ಶೀಘ್ರ ಬೆಂಗಳೂರಲ್ಲಿ ಸಬ್ಅರ್ಬನ್ ರೈಲು ಸಂಚಾರ, ಎಲ್ಲಿಗೆ ಹೆಚ್ಚು ಟ್ರಿಪ್
ಬೆಂಗಳೂರು, ಅಕ್ಟೋಬರ್ 15: ಸಬ್ಅರ್ಬನ್ ರೈಲು ಡಿಪಿಆರ್ಗೆ ಶೀಘ್ರ ಒಪ್ಪಿಗೆ ದೊರೆಯಲಿದೆ. ಬೆಂಗಳೂರು ಉಪನಗರ ರೈಲು ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಇನ್ನೊಂದು ತಿಂಗಳೊಳಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ಸಂಸದ ಪಿಸಿ ಮೋಹನ್ ತಿಳಿಸಿದ್ದಾರೆ.
ಬೆಂಗಳೂರು ರೈಲ್ವೆ ವಿಭಾಗ ಮಟ್ಟದ ಸಭೆಯಲ್ಲಿ ವಿಭಾಗದ ವ್ಯಾಪ್ತಿಯಲ್ಲಿ ಕೈಗೊಂಡಿರುವ ಯೋಜನೆಗಳು, ರೈಲು ಸಂಚಾರದ ವೇಳಾಪಟ್ಟಿ, ರೈಲು ನಿಲ್ದಾಣಗಳಲ್ಲಿನ ಸೌಲಭ್ಯಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

ಆಗಸ್ಟ್ನಲ್ಲಿ ಕೇಂದ್ರಕ್ಕೆ ಡಿಪಿಆರ್ ಸಲ್ಲಿಸಿದೆ
ರಾಜ್ಯ ಸರ್ಕಾರವು ಕಳೆದ ಆಗಸ್ಟ್ನಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ ಪರಿಷ್ಕೃತ ಡಿಪಿಆರ್ನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಹಾಗಾಗಿ ಇನ್ನೊಂದು ತಿಂಗಳೊಳಗೆ ಕೇಂದ್ರ ಸರ್ಕಾರ ಡಿಪಿಆರ್ ಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ.

ವೈಟ್ಫೀಲ್ಡ್ಗೆ ಹೆಚ್ಚಿನ ರೈಲು ಸಂಚಾರ
ಬೆಂಗಳೂರು-ವೈಟ್ಫೀಲ್ಡ್ ನಡುವೆ ಹೆಚ್ಚಿನ ರೈಲುಗಳನ್ನು ನಿಯೋಜಿಸುವಂತೆ ಸೂಚಿಸಿದರು. ಬೆಂಗಳೂರು -ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ನಡುವಿನ ಮೆಮು ರೈಲು ನಿಗದಿತ ಸಮಯಕ್ಕೆ ಸಂಚರಿಸುವಂತೆ ನೋಡಿಕೊಳ್ಳಬೇಕು. ವೈಟ್ಫೀಲ್ಡ್ ರೈಲು ನಿಲ್ದಾಣದ ಎರಡನೇ ಪ್ರವೇಶ ದ್ವಾರದ ಬಳಿ ನಿರ್ಮಿಸುತ್ತಿರುವ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಯಶವಂತಪುರ-ತುಮಕೂರು ಸೇರಿ 10 ವಿಶೇಷ ರೈಲು
ಸಣ್ಣ ಪಟ್ಟಣಗಳು ಮತ್ತು ಗ್ರಾಮಗಳಿಂದ ನಗರ ಪ್ರದೇಶಗಳ ನಡುವಿನ ಸಂಚಾರವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಯಶವಂತಪುರದಿಂದ ತುಮಕೂರು ಮಾರ್ಗ ಸೇರಿದಂತೆ ದೇಶದ ಇನ್ನಿತರೆ ಮಾರ್ಗಗಳಲ್ಲಿ 10 ಸೇವಾ ಸರ್ವೀಸ್ ರೈಲು ಸೇವೆಯನ್ನು ಆರಂಭಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಬರುವ ನಿಲ್ದಾಣಗಳು, ವೇಳಾಪಟ್ಟಿ
ನಿಲ್ದಾಣಗಳು : ತುಮಕೂರು-ಯಶವಂತಪುರ ರೈಲು ಕ್ಯಾತ್ಸಂದ್ರ, ಹಿರೇಹಳ್ಳಿ, ದಾಬಸ್ ಪೇಟೆ, ನಿಡವಂದ, ದೊಡ್ಡಬೆಲೆ, ಭೈರನಾಯಕನಹಳ್ಳಿ, ಗೊಲ್ಲಹಳ್ಳಿ, ಸೋಲದೇವನಹಳ್ಳಿ, ಚಿಕ್ಕಬಾಣವರ, ಮುದ್ದಲಿಂಗನಹಳ್ಳಿ ನಿಲ್ದಾಣಗಳಲ್ಲಿ ಒಂದರಿಂದ ಒಂದೂವರೆ ನಿಮಿಷ ನಿಲುಗಡೆಗೊಳ್ಳಲಿದೆ.
ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 7.59ಕ್ಕೆ ಹೊರಡುವ ರೈಲು ರಾತ್ರಿ 9.25ಕ್ಕೆ ತುಮಕೂರು ರೈಲು ನಿಲ್ದಾಣವನ್ನು ತಲುಪಲಿದೆ. 9.50ಕ್ಕೆ ತುಮಕೂರಿನಿಂದ ಹೊರಡುವ ರೈಲು ರಾತ್ರಿ 11.25ಕ್ಕೆ ಯಶವಂತಪುರಕ್ಕೆ ತಲುಪಲಿದೆ.












Click it and Unblock the Notifications