ಕೋವಿಡ್ ದೇಹಗಳ ಅಂತ್ಯ ಸಂಸ್ಕಾರಕ್ಕೂ ಬಂತೂ ಟೋಕನ್ ಸಿಸ್ಟಂ !
ಬೆಂಗಳೂರು, ಏಪ್ರಿಲ್ 20: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಎರಡಲೇ ಅಲೆ ಹೊಸ ಅವಾಂತರವನ್ನೇ ಸೃಷ್ಟಿಸಿದೆ. ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗಾಗಿ ಬೇಟೆ ಆರಂಭಿಸಿವೆ. ಹಾಸಿಗೆ ಸಿಗದೇ, ಕೋವಿಡ್ ಸೋಂಕಿತ ರೋಗಿಗಳು ಆಸ್ಪತ್ರೆಗಳಿಗಾಗಿ ಅಲೆದಾಡುತ್ತಿದ್ದಾರೆ. ಕೋವಿಡ್ ಬಲಿ ಪಡೆಯುತ್ತಿರುವ ದೇಹಗಳಿಗೆ ಅಂತ್ಯ ಸಂಸ್ಕಾರಕ್ಕೂ ಜಾಗ ವಿಲ್ಲದೇ ಪರದಾಡುತ್ತಿದ್ದಾರೆ. ಇರುವ ಚಿತಾಗಾರಗಳಲ್ಲಿ ಮೃತದೇಹಗಳ ವಿಲೇವಾರಿಗಾಗಿ ಇದೀಗ ಟೋಕನ್ ಸಿಸ್ಟಂ ಜಾರಿಗೆ ತರಲಾಗಿದೆ.
ಸದ್ದಿಲ್ಲದೇ ಎದ್ದ ಕೋವಿಡ್ ಎರಡನೇ ಅಲೆ ರಾಜಧಾನಿಯಲ್ಲಿ ಬಹುದೊಡ್ಡ ಅವಾಂತರಗಳನ್ನು ಸೃಷ್ಟಿಸಿದೆ. ಕೋವಿಡ್ ನಿಂದ ಸಾವಿಗೀಡಾಗುತ್ತಿರುವ ದೇಹಗಳಿಗೆ ಅಂತ್ಯ ಸಂಸ್ಕಾರ ಭಾಗ್ಯವೂ ಸಿಗದೇ ಪರದಾಡುವಂತಾಗಿದೆ. ಬೆಂಗಳೂರಿನಲ್ಲಿರುವ ಚಿತಗಾರಗಳ ಮುಂದೆ ಕೋವಿಡ್ ಹೆಣ ಹೊತ್ತ ಆಂಬ್ಯೂಲೆನ್ಸ್ ಸಾಲುಗಟ್ಟಿ ನಿಂತಿವೆ. ಇನ್ನೊಂದಡೆ ಮೊದಲ ಬಂದವರಿಗೆ ಮೊದಲ ಆದ್ಯತೆ ಎಂಬ ನಿಯಮದ ಮೊರೆ ಹೋಗಿರುವ ಚಿತಾಗಾರದ ಸಿಬ್ಬಂದಿ ಇದೀಗ ಟೋಕನ್ ಸಿಸ್ಟಂ ಪರಿಚಯಿಸಿದ್ದಾರೆ.
''ಚಿತಾಗಾರಗಳ ಕಾರ್ಮಿಕರಿಗೆ ವರ್ಷದಿಂದ ಸಂಬಳವೇ ಸಿಕ್ಕಿಲ್ಲ''
ಬೆಂಗಳೂರಿನ ಸುಮ್ಮನಹಳ್ಳಿಯಲ್ಲಿರುವ ಚಿತಾಗಾರದಲ್ಲಿ ಭಾನುವಾರ ಒಂದು ದಿನ 25 ಮೃತ ದೇಹಗಳನ್ನು ಸುಡಲಾಗಿದೆ. ದಿನಕ್ಕೆ ಮೂರ್ನಾಲ್ಕು ಮೃತ ದೇಹ ಸುಡುವುದೇ ದುಬಾರಿ. ಇಂತಹ ಪರಿಸ್ಥಿತಿಯಲ್ಲಿ ಏಕಾಏಕಿ 25 ಮೃತ ದೇಹಗಳು ಬಂದಿವೆ. ಬೆಳಗ್ಗೆ ಏಳು ಗಂಟೆಗೆ ಚಿತಾಗಾರದಲ್ಲಿ ಕಾರ್ಯ ಆರಂಭಿಸಿದ್ದು, ಮಧ್ಯರಾತ್ರಿ 2 ಗಂಟೆ ವರೆಗೂ ಅಂತ್ಯ ಕ್ರಿಯೆ ಮಾಡಿದ್ದಾರೆ. ಇಷ್ಟಾಗಿಯೂ ಮೃತ ದೇಹಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗಿಲ್ಲ.
ಇನ್ನೂ ರಸ್ತೆಯಲ್ಲಿ ಹೆಣ ಇಟ್ಟುಕೊಂಡು ಕಾದು ಕುಳಿತ ಕೆಲವರು ಇದೀಗ ಮೃತ ದೇಹ ಅಂತ್ಯ ಕ್ರಿಯೆಗೂ ರಾಜಕೀಯ ನಾಯಕರ ಶಿಫಾರಸ್ಸಿನ ಮೊರೆ ಹೋಗಿದ್ದಾರೆ. ಇದರಿಂದ ಹೈರಾಣ ಆಗಿರುವ ಚಿತಾಗಾರ ಸಿಬ್ಬಂದಿ ಕೂಡ ಇದೀಗ ಕ್ಯೂ ಸಿಸ್ಟಂ ಮೊರೆ ಹೋಗಿದ್ದಾರೆ. ಹೀಗಾಗಿ ಒಂದು ದೇಹ ಅಂತ್ಯ ಕ್ರಿಯೆ ಮಾಡಲು ಬರೋಬ್ಬರಿ ಐದು ಗಂಟೆ ಕಾಯಬೇಕಾದ ಪರಿಸ್ಥಿತಿ ರಾಜಧಾನಿಯಲ್ಲಿ ನಿರ್ಮಾಣವಾಗಿದೆ. ಜನರಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಟೋಕನ್ ಸಿಸ್ಟಂ ಜಾರಿಗೆ ತಂದಿದ್ದೇವೆ ಎಂದು ಸುಮ್ಮನಹಳ್ಳಿ ಚಿತಾಗಾರ ಸಿಬ್ಬಂದಿ ರವಿ ತಿಳಿಸಿದ್ದಾರೆ.
ಸರಾಸರಿ 20 ಮೃತ ದೇಹ: ಇನ್ನು ರಾಜಧಾನಿ ಬೆಂಗಳೂರಿನಲ್ಲಿರುವ ಚಿತಾಗಾರಗಳದ್ದು ಒಂದೇ ರೀತಿಯ ಪರಿಸ್ಥಿತಿ. ದಿನಕ್ಕೆ ಸರಾಸರಿ 20 ಕ್ಕೂ ಹೆಚ್ಚು ಕೋವಿಡ್ ಮೃತ ದೇಹಗಳು ಬರುತ್ತಿವೆ. ಅವೆಲ್ಲವನ್ನೂ ವಿಲೇವಾರಿ ಮಾಡಲಾಗದೇ ಚಿತಾಗಾರ ಸಿಬ್ಬಂದಿ ಕೂಡ ಹೈರಾಣ ಆಗಿದ್ದಾರೆ. ಪೀಣ್ಯಾ ಚಿತಾಗಾರದಲ್ಲಿ 23 , ಮೇಡಿ ಅಗ್ರಹಾರ 29, ಬನಶಂಕರಿ 27, ಕೆಂಗೇರಿ 20, ಪಣತ್ತೂರು ಚಿತಾಗಾರದಲ್ಲಿ 20 ಮೃತ ದೇಹಗಳನ್ನು ದಹಿಸಲಾಗಿದೆ.
ಬೆಂಗಳೂರಿನ ಸ್ಮಶಾನದಲ್ಲೂ ಶವಗಳ ಸರತಿ, ಇದು ಪ್ರಸ್ತುತ ಕೊರೊನಾ ಪರಿಸ್ಥಿತಿ
ಸುಮ್ಮನಹಳ್ಳಿಯಲ್ಲಿ ಕೈಕೊಟ್ಟ ಯಂತ್ರ: ಸುಮ್ಮನಹಳ್ಳಿಯಲ್ಲಿರುವ ಚಿತಾಗಾರದ ಯಂತ್ರ ರಿಪೇರಿಯಾಗಿದ್ದು, ಸೋಮವಾರ ಬೆಳಗ್ಗೆ ಆಂಬುಲೆನ್ಸ್ ಗಳು ಸಾಲುಗಟ್ಟಿ ನಿಂತಿದ್ದವು. ಹೀಗಾಗಿ ಕೆಲವು ಪೋಷಕರು ಬೇರೆ ಚಿತಗಾರದತ್ತ ತೆರಳಿದರೆ, ಇನ್ನೂ ಕೆಲವರು ಅಲ್ಲಿಯೇ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮೃತ ದೇಹಗಳ ದಹನದ ಕಾರ್ಯ ಒತ್ತಡಕ್ಕೆ ಚಿತಾಗಾರ ಯಂತ್ರಗಳು ಕೈಕೊಟ್ಟಿವೆ. ಅಂತೂ ಕೋವಿಡ್ ಸಾವಿಗೀಡಾದವರಿಗೆ ಅಂತ್ಯ ಕ್ರಿಯೆಯೂ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ರೋಗದಿಂದ ದೂರ ಉಳಿಯುವುದೊಂ ದೇ ಬೆಂಗಳೂರಿಗರಿಗೆ ಉಳಿದಿರುವ ಏಕೈಕ ಮಾರ್ಗ.