110 ಕೆ.ಜಿ ಮಾಲು ಸಮೇತ ಸಿಕ್ಕಿಬಿದ್ದ ಗಾಂಜಾ ಶಿವ!
ಬೆಂಗಳೂರು, ನ.13: ಗಾಂಜಾ ಸೇದುವರಂತೆ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ ರಾಜಗೋಪಾಲನಗರ ಪೊಲೀಸರು ನೂರು ಹತ್ತು ಕೆ.ಜಿ ಗಾಂಜಾ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಹೆಸರು ಶಿವ ಅಲಿಯಾಸ್ ಶಿವಕುಮಾರ್. ಚಿಕ್ಕಬಳ್ಳಾಪುರದ ಕುರುಬರ ಬೀದಿ ನಿವಾಸಿ. ಈತ ವೃತ್ತಿಯಲ್ಲಿ ಚಾಲಕನಾಗಿದ್ದು, ತರಕಾರಿಯನ್ನು ತಮಿಳುನಾಡು ಮತ್ತು ಆಂಧ್ರ ಪ್ರದೇಶಕ್ಕೆ ಸಾಗಿಸುತ್ತಿದ್ದ. ಆಂಧ್ರಪ್ರದೇಶದಲ್ಲಿ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಚಿಕ್ಕಬಳ್ಳಾಪುರದ ಮನೆಯಲ್ಲಿ ತಂದಿಡುತ್ತಿದ್ದ. ಬಳಿಕ ಅದನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ.
ಮಾರು ವೇಷದಲ್ಲಿ ಕಾರ್ಯಾಚರಣೆ
ಖಚಿತ ಮಾಹಿತಿ: ಯುವಕನೊಬ್ಬ ಕೆ.ಜಿ. ಗಟ್ಟಲೇ ಗಾಂಜಾ ಮಾರುತ್ತಿದ್ದಾನೆ ಎಂಬ ಖಚಿತ ಮಾಹಿತಿ ರಾಜಗೋಪಾಲನಗರ ಪೊಲೀಸರಿಗೆ ಸಿಕ್ಕಿತ್ತು. ಪೊಲೀಸ್ ಇನ್ಸ್ಪೆಕ್ಟರ್ ಐಯಣ್ಣರೆಡ್ಡಿ ನೇತೃತ್ವದಲ್ಲಿ ಪೊಲೀಸರಿಬ್ಬರು ಕಾರ್ಯಾಚರಣೆಗೆ ಇಳಿದಿದ್ದರು. ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ಜಿ.ಕೆ.ಡಬ್ಲೂ ಲೇಔಟ್ನಲ್ಲಿ ಮಾರಾಟ ಮಾಡುವ ಜಾಡು ಹಿಡಿದು ಆರೋಪಿಯ ಸೆರೆಗೆ ಪ್ರಯತ್ನಿಸಿದ್ದರು. ಆದರೆ, ಆರೋಪಿ ಶಿವಕುಮಾರ್ ಕೈಗೆ ಸಿಕ್ಕಿರಲಿಲ್ಲ. ಶಿವಕುಮಾರ್ ಮೊಬೈಲ್ ಸಂಪರ್ಕ ಸಾಧಿಸಿದ ಪೊಲೀಸರು ಗಾಂಜಾ ಕೊಡುವಂತೆ ಕೇಳಿದ್ದರು.

ಮೊದಲು ಅನುಮಾನಗಂಡಿದ್ದ ಶಿವ ನಂಬಿರಲಿಲ್ಲ. ವಿಡಿಯೋ ಕಾಲ್ ಮಾಡಿ, ನಗದು ತೋರಿಸುವಂತೆ ಬೇಡಿಕೆ ಇಟ್ಟಿದ್ದ. ಗಾಂಜಾ ಮಾರಾಟ ಮಾಡುವರ ವೇಷ ಧರಿಸಿ ವಿಡಿಯೋ ಕಾಲ್ ಮಾಡಿ ನಂಬಿಕೆ ಬರುವಂತೆ ಪೊಲೀಸರು ನಟಿಸಿದ್ದಾರೆ. ನಗದು ಹಣವನ್ನು ತೋರಿಸಿದ್ದಾರೆ. ಇದನ್ನು ನಂಬಿ ಬಂದ ಶಿವಕುಮಾರ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಶಿವಕುಮಾರ್ನನ್ನು ವಶಕ್ಕೆ ಪಡೆದಾಗ ಹದಿನೇಳು ಕೆ.ಜಿ. ಗಾಂಜಾ ಸಿಕ್ಕಿದ್ದು, ಅದನ್ನು ವಶಪಡಿಸಿಕೊಂಡಿದ್ದಾರೆ.

ಮನೆಯಲ್ಲಿತ್ತು 90 ಕೆ.ಜಿ. ಗಾಂಜಾ !
ಶಿವಕುಮಾರ್ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಚಿಕ್ಕಬಳ್ಳಾಪುರದ ಮನೆಯಲ್ಲಿ ತೊಂಬತ್ತು ಮೂರು ಕೆ.ಜಿ. ಅಡಗಿಸಿಟ್ಟಿರುವ ಸಂಗತಿ ಬಾಯಿಬಿಟ್ಟಿದ್ದಾನೆ. ಅಲ್ಲಿಗೆ ಕರೆದೊಯ್ದು ಪರಿಶೀಲಿಸಿದಾಗ ಸಿಮೆಂಟ್ ಮೂಟೆಗಳ ರೀತಿಯಲ್ಲಿ ಅವಿತಿಟ್ಟಿರುವುದು ಬೆಳಕಿಗೆ ಬಂದಿದೆ. ಅಷ್ಟೂ ಗಾಂಜಾ ಮೂಟೆಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತರಕಾರಿ ಟ್ರಕ್ ಚಾಲಕನಾಗಿದ್ದ ಶಿವಕುಮಾರ್ ಆಂಧ್ರ ಪ್ರದೇಶ, ತಮಿಳುನಾಡಿಗೆ ಹೋಗುತ್ತಿದ್ದ. ಆಂಧ್ರ ಪ್ರದೇಶದ ಸಂಪರ್ಕದಿಂದ ಇಷ್ಟು ಮೌಲ್ಯದ ಗಾಂಜಾ ತರಿಸಿರುವ ಮಾಹಿತಿ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ. ಶಿವಕುಮಾರ್ ಈ ಹಿಂದೆಯೂ ಗಾಂಜಾ ಮಾರಾಟ ಮಾಡುತ್ತಿದ್ದನೇ ? ಈತನ ಡ್ರಗ್ ಜಾಲ ಎಲ್ಲಿದೆ ಎಂಬುದನ್ನು ಪೊಲೀಸರು ಪತ್ತೆಗೆ ಮುಂದಾಗಿದ್ದಾರೆ.

ಜೈಲಿನ ಲಿಂಕ್ ? : ಶಿವಕುಮಾರ್ ಜತೆಗೆ ಮತ್ತೊಬ್ಬ ವ್ಯಕ್ತಿಯಿದ್ದು, ಆತ ಜೈಲಿನಲ್ಲಿದ್ದಾನೆ ಎನ್ನಲಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ. ಇಷ್ಟು ಪ್ರಮಾಣದ ಗಾಂಜಾ ಎಲ್ಲಿಂದ ಯಾರು ಸಾಗಿಸಿದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಆಂಧ್ರಪ್ರದೇಶದ ದೊಡ್ಡ ಜಾಲ ಇದರ ಹಿಂದೆ ಅಡಗಿರುವ ಶಂಕೆ ವ್ಯಕ್ತವಾಗಿದ್ದು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದರ ತನಿಖೆಗಾಗಿ ವಿಶೇಷ ತಂಡವನ್ನು ಇನ್ಸ್ಪೆಕ್ಟರ್ ಐಯಣ್ಣರೆಡ್ಡಿ ನೇತೃತ್ವದಲ್ಲಿ ರಚಿಸಲಾಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications