ಬೆಂಗಳೂರು ರಸ್ತೆ, ಜಂಕ್ಷನ್ನಲ್ಲಿ ಸಂಚಾರ ಸಮಸ್ಯೆ ಕಡಿಮೆಯಾಗಿದೆ
ಬೆಂಗಳೂರು ಜುಲೈ 25: "ಅಧಿಕಾರಿಗಳ ಪರಿಶೀಲನೆ ನಂತರ ನಗರದ ಪ್ರಮುಖ ರಸ್ತೆ, ಜಂಕ್ಷನ್ ಗಳಲ್ಲಿ ಸಾಕಷ್ಟು ಕೆಲಸಗಳಾಗಿವೆ. ಬೇರೆ ಬೇರೆ ಸಮಯದಲ್ಲಿ ವಾಹನ ಸಾಂದ್ರತೆಗೆ ಅನುಗುಣವಾಗಿ ಸಂಚಾರ ದಟ್ಟಣೆ ಸಮಸ್ಯೆ ಶೇ. 15 ರಿಂದ ಶೇ.40 ರಷ್ಟು ಸುಧಾರಿಸಿರುವ ಬಗ್ಗೆ ಸಂಚಾರಿ ಪೊಲೀಸ್ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದೆ" ಎಂದು ಬಿಬಿಎಂಪಿ ಮುಖ್ಯ ಆಯಕ್ತ ತುಷಾರ್ ಗಿರಿನಾಥ್ ಹೇಳಿದರು.
ಸೋಮವಾರ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಸಮನ್ವಯ ಸಭೆ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, "ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಒಟ್ಟಿಗೆ ಸೇರಿ ಎಲ್ಲೆಲ್ಲಿ ಏನು ಸಮಸ್ಯೆಗಳಿ ಇವೆ. ಎಲ್ಲಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂಬುದನ್ನು ಅರಿತು ಸಮರ್ಪಕವಾಗಿ ಕೆಲಸ ಮಾಡಲಾಗುತ್ತಿದೆ" ಎಂದರು.
"ಸಂಚಾರ ದಟ್ಟಣೆಯನ್ನು ಹಂತ-ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಈ ಪೈಕಿ ಈಗಾಗಲೇ ಪರಿಶೀಲಿಸಿರುವ ಪ್ರಮುಖ ಜಂಕ್ಷನ್ಗಳಲ್ಲಿ ಕೈಗೆತ್ತಿಕೊಂಡಿರುವ ಕ್ರಮಗಳಿಂದ ವಿವಿಧ ಜಂಕ್ಷನ್ಗಳಲ್ಲಿ ಬೇರೆ ಬೇರೆ ಸಮಯದಲ್ಲಿ ಶೇ. 15 ರಿಂದ ಶೇ. 40 ರವರೆಗೆ ಸಂಚಾರ ದಟ್ಟಣೆ ಕಡಿಮೆಯಾಗಿದೆ. ಈ ಬಗ್ಗೆ ಮೂಲಸೌಕರ್ಯ ಸಂಸ್ಥೆಗೆ ಪರಿಶೀಲನೆ ನಡೆಸಿ ನಿಖರ ವರದಿ ನೀಡಲು ತಿಳಿಸಲಾಗಿದೆ" ಎಂದು ಹೇಳಿದರು.

ಪೂರ್ತಿ ಸಂಚಾರ ದಟ್ಟಣೆ ನಿಯಂತ್ರಣ ಶೀಘ್ರ
"ಪ್ರಮುಖ ಜಂಕ್ಷನ್ಗಳಾದ ಹೆಬ್ಬಾಳ, ಕೆ. ಆರ್. ಪುರಂ, ಗೊರಗುಂಟೆಪಾಳ್ಯ, ಸಾರಕ್ಕಿ, ಸಿಲ್ಕ್ ಬೋರ್ಡ್ ಸೇರಿದಂತೆ ಇನ್ನಿತರ ಜಂಕ್ಷನ್ಗಳಲ್ಲಿ ವಿವಿಧ ಇಲಾಖೆಗಳಿಂದ ಕೆಲಸ ನಡೆಯುತ್ತಿದೆ. ಬಹುತೇಕ ಕಡೆ ಶೇ.50 ರಷ್ಟು ಕೆಲಸ ಪೂರ್ಣಗೊಂಡಿದೆ. ಬಾಕಿ ಇರುವ ಶೇ. 50 ರಷ್ಟು ಕೆಲಸ ಮುಗಿಸಿದರೆ ಸಂಚಾರ ದಟ್ಟಣೆಯ ಸಮಸ್ಯೆ ನಿಯಂತ್ರಣಕ್ಕೆ ಬರಲಿದೆ" ಎಂದು ಬಿಬಿಎಂಪಿ ಆಯುಕ್ತರು ಭರವಸೆ ನೀಡಿದರು.

3,000 ರಸ್ತೆಗುಂಡಿ ಮುಚ್ಚಲಾಗಿದೆ
"ನಗರದಲ್ಲಿ ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ಸಂಚಾರಿ ಪೊಲೀಸ್ ಇಲಾಖೆಯಿಂದ ಗುರುತಿಸಿರುವ ಸುಮಾರು 3,750 ಗುಂಡಿಗಳಲ್ಲಿ ಸುಮಾರು 3,000 ಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಬಾಕಿ ಇರುವ 750 ಗುಂಡಿಗಳನ್ನು ವಾರದೊಳಗಾಗಿ ಮುಚ್ಚಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು" ಎಂದು ಆಯುಕ್ತರು ತಿಳಿಸಿದರು.

ವಾಟರ್ ಲಾಗಿಂಗ್ ಸಮಸ್ಯೆಗೆ ಶೀಘ್ರವೇ ಪರಿಹಾರ
"ಬಿಬಿಎಂಪಿ ವ್ಯಾಪ್ತಿಯಲ್ಲಿ 50 ಕಡೆ ವಾಟರ್ ಲಾಗಿಂಗ್ ಪಾಯಿಂಟ್ಗಳನ್ನು ಗುರುತಿಸಿದ್ದೇವೆ. ಬಹುತೇಕ ಕಡೆ ವಾಟರ್ ಲಾಗಿಂಗ್ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಇನ್ನು 54 ರಸ್ತೆ ಮೇಲ್ಮೈ ಹಾಳಾಗಿರುವ ಪೈಕಿ ಕೆಲವೆಡೆ ಸಮಸ್ಯೆ ಬಗೆಹರಿದಿದೆ. ಸಂಪೂರ್ಣ ರಸ್ತೆಯನ್ನು ಸರಿಪಡಿಸಿಬೇಕಿದೆ. ಈ ಪೈಕಿ ಒಂದು ವಾರದಲ್ಲಿ ತಾತ್ಕಾಲಿಕವಾಗಿ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಕಲ್ಪಿಸಿ ಇರುವ ಸಮಸ್ಯೆಗಳನ್ನು ಬಗೆಹರಿಸಲಾಗುವುದು" ಎಂದು ತಿಳಿಸಿದರು.
Recommended Video

ಸ್ಮಾರ್ಟ್ ಸಿಟಿ ರಸ್ತೆಗಳ ನಿರ್ವಹಣೆ ಮಾಡಿ
ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿರುವ ರಸ್ತೆಗಳಲ್ಲಿ ವಾಟರ್ ಲಾಗಿಂಗ್ ಆಗದಂತೆ ನೋಡಿಕೊಳ್ಳಬೇಕು. ಎಲ್ಲಾದರೂ ರಸ್ತೆ ಗುಂಡಿಗಳು ಬಿದ್ದಿದ್ದರೆ ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಪಾದಚಾರಿ ಮಾರ್ಗವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಆಯಾ ಇಲಾಖೆ ಮತ್ತು ಮಂಡಳಿ ಅಧಿಕಾರಿಗಳಿಗೆ ತಿಳಿಸಿದರು. ಮುಖ್ಯವಾಗಿ ಕಾಮಗಾರಿ ವೇಳೆ ಹಾಕಲಾಗಿದ್ದ ವಸ್ತುಗಳನ್ನು ಕೂಡಲೇ ತೆರವುಗೊಳಿಸಿ ಎಂದು ಸ್ಮಾರ್ಟ್ ಸಿಟಿ ಮುಖ್ಯ ಅಭಿಯಂತರರಿಗೆ ಆಯುಕ್ತರು ಸೂಚಿಸಿದರು.
ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಬಿಎಂಪಿ ಹಾಗೂ ಪೊಲೀಸ್ ಸಂಚಾರ ವಿಭಾಗ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಸಭೆ ನಡೆಸಿ ನಗರದ ಪ್ರಮುಖ ಜಂಕ್ಷನ್ ಗಳಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರು. ಇದಾದ ಬಳಿಕ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತಿತರ ಅಧಿಕಾರಿಗಳ ತಂಡ ಜಂಕ್ಷನ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿತ್ತು.












Click it and Unblock the Notifications