ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ರೈಲು ಸಂಚಾರ ಆರಂಭ
ಬೆಂಗಳೂರು, ಜೂನ್ 07; ನೈಋತ್ಯ ರೈಲ್ವೆ ಸುಮಾರು 314 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಬೆಂಗಳೂರು ನಗರದ ಬೈಯಪ್ಪನಹಳ್ಳಿಯ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಲ್ಲಿ ಸೋಮವಾರ ರಾತ್ರಿಯಿಂದ ರೈಲುಗಳ ಸಂಚಾರ ಆರಂಭವಾಗಿದೆ.
ಬೆಂಗಳೂರು ನಗರದ ಐಷಾರಾಮಿ ರೈಲು ನಿಲ್ದಾಣ ನಿರ್ಮಾಣವಾದ ಸುಮಾರು ಒಂದು ವರ್ಷದ ಬಳಿಕ ರೈಲು ಸಂಚಾರ ಪ್ರಾರಂಭಗೊಂಡಿದೆ. ಆದರೆ ನಿಲ್ದಾಣ ಇನ್ನೂ ಅಧಿಕೃತವಾಗಿ ಉದ್ಘಾಟನೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ರೈಲು ನಿಲ್ದಾಣ ಉದ್ಘಾಟನೆ ಮಾಡಲಿದ್ದು, ದಿನಾಂಕ ನಿಗದಿಯಾಗಿಲ್ಲ.
ರೈಲು ನಂಬರ್ 12684 ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಎರ್ನಾಕುಲಂ ರೈಲು ನಿಲ್ದಾಣದಿಂದ ಸಂಚಾರ ಆರಂಭಿಸಿದ ಮೊದಲ ರೈಲಾಗಿದೆ. ವಾರಕ್ಕೆ ಮೂರು ಬಾರಿ ಈ ರೈಲು ಸಂಚಾರ ನಡೆಸಲಿದೆ. ಪ್ರಾಯೋಗಿಕ ನೈಋತ್ಯ ರೈಲ್ವೆ ಟರ್ಮಿನಲ್ನಿಂದ ಮೂರು ಜೋಡಿ ರೈಲುಗಳನ್ನು ಓಡಿಸುತ್ತಿದೆ.
ಸಂಪೂರ್ಣ ಹವಾನಿಯಂತ್ರಿತ ರೈಲು ನಿಲ್ದಾಣವನ್ನು ವಿಮಾನ ನಿಲ್ದಾಣ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ದೇಶದ ಐಷಾರಾಮಿ ರೈಲು ನಿಲ್ದಾಣಗಳ ಪಟ್ಟಿಗೆ ಇದು ಸಹ ಸೇರ್ಪಡೆಯಾಗಿದ್ದು, ಬೆಂಗಳೂರು ನಗರದ ಹಿರಿಮೆಗೆ ಮತ್ತೊಂದು ಗರಿ ಬಂದಿದೆ.

ಪ್ರಾಯೋಗಿಕವಾಗಿ ರೈಲು ಸಂಚಾರ ಆರಂಭ
ಬೆಂಗಳೂರು ನಗರದ ಮೆಜೆಸ್ಟಿಕ್, ಯಶವಂತಪುರ ನಿಲ್ದಾಣಗಳ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ನೈಋತ್ಯ ರೈಲ್ವೆ ಬೈಯಪ್ಪನಹಳ್ಳಿಯಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿರ್ಮಾಣ ಮಾಡಿದೆ. ಈ ಟರ್ಮಿನಲ್ನಿಂದ 50 ಜೋಡಿ ರೈಲುಗಳನ್ನು ಓಡಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ. ಸೋಮವಾರದಿಂದ ಪ್ರಾಯೋಗಿಕವಾಗಿ ರೈಲು ಸಂಚಾರವನ್ನು ಆರಂಭಿಸಲಾಗಿದೆ.

ಯಾವ-ಯಾವ ರೈಲುಗಳ ಸಂಚಾರ
ನೈಋತ್ಯ ರೈಲ್ವೆ ಬಾಣಸವಾಡಿಯಿಂದ ಸಂಚಾರ ನಡೆಸುತ್ತಿದ್ದ ಮೂರು ಜೋಡಿ ರೈಲುಗಳನ್ನು ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ಗೆ ಸ್ಥಳಾಂತರ ಮಾಡಿದೆ. ಸೋಮವಾರ ರಾತ್ರಿ 12684 ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಎರ್ನಾಕುಲಂ ರೈಲು ನಿಲ್ದಾಣದಿಂದ ಹೊರಟ ಮೊದಲ ರೈಲಾಗಿದೆ. ಈ ರೈಲು ವಾರಕ್ಕೆ ಮೂರು ಬಾರಿ ಸಂಚಾರ ನಡೆಸಲದೆ.
ಉಳಿದಂತೆ ರೈಲು ಸಂಖ್ಯೆ 16319/16320 ಕೊಚ್ಚುವೆಲಿ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಮತ್ತು ರೈಲು ಸಂಖ್ಯೆ 22354/ 22353 ಪಾಟ್ನಾ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ರೈಲುಗಳು ನಿಲ್ದಾಣದಿಂದ ಸಂಚಾರ ನಡೆಸಲಿವೆ.

ಐಷಾರಾಮಿ ರೈಲು ನಿಲ್ದಾಣ
7 ಪ್ಲಾಟ್ ಫಾರ್ಮ್ಗಳನ್ನು ಹೊಂದಿರುವ ಬೈಯಪ್ಪನಹಳ್ಳಿಯ ಐಷಾರಾಮಿ ರೈಲು ನಿಲ್ದಾಣವನ್ನು ಸುಮಾರು 314 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಎಂದು ನಾಮಕರಣ ಮಾಡಲಾಗಿದೆ. ಈ ಕಟ್ಟಡ ಸಂಪೂರ್ಣ ಹವಾನಿಯಂತ್ರಿತವಾಗಿದೆ. 4,200 ಚದರ ಮೀಟರ್ ವಿಸ್ತೀರ್ಣದ ರೈಲು ನಿಲ್ದಾಣ ಅತ್ಯಾಧುನಿಕ ವ್ಯವಸ್ಥೆ ಹೊಂದಿದೆ. ಡಿಜಿಟಲ್ ಮೂಲಕ ರೈಲು ಸಂಚಾರದ ರಿಯಲ್ ಟೈಂ ಮಾಹಿತಿ ಲಭ್ಯವಾಗಲಿದೆ. 4 ಲಕ್ಷ ಲೀಟರ್ ನೀರಿನ ಮರುಬಳಕೆ ಘಟಕ ಹೊಂದಿದೆ, ವಿಐಪಿ ಲಾಂಜ್, ಫುಡ್ಕೋರ್ಟ್, 250 ನಾಲ್ಕು ಚಕ್ರ, 900 ಬೈಕ್ಗಳ ಪಾರ್ಕಿಂಗ್ ವ್ಯವಸ್ಥೆ ಈ ನಿಲ್ದಾಣದಲ್ಲಿದೆ.

ಅಧಿಕೃತವಾಗಿ ಉದ್ಘಾಟನೆಯಾಗಿಲ್ಲ
ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿರ್ಮಾಣಗೊಂಡು ಒಂದು ವರ್ಷ ಕಳೆದಿದೆ. ಇದರ ಉದ್ಘಾಟನೆಗೆ ಹಲವು ಬಾರಿ ದಿನಾಂಕ ನಿಗದಿ ಮಾಡಿದರೂ ಅಧಿಕೃತವಾಗಿ ಉದ್ಘಾಟನೆಗೊಂಡಿಲ್ಲ. ನೈಋತ್ಯ ರೈಲ್ವೆ ಸೋಮವಾರದಿಂದ ಪ್ರಾಯೋಗಿಕ ರೈಲು ಸಂಚಾರ ಆರಂಭಿಸಿದೆ. ಈ ಮೂಲಕ ರೈಲು ನಿಲ್ದಾಣದಲ್ಲಿ ಜನರ ಸಂಚಾರ ಪ್ರಾರಂಭವಾಗಿದೆ. ಆದರೆ ಟರ್ಮಿನಲ್ ಅಧಿಕೃತವಾಗಿ ಉದ್ಘಾಟನೆ ಆಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಟರ್ಮಿನಲ್ ಉದ್ಘಾಟನೆ ಮಾಡಲಿದ್ದಾರೆ. ಆದರೆ ಕಾರ್ಯಕ್ರಮಕ್ಕೆ ಇನ್ನೂ ದಿನಾಂಕ ನಿಗದಿಯಾಗಿಲ್ಲ.
|
ಬಿಎಂಟಿಸಿಯಿಂದ ಬಸ್ ವ್ಯವಸ್ಥೆ
ಬೈಯಪ್ಪನಹಳ್ಳಿಯ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ತಲುಪುವುದು ಸುಲಭ. ಏಕೆಂದರೆ ಬೈಯಪ್ಪನಹಳ್ಳಿ ತನಕ ನಮ್ಮ ಮೆಟ್ರೋ ಸಂಚಾರ ನಡೆಸುತ್ತದೆ. ಬೆಂಗಳೂರಿನ ವಿವಿಧ ಪ್ರದೇಶಗಳಿಂದ ಟರ್ಮಿನಲ್ಗೆ ಜನರು ಆಗಮಿಸಲು ಸಹಾಯಕವಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಂಪರ್ಕ ಬಸ್ಗಳನ್ನು ಓಡಿಸಲಿದೆ. ಈ ಕುರಿತು ವೇಳಾಪಟ್ಟಿ, ಮಾರ್ಗದ ವಿವರ ಬಿಡುಗಡೆ ಮಾಡಲಾಗಿದೆ.












Click it and Unblock the Notifications