ಬಿಜೆಪಿಯ ಪರಿವರ್ತನಾ ರಥಯಾತ್ರೆ: ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್
ಬಿಜೆಪಿಯ ಪರಿವರ್ತನಾ ರಥಯಾತ್ರೆ ಕರ್ನಾಟಕದಾದ್ಯಂತ ಹೊಸ ಹವಾ ಸೃಷ್ಟಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ರಾಜ್ಯ ಭೇಟಿ, ಪರಿವರ್ತನಾ ಯಾತ್ರೆಗೆ ಖುದ್ದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚಾಲನೆ ನೀಡುತ್ತಿರುವುದು... ಎಲ್ಲ ಭಿನ್ನಾಭಿಪ್ರಾಯಗಳನ್ನೂ ಬದಿಗಿಟ್ಟು ಬಿಜೆಪಿ ನಾಯಕರೆಲ್ಲ ರಥಯಾತ್ರೆಗೆ ಕೈಜೋಡಿಸಿರುವುದು ರಾಜ್ಯ ಬಿಜೆಪಿ ಪಾಳೆಯದಲ್ಲಿ ಹೊಸ ಹುರುಪನ್ನು ತಂದಿದೆ.
ಪರಿವರ್ತನಾ ಯಾತ್ರೆಯ ಐಷಾರಾಮಿ ಬಸ್ಸು ಹೇಗಿದೆ ನೋಡಿ..!
2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುವ ಬಿಜೆಪಿಯ ಶತಾಯಗತಾಯ ಪ್ರಯತ್ನಕ್ಕೆ ಪರಿವರ್ತನಾ ಯಾತ್ರೆ ಮೊದಲ ದಿಟ್ಟ ಹೆಜ್ಜೆ. 75 ದಿನಗಳ ಕಾಲ, 7500 ಕಿ.ಮೀ. ದೂರ ಕ್ರಮಿಸಲಿರುವ ಈ ರಥಯಾತ್ರೆ, ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ 'ಪರಿವರ್ತನೆ'ಯ ಕಹಳೆ ಊದುವುದಕ್ಕೆ ಸಿದ್ಧವಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ದನಿ ಎತ್ತುವುದಕ್ಕೆ ಸಿಕ್ಕ ಹಲವು ಪ್ರಕರಣಗಳಲ್ಲೂ ಮೌನವಾಗಿಯೇ ಇದ್ದ ಬಿಜೆಪಿ ನಾಯಕರು ಇದೀಗ ಮೈಕೊಡವಿಕೊಂಡು ಎದ್ದುನಿಂತಿದ್ದಾರೆ. ಅಷ್ಟಕ್ಕೂ ಈ ಪರಿವರ್ತನಾ ಯಾತ್ರೆ ಮುಂಬರುವ ಚುನಾವಣೆಯಲ್ಲಿ ಪರಿವರ್ತನೆಗೆ ನಾಂದಿಹಾಡುತ್ತಾ? ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯುವ ಬಿಜೆಪಿ ಪ್ರಯತ್ನ ಈ ಯಾತ್ರೆಯ ಮೂಲಕ ಯಶಸ್ವಿಯಾಗುತ್ತಾ ಎಂಬೆಲ್ಲ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಷ್ಟೆ!
ನಾಳೆಯಿಂದ (ನ 2) ಆರಂಭವಾಗಲಿರುವ 'ಯಾತ್ರೆ' ಬಿಜೆಪಿಗೆ ನಿರ್ಣಾಯಕ
ಪರಿವರ್ತನಾ ಯಾತ್ರೆಯಂತೂ ಸದ್ಯಕ್ಕೆ ಸಾಕಷ್ಟು ಸುದ್ದಿ ಮಾಡುತ್ತಿದ್ದು, ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ನಲ್ಲಿ #ParivartanaYatre ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ. ಹಲವು ಬಿಜೆಪಿ ನಾಯಕರು ಪರಿವರ್ತನಾ ಯಾತ್ರೆಯ ಉದ್ದೇಶವನ್ನು ಟ್ವಿಟ್ಟರ್ ಮೂಲಕ ಹೇಳಿದ್ದಾರೆ.
|
ಬನ್ನಿ ಬೆಂಬಲಿಸಿ!!
ಕನ್ನಡಿಗರ ಭರವಸೆಯ ಸರ್ಕಾರಕ್ಕಾಗಿ ಇಂದಿನಿಂದ 75 ದಿನಗಳ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿವರ್ತನಾ ಯಾತ್ರೆ. ಬನ್ನಿ, ಭಾಗವಹಿಸಿ, ಬೆಂಬಲಿಸಿ!! ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
|
ಇದು ಕಾಂಗ್ರೆಸ್ ಸರ್ಕಾರದ ಅಂತ್ಯಕ್ಕೆ ನಾಂದಿ
78 ದಿನಗಳಲ್ಲಿ 7500 ಕಿಮೀ ದೂರ ಕ್ರಮಿಸಿ, ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪಯಣಿಸಲಿರುವ ಪರಿವರ್ತನಾ ಯಾತ್ರೆಯು ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅಂತ್ಯಕ್ಕೆ ನಾಂದಿಹಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.
|
ಬೃಹತ್ ಯಾತ್ರೆ
ಈ ರಥಯಾತ್ರೆಯಲ್ಲಿ ಮೂರುಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಇದು ಹಿಂದೆಂದೂ ನೋಡಿರದ ಬೃಹತ್ ಯಾತ್ರೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಶಾಸಕ ಅರವಿಂದ್ ಲಿಂಬಾವಳಿ ಟ್ವೀಟ್ ಮಾಡಿದ್ದಾರೆ.
|
ಕಾಂಗ್ರೆಸ್ ನ ಹಗರಣವನ್ನು ಹೊರತರಲಿದೆ ಯಾತ್ರೆ
ಈ ಪರಿವರ್ತನಾ ಯಾತ್ರೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಅಸಂಖ್ಯ ಹಗರಣಗಳನ್ನು, ಅರಾಜಕತೆಯನ್ನೂ, ಆಡಳಿತಾತ್ಮಕ ವೈಫಲ್ಯವನ್ನೂ ನಾವು ಹೊರಹಾಕಲಿದ್ದೇವೆ ಎಂದು ಶಾಸಕ ಸಿ ಟಿ ರವಿ ಅವರು ಟ್ವೀಟ್ ಮಾಡಿದ್ದಾರೆ.
|
ಆಧುನಿಕ ಭಾರತದ ಇತಿಹಾಸದಲ್ಲಿ ಬೃಹತ್ ಯಾತ್ರೆ
ಈ ಯಾತ್ರೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವ ರು ಚಾಲನೆ ನೀಡಲಿದ್ದಾರೆ. ಇದು ಆಧುಕಿನ ಭಾರತದ ಇತಿಹಾಸದಲ್ಲೇ ಅತ್ಯಂತ ಬೃಹತ್ ರಥಯಾತ್ರೆ. ಇದು ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧದ ಹೋರಾಟ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಟ್ವೀಟ್ ಮಾಡಿದ್ದಾರೆ.