ರೋಗಿ ಜೀವ ಕಾಪಾಡಲು ಮೆಕಾನಿಕ್ ಆಗಿ ಬದಲಾದ ಸಂಚಾರ ಪೊಲೀಸ್ ಕಾನ್ಸ್ಟೇಬಲ್ !
ಬೆಂಗಳೂರು, ಫೆ. 02: ಸಂಚಾರ ವಿಭಾಗದ ಕಾನ್ಸ್ಟೇಬಲ್ ತೋರಿದ ಸಮಯ ಪ್ರಜ್ಞೆ ಮತ್ತು ಕಾಳಜಿಯಿಂದ ನಡು ರಸ್ತೆಯಲ್ಲಿ ಜೀವನ್ಮರಣದಲ್ಲಿ ಒದ್ದಾಡುತ್ತಿದ್ದ ರೋಗಿಯ ಜೀವ ಉಳಿದಿದೆ.
ಟೋಯಿಂಗ್ ವಿವಾದದಿಂದ ಬೆಂಗಳೂರಿನಲ್ಲಿ ಸಂಚಾರ ಪೊಲೀಸರ ಬಗ್ಗೆ ಸಾರ್ವಜನಿಕ ಟೀಕೆ ಕೇಳಿ ಬರುತ್ತಿವೆ. ಇದರ ನಡುವೆ ಕಬ್ಬನ್ ಪಾರ್ಕ್ ಸಂಚಾರ ಠಾಣೆ ವಿಭಾಗದ ಪೊಲೀಸ್ ಕಾನ್ಸ್ಟೇಬಲ್ ರೋಗಿಯ ಜೀವ ಉಳಿಸಲು ಮಾಡಿದ ಕಾರ್ಯ ಇದೀಗ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ. ಸಮಯ ಪ್ರಜ್ಞೆ ತೋರಿ ರೋಗಿಯ ಜೀವ ಉಳಿಸಲು ಸಹಕರಿಸಿದ ಸಂಚಾರ ಕಾನ್ಸ್ಟೇಬಲ್ ಹೆಸರು ಕಾಸಪ್ಪ ಕಲ್ಲೂರು. ಈತ ಸಮಯ ಪ್ರಜ್ಞೆ ಮೆರೆಯದಿದ್ದರೆ, ಆಂಬ್ಯುಲೆನ್ಸ್ನಲ್ಲಿ ಒದ್ದಾಡುತ್ತಿದ್ದ ರೋಗಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆ ಸೇರದೆ ಅನಾಹುತ ಆಗುತ್ತಿತ್ತು. ತನ್ನದಲ್ಲದ ಕೆಲಸ ಮಾಡುವ ಮೂಲಕ ಕಾಸಪ್ಪ ಕಲ್ಲೂರು ಮಾಡಿದ ಕೆಲಸ ಪೊಲೀಸ್ ಇಲಾಖೆಯ ಪ್ರಶಂಸೆಗೆ ಪಾತ್ರವಾಗಿದೆ.
ಏನಿದು ಘಟನೆ: ಗ್ಲೋಬಲ್ ಆಸ್ಪತ್ರೆಯಿಂದ ಬೇರೆ ಆಸ್ಪತ್ರೆಗೆ ವರ್ಗಾವಣೆ ಮಾಡಿ ತುರ್ತು ಚಿಕಿತ್ಸೆ ನೀಡುವಂತೆ ವೈದ್ಯರು ಶಿಫಾರಸು ಮಾಡಿದ್ದರು. ಅದರಂತೆ ರೋಗಿಯನ್ನು ಆಂಬ್ಯುಲೆನ್ಸ್ ಮೂಲಕ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ದುರಾದೃಷ್ಟ ವಶಾತ್ ರೋಗಿಯನ್ನು ಕರೆತರುತ್ತಿದ್ದ ಆಂಬ್ಯುಲೆನ್ಸ್ ಸಿಐಡಿ ಕಚೇರಿ ಎದುರು ಪಂಚರ್ ಆಗಿದೆ. ಇದರಿಂದ ಆತಂಕಗೊಂಡ ರೋಗಿಯ ಪತ್ನಿ ಮತ್ತು ಮಗಳು 108 ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ಸುಮಾರು ಮೂವತ್ತು ನಿಮಿಷ ಕರೆ ಮಾಡಿದರೂ ಆಂಬ್ಯುಲೆನ್ಸ್ ಬಂದಿಲ್ಲ.

ಆಂಬ್ಯುಲೆನ್ಸ್ ಗಮನಿಸಿದ ಸಂಚಾರ ಪೇದೆ ಕಾಸಪ್ಪ ಕಲ್ಲೂರ ಕೂಡ ಆಂಬ್ಯುಲೆನ್ಸ್ ಕರೆಸುವ ಪ್ರಯತ್ನ ಮಾಡಿ ಸೋತಿದ್ದಾರೆ. ಅತ್ತ ಆಕ್ಸಿಜನ್ ನೆರವಿನಿಂದ ಉಸಿರಾಡುತ್ತಿದ್ದ ರೋಗಿ ಸ್ಥಿತಿ ನೋಡಿ ಪೋಷಕರು ಕಣ್ಣೀರು ಹಾಕುತ್ತಿದ್ದರು. ಇದನ್ನು ಮನಗೊಂಡ ಸಂಚಾರ ಪೇದೆ ಮೆಕ್ಯಾನಿಕ್ ಆಗಿ ಬದಲಾಗಿ ಆಂಬ್ಯುಲೆನ್ಸ್ಗೆ ಗೆ ಕ್ಷಣಾರ್ಧದಲ್ಲಿ ಟಯರ್ ಬದಲಿಸಿದ್ದಾರೆ. ಅಲ್ಲದೇ ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಸಮಯಕ್ಕೆ ಸರಿಯಾಗಿ ರೋಗಿಯನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಚಾರ ಪೇದೆ ಆಂಬ್ಯುಲೆನ್ಸ್ ಟಯರ್ ಬದಲಿಸಿ ರೋಗಿಗೆ ನೆರವು ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಕಾಸಪ್ಪ ಕಲ್ಲೂರು ತೋರಿದ ಸಮಯ ಪ್ರಜ್ಞೆ ಹಾಗೂ ಮಾನವೀಯತೆ ಬೆಂಗಳೂರು ಸಂಚಾರ ಪೊಲೀಸ್ ವಲಯಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸ್ವತಃ ಈ ವಿಚಾರವನ್ನು ಹಂಚಿಕೊಂಡು ಕಾಸಪ್ಪ ಕಲ್ಲೂರ ಕೆಲಸ ಕೇಳಿ ಕೊಂಡಾಡಿದ್ದಾರೆ.

ರಸ್ತೆಯಲ್ಲಿ ಏನೇ ಆದರೂ ಜನರೇ ತಲೆ ಕೆಡಿಸಿಕೊಳ್ಳುವುದಿಲ್ಲ. ಇಂತಹ ಸಂದರ್ಭದಲ್ಲಿ ಸಂಚಾರ ಕಾನ್ಸ್ಟೇಬಲ್ ಅಳಿಲು ಸೇವೆ ಮಾಡಿ ರೋಗಿಯ ಜೀವ ಉಳಿಸಲು ಮಾಡಿದ ಪ್ರಯತ್ನಕ್ಕೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗಿದೆ.












Click it and Unblock the Notifications