ಸೈಕಲ್ ರವಿ ಮೂವರು ಸಹಚರರ ಬಂಧನ, ಬೇನಾಮಿ ಆಸ್ತಿ ಪತ್ತೆ
ಬೆಂಗಳೂರು, ಜುಲೈ 13 : ಉದ್ಯಮಿಗಳನ್ನು ಅಪಹರಿಸಿ ವಿಕೃತವಾಗಿ ಹಿಂಸೆ ನೀಡಿ ಕಿರುಕುಳ ಕೊಡುತ್ತಿದ್ದ ಸೈಕಲ್ ರವಿಯ ಮೂವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸೈಕಲ್ ರವಿಯನ್ನು ಈಗಾಗಲೇ ಬಂಧಿಸಲಾಗಿದ್ದು ನ್ಯಾಯಾಂಗ ಬಂಧನದಲ್ಲಿದ್ದಾನೆ.
ಬನಶಂಕರಿ 3ನೇ ಹಂತದ ಇಟ್ಟಮಡು ನಿವಾಸಿ ಬೇಕರಿ ಮೂರ್ತಿ, ನವೀನ್, ರಮಣ ಬಂಧಿತ ಆರೋಪಿಗಳು. ಸೈಕಲ್ ರವಿ ಸೂಚನೆಯಂತೆ ಕೆಲಸ ಮಾಡುತ್ತಿದ್ದ ಇವರು, ಮೀಟರ್ ಬಡ್ಡಿ ದಂಧೆಯಲ್ಲಿ ತೊಡಗಿದ್ದರು. ರವಿ ಸೂಚನೆಯಂತೆ ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದರು.
ಹಣ ನೀಡಿದ ಉದ್ಯಮಿಗಳನ್ನು ಅಪಹರಣ ಮಾಡಿ, ನಗರದ ಹೊರ ವಲಯಕ್ಕೆ ಕರೆದುಕೊಂಡು ಹೋಗಿ ವಿಕೃತ ಹಿಂಸೆ ನೀಡುತ್ತಿದ್ದರು. ಬ್ಯಾಟ್ಗೆ ಮುಳ್ಳಿನ ತಂತಿ ಸುತ್ತಿ ಹೊಡೆಯುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೈಕಲ್ ರವಿ ನ್ಯಾಯಾಂಗ ಬಂಧನಕ್ಕೆ : ಕೊಲೆ ಯತ್ನ, ದರೋಡೆ, ಜೀವ ಬೆದರಿಕೆ ಸೇರಿದಂತೆ 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸೈಕಲ್ ರವಿ ಪೊಲೀಸರಿಗೆ ಬೇಕಾಗಿದ್ದ. ಜೂನ್ 28ರಂದು ಆತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಪೊಲೀಸರು ಬಂಧಿಸಲು ಹೋದಾಗ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದ. ಆದ್ದರಿಂದ, ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದರು.
ಸೈಕಲ್ ರವಿ ಬಳಿಯಿಂದ 13 ಮೊಬೈಲ್ ಪೋನ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೊಬೈಲ್ ಕರೆಗಳ ಆಧಾರದ ಮೇಲೆ ಮೂವರು ಸಹಚರರನ್ನು ಬಂಧಿಸಿದ್ದಾರೆ. ಸೈಕಲ್ ರವಿ ಸದ್ಯ, ನ್ಯಾಯಾಂಗ ಬಂಧನದಲ್ಲಿದ್ದಾನೆ.
ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆ : ಸೈಕಲ್ ರವಿ ಬಳಿ ಅಪಾರ ಪ್ರಮಾಣದ ಬೇನಾಮಿ ಆಸ್ತಿಗಳು ಪತ್ತೆಯಾಗಿವೆ. ಆದ್ದರಿಂದ, ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ ಹಸ್ತಾಂತರ ಮಾಡಲು ಸಿಸಿಬಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಸೈಕಲ್ ರವಿ ತಾಯಿ, ತಮ್ಮ ಮತ್ತು ಪತ್ನಿಯ ಹೆಸರಿನಲ್ಲಿ ಬೆಂಗಳೂರಿನಲ್ಲಿ 6 ನಿವೇಶನಗಳಿವೆ. ಕೆಂಗೇರಿ ಉಪ ನಗರದಲ್ಲಿ ಮನೆ ಕಟ್ಟಿಸುತ್ತಿದ್ದಾನೆ. 8 ರಿಂದ 10 ಕೋಟಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಸಿಸಿಬಿಗೆ ಸಿಕ್ಕಿವೆ.












Click it and Unblock the Notifications