ಬಿಜೆಪಿಯಿಂದ ನನ್ನನ್ನು ಉಚ್ಛಾಟಿಸಿದ್ದು, ಸರಿಯಾದ ನಿರ್ಧಾರ ಎಂದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ!
"ಅಡಕೆ ತೋಟ, ಕ್ರಷರ್ನಿಂದ ಬಂದ ಹಣವನ್ನು ಮನೆಯಲ್ಲಿಟ್ಟಿದ್ದೆವು. ನಮ್ಮದು 125 ಎಕರೆ ಅಡಿಕೆ ತೋಟ ಇದೆ. ನಮ್ಮ ಬಳಿ ಎರಡು ಕ್ರಷರ್ಗಳಿದೆ. ಇದರೊಂದಿಗೆ ಎರಡು ಅಡಕೆ ಮಂಡಿಯನ್ನು ಹೊಂದಿದ್ದೇವೆ"
ಬೆಂಗಳೂರು, ಮಾರ್ಚ್ 07: ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಜಾಮೀನು ಸಿಕ್ಕ ನಂತರ ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ಅವರು, ಲೋಕಾಯುಕ್ತ ಅಧೀಖಾರಿಗಳು ವಶಪಡಿಸಿಕೊಂಡಿರುವ ಹಣ ನಾವೇ ಸಂಪಾದಿಸಿದ್ದು ಎಂದಿದ್ದಾರೆ.
ಕಳೆದ ಐದಾರು ದಿನಗಳಿಂದ ನಾಪತ್ತೆಯಾಗಿದ್ದ ಅವರು ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡುತ್ತಾ, "ನನ್ನ ಮೇಲೆ ಆರೋಪ ಬಂದಿದ್ದರಿಂದ ನಾನು ಜನರ ಸಂಪರ್ಕಕ್ಕೆ ಬಂದಿರಲಿಲ್ಲ. ಆದರೆ, ನಾನು ಎಲ್ಲೂ ಓಡಿಹೋಗಿರಲಿಲ್ಲ. ಮನೆಯಲ್ಲೇ ಇದ್ದೆ. ಬೆಂಗಳೂರಿನ ನನ್ನ ಮನೆಯಲ್ಲಿ ವಶಪಡಿಸಿಕೊಂಡ ಹಣದ ಮೂಲ ಭ್ರಷ್ಟಾಚಾರವಲ್ಲ. ಅದು ನಾವೇ ಸಂಪಾದಿಸಿದ್ದು" ಎಂದು ಸಮರ್ಥಿಸಿಕೊಂಡಿದ್ದಾರೆ.

"ಅಡಕೆ ತೋಟ, ಕ್ರಷರ್ನಿಂದ ಬಂದ ಹಣವನ್ನು ಮನೆಯಲ್ಲಿಟ್ಟಿದ್ದೆವು. ನಮ್ಮದು 125 ಎಕರೆ ಅಡಿಕೆ ತೋಟ ಇದೆ. ನಮ್ಮ ಬಳಿ ಎರಡು ಕ್ರಷರ್ಗಳಿದೆ. ಇದರೊಂದಿಗೆ ಎರಡು ಅಡಕೆ ಮಂಡಿಯನ್ನು ಹೊಂದಿದ್ದೇವೆ. ಬೇರೆ ಬೇರೆ ವ್ಯವಹಾರಗಳನ್ನು ಮಾಡುತ್ತಿದ್ದೇವೆ. ಲೋಕಾಯುಕ್ತ ದಾಳಿ ವೇಳೆ ಈ ಹಣ ಅವರಿಗೆ ಸಿಕ್ಕಿದೆ. ಅದನ್ನು ಅವರು ವಶಕ್ಕೆ ಪಡೆದಿದ್ದಾರೆ. ಆ ಹಣಕ್ಕೆ ನಮ್ಮ ಬಳಿ ದಾಖಲೆಯಿದೆ. ವಶಪಡಿಸಿಕೊಂಡಿರುವ ಹಣಕ್ಕೆ ಸೂಕ್ತ ದಾಖಲೆ ಕೊಟ್ಟು ವಾಪಸ್ ಪಡೆದುಕೊಳ್ಳುತ್ತೇನೆ "ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದ್ದಾರೆ.
ಮುಂದುವರಿದು, "ಚನ್ನಗಿರಿ ಅಡಿಕೆ ನಾಡು. ಇಲ್ಲಿ ಸಾಮಾನ್ಯ ಜನರ ಮನೆಯಲ್ಲೂ ನಾಲ್ಕು, ಐದು ಕೋಟಿ ಹಣ ಇರುತ್ತದೆ. 6 ಕೋಟಿ ನಮಗೆ ದೊಡ್ಡ ವಿಷಯವಲ್ಲ. ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸುತ್ತೇನೆ. ಲೋಕಾಯುಕ್ತಕ್ಕೆ ದೂರು ನೀಡಿದ್ದ ಶ್ರೇಯಸ್ ಕಶ್ಯಪ್ ಹೆಸರೇ ನನಗೆ ಗೊತ್ತಿಲ್ಲ.ದಾಖಲೆ ನೀಡಿ ನಮ್ಮ ಹಣವನ್ನು ವಾಪಸ್ ಪಡೆಯುತ್ತೇನೆ" ಎಂದು ಹೇಳಿದ್ದಾರೆ.

"ನನಗೆ ಲೋಕಾಯುಕ್ತರು ಯಾವುದೇ ದಾಖಲಾತಿ ಕೇಳಿಲ್ಲ. ಯಾವುದೇ ನೋಟಿಸ್ ನೀಡಿಲ್ಲ. ನನ್ನ ಮೇಲೆ ಯಾವುದೇ ಆರೋಪವಿಲ್ಲ. ಕೆಎಸ್ಡಿಎಲ್ ಅಧ್ಯಕ್ಷ ಅನ್ನೋ ಕಾರಣಕ್ಕೆ ನನ್ನ ಹೆಸರನ್ನು ಸೇರಿಸಿದ್ದಾರೆ, ಹೊರತು ನನ್ನ ಮೇಲೆ ಯಾವುದೇ ಆರೋಪವಿಲ್ಲ. ಇನ್ನೋಂದು ಮಾತೆಂದರೆ, ನಾನು ಕೆಎಸ್ಡಿಎಲ್ ಗೆ ಹೋದಾಗ ಅದು ಕೇವಲ 750 ಕೋಟಿ ವಹಿವಾಟು ನಡೆಸುತ್ತಿತ್ತು. ಲಾಭ 40 ಕೋಟಿಯಿತ್ತು. ನಾನು ಅಧ್ಯಕ್ಷ ಆದ ಮೇಲೆ 1,550 ಕೋಟಿ ವಹಿವಾಟು ನಡೆಸುವಂತೆ ಮಾಡಿದ್ದೀನಿ. ಲಾಭ 240 ಕೋಟಿ ಬರುತ್ತಿದೆ. ಅಂದರೆ ಅಷ್ಟು ಪಟ್ಟು ಹೆಚ್ಚಾಗಿದೆ. ನಮ್ಮ ಕೆಎಸ್ಡಿಎಲ್ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ. ಅಲ್ಲಿ ಯಾವುದೇ ರೀತಿಯ ಅಕ್ರಮ, ಹಣ ದುರುಪಯೋಗ ನಡೆಸಿಲ್ಲ. ಯಾರನ್ನು ಬೇಕಿದ್ದರೂ ಯಾವ ಅಧಿಕಾರಿಯಾದರೂ ಪ್ರಶ್ನೆ ಮಾಡಲಿ. ಸಣ್ಣ ತಪ್ಪು ಕಂಡು ಹಿಡಿದರೇ ನಾನು ಶಿಕ್ಷೆ ಅನುಭವಿಸುತ್ತೇನೆ" ಎಂದು ಸವಾಲು ಹಾಕಿದ್ದಾರೆ.
#Karnataka
— Kiran Parashar (@KiranParashar21) March 7, 2023
What #MadalVirupakshappa says The source of money seized from my house in #Bengaluru was not corruption, it was earned by us.
Rs 6 cr is not a big deal for us. I will submit all the relevant documents to Lokayukta. @IndianExpress pic.twitter.com/cIzlpN54iJ
ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಿದ ಬಗ್ಗೆ ಉತ್ತರಿಸಿರುವ ಅವರು, "ಬಿಜೆಪಿ ತೆಗೆದುಕೊಂಡ ಕ್ರಮ ಸರಿಯಿದೆ. ಪ್ರಪಂಚದ ದೊಡ್ಡ ಪಕ್ಷ ಅದು. ನಮ್ಮ ಮೇಲೆ ಆರೋಪ ಬಂದಾಗ ಅದಕ್ಕೆ ಯಾವುದೇ ಕಳಂಕ ಬರಬಾರದು. ನಾನು ದೋಷಮುಕ್ತನಾದ ಮೇಲೆ ಮತ್ತೆ ಬಿಜೆಪಿ ಪ್ರಾಥಮಿಕ ಸದಸ್ಯತ್ವ ತೆಗೆದುಕೊಳ್ಳುತ್ತೇನೆ. ನಾನು ಎಲ್ಲಿಯೂ ತಲೆ ಮರೆಸಿಕೊಂಡಿರಲಿಲ್ಲ, ನಮ್ಮ ಮನೆಯಲ್ಲೇ ಇದ್ದೆ. ಎಲ್ಲರಿಗೂ ಉತ್ತರ ಕೊಡೋಕೆ ಆಗದೆ ಮೊಬೈಲ್ ಸ್ವಿಚ್ ಅಫ್ ಮಾಡಿಕೊಂಡಿದ್ದೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಕೆಎಸ್ಡಿಎಲ್ ಆವರಣವನ್ನು ಪ್ರವೇಶಿಸಬಾರದು, ಸಾಕ್ಷ್ಯವನ್ನು ಹಾಳು ಮಾಡಬಾರದು, ನಿರೀಕ್ಷಣಾ ಜಾಮೀನು ಆದೇಶವನ್ನು ಸ್ವೀಕರಿಸಿದ ನಂತರ 48 ಗಂಟೆಗಳ ಒಳಗೆ ಲೋಕಾಯುಕ್ತ ಪೊಲೀಸ್ ತನಿಖಾಧಿಕಾರಿ (ಐಒ) ಮುಂದೆ ಹಾಜರಾಗುವಂತೆ ನ್ಯಾಯಮೂರ್ತಿ ಕೆ.ನಟರಾಜನ್ ಆದೇಶಿಸಿದ್ದರು.
ಇತ್ತ, ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿರುವ ಬಗ್ಗೆ ಬೆಂಗಳೂರು ವಕೀಲರು ಸಂಘ ಆತಂಕ ವ್ಯಕ್ತಪಡಿಸಿದೆ. ಕರ್ನಾಟಕದ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿನಂತಹ ಹೊಸ ವಿಷಯಗಳನ್ನು ವಿಚಾರಣೆಗೆ ತರಲು ಹಲವಾರು ದಿನಗಳು ಮತ್ತು ವಾರಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ವಿಐಪಿ ವಿಷಯಗಳನ್ನು ರಾತ್ರೋರಾತ್ರಿ ವಿಚಾರಣೆ ಮಾಡಲಾಗುತ್ತದೆ. ಇಂತಹ ಪದ್ಧತಿಯಿಂದ ಸಾಮಾನ್ಯ ಜನರು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಪತ್ರ ಬರೆದಿದೆ.












Click it and Unblock the Notifications