲ್ಯ, ಪ್ರವಾದಿಯವರ ಬಗ್ಗೆ ಪೋಸ್ಟ್ ಹಾಕಿದ ವ್ಯಕ್ತಿಯನ್ನು ಕೂಡಲೇ ಬಂಧಿಸುವಲ್ಲಿ ಪೊಲೀಸರ ವೈಫಲ್ಯ, ಗಲಭೆಗೆ ಕಾರಣ ಎಂದು ಹೇಳಲಾಗಿತ್ತು. ಕಾಂಗ್ರೆಸ್ಸಿನ ಈ ವರದಿ, ಸ್ವಾಭಾವಿಕ ಕೂಡಾ. ಆದರೆ, ತನಿಖಾ ಸಂಸ್ಥೆ ನೀಡುವ ವರದಿಯೇ ಅಂತಿಮ (ಸರಕಾರ ಯಾವುದೇ ಇರಲಿ) ಎನ್ನುವುದು ಕಾಂಗ್ರೆಸ್ಸಿಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ.

ಪುಲಿಕೇಶಿ ನಗರದ ಇಬ್ಬರು ಕಾಂಗ್ರೆಸ್ ಮುಖಂಡರು
ಅಸಲಿಗೆ, ಪುಲಿಕೇಶಿ ನಗರದ ಇಬ್ಬರು ಕಾಂಗ್ರೆಸ್ ಮುಖಂಡರು ನಡುವಿನ ದ್ವೇಷವೇ ಡಿಜೆ ಹಳ್ಳಿ ಹೊತ್ತಿ ಉರಿಯಲು ಕಾರಣ ಎನ್ನುವುದು NIA ನೀಡಿದ ವರದಿಯಲ್ಲಿದೆ. ಮಾಜಿ ಬೆಂಗಳೂರಿನ ಮೇಯರ್, ಕಾಂಗ್ರೆಸ್ ಮುಖಂಡ ಸಂಪತ್ ರಾಜ್, ತಮ್ಮದೇ ಪಕ್ಷದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ವಿರುದ್ದ ಕತ್ತಿ ಮೆಸೆಯುತ್ತಿದ್ದದ್ದೇ ಈ ಗಲಭೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಶಾಸಕರಾದ ಜಮೀರ್ ಅಹ್ಮದ್, ರಿಜ್ವಾನ್ ಅರ್ಷದ್
ಇದಲ್ಲದೇ, ತನಿಖಾ ಅಧಿಕಾರಿಗಳು ಕಾಂಗ್ರೆಸ್ ಶಾಸಕರಾದ ಜಮೀರ್ ಅಹ್ಮದ್, ರಿಜ್ವಾನ್ ಅರ್ಷದ್ ಮತ್ತು ಹಲವು ಕಾಂಗ್ರೆಸ್ ಕಾರ್ಪೋರೇಟರ್ ಗಳನ್ನು ವಿಚಾರಣೆ ನಡೆಸಿದ್ದಾಗಿದೆ. ಸಂಪತ್ ರಾಜ್ ಯಾವ ರೀತಿ ಪ್ಲ್ಯಾನ್ ಮಾಡಿದ್ದರು ಎನ್ನುವುದೂ ತನಿಖಾ ವರದಿಯಲ್ಲಿ ರೆಕಾರ್ಡ್ ಆಗಿದೆ. ಈಗ, ಡಿಕೆಶಿ, ತಮ್ಮ ಪಕ್ಷದ ಮುಖಂಡರನ್ನು ರಕ್ಷಿಸಲು ಹೊರಟಿದ್ದಾರೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ.
Recommended Video

ಉಪಚುನಾವಣೆಯ ವೇಳೆ, ಕಾಂಗ್ರೆಸ್ಸಿಗೆ ಡಿಜೆ ಹಳ್ಳಿ ಘಟನೆ ತಿರುಗುಬಾಣವಾಗುವ ಸಾಧ್ಯತೆ
ಹಾಗಾಗಿ, ತಮ್ಮ ಪಕ್ಷದ ಅಖಂಡ ಶ್ರೀನಿವಾಸಮೂರ್ತಿಯನ್ನು, ತಮ್ಮದೇ ಪಕ್ಷದ ಮುಖಂಡರಿಂದ ಕಾಪಾಡಲು ಕಾಂಗ್ರೆಸ್ಸಿಗೆ ಸಾಧ್ಯವಿಲ್ಲ ಎನ್ನುವುದು ಒಂದೆಡೆಯಾದರೆ, ಈ ವಿಚಾರಣೆಗೆ ಅಂತಿಮ ಸೀಲ್ ಹೊಡೆದು, ಕಾಂಗ್ರೆಸ್ ಮುಖಂಡರನ್ನು ತಪ್ಪಿತಸ್ಥರು ಎಂದು ವರದಿ ನೀಡಿದರೆ, ಉಪಚುನಾವಣೆಯ ವೇಳೆ, ಕಾಂಗ್ರೆಸ್ಸಿಗೆ ಇದು ತಿರುಗುಬಾಣವಾಗುವ ಸಾಧ್ಯತೆ ಇಲ್ಲದಿಲ್ಲ.












Click it and Unblock the Notifications