ಯಡಿಯೂರು ಕೆರೆ, ಪಾರ್ಕ್ ಮೇಲೊಂದು ಪಕ್ಷಿ ನೋಟ
ಬೆಂಗಳೂರು, ಸೆ.14 : ನಗರದ ಪುರಾತನ ಕೆರೆಗಳಲ್ಲೊಂದಾದ ಯಡಿಯೂರು ಕೆರೆಗೆ ಕಾಯಕಲ್ಪಗಳು ಸಿಗುತ್ತಿದ್ದರೂ ಉಳಿದೆಡೆಯಂತೆ ಇಲ್ಲೂ ವರ್ಷದಿಂದ ವರ್ಷ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ.
ಎರಡು ವರ್ಷಗಳಲ್ಲಿ ಮೂರು ಅಡಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಕಡಿಮೆಯಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಯಡಿಯೂರು ಕೆರೆ ಮತ್ತು ಸುತ್ತಲಿನ ಪಾರ್ಕ್ ನ ಸದ್ಯದ ಚಿತ್ರಣ ಯಾವ ರೀತಿಯಿದೆ ಎಂಬುದನ್ನು ನಿಮ್ಮ ಮುಂದಿಡುವ ಚಿಕ್ಕ ಪ್ರಯತ್ನ ಇದು.......
ಹೌದು ವರ್ಷದಿಂದ ವರ್ಷಕ್ಕೆ ನೀರಿನ ಪ್ರಮಾಣ ಕೊಂಚ ಇಳಿಮುಖವಾಗುತ್ತಿರುವುದನ್ನು ಒಪ್ಪಿಕೊಳ್ಳಲೇಬೇಕು. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅಂತರ್ಜಲ ಅತಿಯಾದ ಬಳಕೆ ಇನ್ನಿತರ ಕಾರಣಗಳು ಕಾಡುತ್ತಿದ್ದರೂ ಯಡಿಯೂರು ಕೆರೆ ಒಡಲು ಅಷ್ಟೇನೂ ಬರಿದಾಗಿಲ್ಲ. ಒಂದೂ ಮೂಲೆಯಲ್ಲಿ ತಾವರೆ ಹೂವುಗಳು ನಳನಳಿಸುತ್ತಿರುವುದು ಶಾಂತ ಪರಿಸರಕ್ಕೆ ಸಾಕ್ಷಿ.(ಯಲಹಂಕದಲ್ಲಿ ಯುವ ದಿನದಿ 'ಕೆರೆಗಾಗಿ ಕರೆ')
ಗಣೇಶ ವಿಸರ್ಜನೆಗೆ ಈ ಬಾರಿ ಯಡಿಯೂರು ಕೆರೆಯಲ್ಲೂ ಅವಕಾಶ ಕಲ್ಪಿಸಲಾಗಿತ್ತು. ಒಂದು ಲಕ್ಷಕ್ಕೂ ಅಧಿಕ ಗಣೇಶ ಮೂರ್ತಿಗಳು ಈಗಾಗಲೇ ಕೆರಯಲ್ಲಿ ವಿಸರ್ಜನೆಗೊಂಡಿದ್ದು ಅವುಗಳನ್ನು ಹೊರ ತೆಗೆದು ಬೇರೆಡೆಗೆ ರವಾನಿಸುವ ಕೆಲಸ ಬಿಬಿಎಂಪಿಯಿಂದಾಗುತ್ತಿದೆ.
ಮೀನುಗಾರಿಕೆ ಹೆಸರಲ್ಲಿ ಕೆರೆಗೆ ಸಂಬಂಧಿಸಿ ಬಿಬಿಎಂಪಿ ಮತ್ತು ಮೀನುಗಾರಿಕಾ ಇಲಾಖೆ ನಡುವೆ ಎದ್ದಿದ್ದ ವಿವಾದ ಸದ್ಯಕ್ಕೆ ಬಗೆಹರಿದಿದೆ. ಸುಂದರ ಕರೆಗೆ ನಾಲ್ಕು ಕಡೆಯಿಂದಲೂ ಕಬ್ಬಿಣದ ಬೇಲಿ ಅಳವಡಿಸಲಾಗಿದ್ದು ಸುಲಭವಾಗಿ ಯಾರೂ ಪ್ರವೇಶ ಮಾಡುವಂತಿಲ್ಲ. ಹಾಗಾಗಿ ಕಸ ಕಡ್ಡಿಗಳಿಂದ ಮುಕ್ತವಾಗಿದೆ ಎಂದೇ ಹೇಳಬಹುದು.(ವೈಟ್ ಫೀಲ್ಡ್ ಸೀತಾರಾಮಪಾಳ್ಯ ಕೆರೆಗೆ ಹಸಿರು ಹೊದಿಕೆ)
ನಾವು ಪ್ರತಿದಿನ ಇಲ್ಲಿಗೆ ವಾಕಿಂಗ್ ಬರುತ್ತೇವೆ. ಪರಿಸರ ಉತ್ತಮವಾಗಿದೆ, ಜತೆಗೆ ಸೂಕ್ತ ಭದ್ರತೆಯೂ ಇದೆ. ಎಲ್ಲಾ ಕಡೆಯಿಂದ ಪ್ರವೇಶ ಕಲ್ಪಿಸುವವ ಕೆಲಸ ಮಾಡಿದರೆ ಒಳಿತು ಎಂದು ಜಯನಗರ 3 ನೇ ಬ್ಲಾಕ್ ನಿವಾಸಿ ಗುಣಶೀಲ್ ಹೇಳುತ್ತಾರೆ.
ಕನಕಪುರ ರಸ್ತೆಗೆ ಹೊಂದಿಕೊಂಡಿರುವ ಕೆರೆಯ ದಂಡೆಯ ಮೇಲೆ ಗಿಡ ಮರಗಳನ್ನು ಬೆಳೆಸಲಾಗಿದ್ದು ಹಕ್ಕಿ ಪಕ್ಷಿಗಳ ಚಿಲಿಪಿಲಿ ಕೇಳಬಹುದು. ಎಲ್ಲಾ ಕಡೆಯೂ ಭದ್ರ ಬೇಲಿ ಇರುವುದರಿಂದ ಕೆರೆಯ ಪರಿಸರ ಮಾಲಿನ್ಯ ಮುಕ್ತವಾಗಿದೆ. ಮಹಾನಗರದ ಜಂಜಾಟದಿಂದ ಬೇಸತ್ತವರು ವಾರದ ಕೊನೆಗೆ ಇಲ್ಲೊಮ್ಮೆ ಭೇಟಿ ನೀಡಿದರೆ ನಷ್ಟವೇನಿಲ್ಲ.
ಹೆಚ್ಚಿನ ಮಾಹಿತಿಗೆ ಯಡಿಯೂರು ವಾರ್ಡ್ ಸದಸ್ಯ ಎನ್.ಆರ್.ರಮೇಶ್(9880011999) ಸಂಪರ್ಕಿಸಬಹುದು.

ಬಾನಾಡಿ ಬಾ ಮರಳಿ ಗೂಡಿಗೆ
'ಬಾನಾಡಿ ಬಾ ಮರಳಿ ಗೂಡಿಗೆ' ಎಂಬ ಹೆಸರಿನಲ್ಲಿ ಕೆರೆ ದಂಡೆಯ ಮೇಲೆ ಪಕ್ಷಿ ಸಂಕುಲ ಕಾಪಾಡಲು ಮತ್ತು ಬೆಳೆಸಲು ಬಿಬಿಎಂಪಿ ಮುಂದಾಗಿದೆ.

ನೇಪಾಳದಿಂದ ಹೊಸ ಪಕ್ಷಿಗಳು
ಈ ಬಗ್ಗೆ ಮಾತನಾಡಿದ ಯಡಿಯೂರು ವಾರ್ಡ್ ಸದಸ್ಯ ಎನ್.ಆರ್.ರಮೇಶ್ , ಕೆರೆಯ ದಂಡೆಯ ಮೇಲಿನ ಗಿಡ ಮರಗಳನ್ನು ಅರಸಿ ಪಕ್ಷಿಗಳು ಆಗಮಿಸುವುದು ವಿಶೇಷ. ನೇಪಾಳದಿಂದ 58 ನಮೂನೆಯ ಪಕ್ಷಿಗಳನ್ನು ಇಲ್ಲಿಗೆ ತಂದು ಬಿಡಲು ಚಿಂತಿಸಲಾಗಿದೆ. 2 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬೆಳೆಯಲಿವೆ ಹಣ್ಣಿನ ಗಿಡಗಳು
ಕೇವಲ ಪಕ್ಷಿಗಳನ್ನು ತಂದು ಬಿಡುವುದಲ್ಲದೇ ಅವಕ್ಕೆ ನೈಸರ್ಗಿಕ ಆಹಾರ ನೀಡಲು ಚಿಂತಿಸಲಾಗಿದ್ದು ವಿವಿಧ ತಳಿಯ ಹಣ್ಣಿನ ಗಿಡಗಳನ್ನು ಬೆಳೆಸಲಾಗುವುದು. ಈಗಾಗಲೇ ಉತ್ತರಹಳ್ಳಿಯ ನರ್ಸರಿಯೊಂದರಲ್ಲಿ ಗಿಡಗಳನ್ನು ಬೆಳೆಸಲಾಗಿದ್ದು ಇಲ್ಲಿಗೆ ತಂದು ಪೋಷಿಸಲಾಗುವುದು.

ಪ್ರತ್ಯೇಕ ವಾಕಿಂಗ್ ಪಾತ್
ಈಗಿರುವ ಕೆರೆ ಮೇಲಿನ ಪಾರ್ಕ್ ವ್ಯವಸ್ಥೆಯಲ್ಲಿ ಕೊಂಚ ಬದಲಾವಣೆ ತಂದು ವಾಕಿಂಗ್ ಮಾಡುವವರಿಗೆ ಪ್ರತ್ಯೇಕ ಮಾರ್ಗ ನಿರ್ಮಾಣ, ಷಟಲ್ ಕಾಕ್ ಕೋರ್ಟ್ ನಿರ್ಮಾಣ ಮಾಡುವ ಚಿಂತನೆಯಿದೆ ಎಂದು ಕಾರ್ಪೋರೇಟರ್ ರಮೇಶ್ ತಿಳಿಸಿದರು.

ಬೋಟಿಂಗ್ ಕೂಡಾ ಮಾಡಬಹುದು
ವಿಶಾಲ ಕೆರೆಯಲ್ಲಿ ಬೋಟಿಂಗ್ ಕೂಡಾ ಮಾಡಬಹುದಾಗಿದ್ದು ಸಾಹಸ ಮೆರೆಯಬಹುದಾಗಿದೆ. ವಾಟರ್ ಸ್ಕೂಟರ್ ಮೂಲಕ ಪರಿಸರ ಸವಿಯಬಹುದಾಗಿದೆ. ನೀವು ಜಲ ಸಾಹಸ ಪ್ರೇಮಿಯಾಗಿದ್ದಲ್ಲಿ ಒಂದು ಕೈ ನೋಡೆಬೀಡಿ.

ವ್ಯವಸ್ಥಿತ ತೆರವು
ಬೆಂಗಳೂರಿನ ದಕ್ಷಿಣ ಭಾಗದ ಗಣೇಶ ವಿಸರ್ಜನೆಗೆ ಯಡಿಯೂರು ಕೆರೆಯಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಅದರಂದೆ ಅನೇಕ ಮೂರ್ತಿಗಳನ್ನು ನಿಗದಿತ ಜಾಗದಲ್ಲಿ ವಿಸರ್ಜನೆ ಮಾಡಲಾಗಿತ್ತು. ಈಗ ಅವುಗಳ ತೆರವು ಕಾರ್ಯಾಚರಣೆ ವ್ಯವಸ್ಥಿತವಾಗಿ ನಡೆಯುತ್ತಿದೆ.

ಇಲ್ಲಿಗೂ ಬಿಟ್ಟಿಲ್ಲ ಪ್ಲಾಸ್ಟಿಕ್ ಭೂತ
ಕೆರೆ ಅಭಿವೃದ್ಧಿಗೆ ಬಿಬಿಎಂಪಿ ಸಕಲ ಕ್ರಮ ತೆಗೆದುಕೊಂಡಿರುವುದು ಸ್ವಾಗತಾರ್ಹ. ಆದರೂ ವಾರಾಂತ್ಯದಲ್ಲಿ ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ಒಳನುಗ್ಗುವವರು ಪ್ಲಾಸ್ಟಿಕ್ ಮತ್ತಿತರ ಮಾಲಿನ್ಯಕಾರಕ ವಸ್ತುಗಳನ್ನು ಬಿಸಾಡುತ್ತಿರುವುದು ಕಂಡುಬಂದಿದೆ. ಸ್ವಚ್ಛತಾ ಕಾರ್ಯಕ್ಕೆ ಪಣ ತೊಟ್ಟಿದ್ದರೂ ಸಾರ್ವಜನಿಕರು ಕೊಂಚ ನಾಗರಿಕತೆ ಬೆಳೆಸಿಕೊಳ್ಳಬೇಕಿರುವುದು ಅಗತ್ಯ.

ಯಾವಾಗ ತೆರೆದಿರುತ್ತೆ?
ಬೆಂಗಳೂರಿನ ಇತರ ಪಾರ್ಕ್ ಗಳಂತೆ ಬೆಳಿಗ್ಗೆ ಮತ್ತು ಸಂಜೆ ತೆರೆದಿರುತ್ತೆ. ಕೆರೆಗೆ ಇಳಿಯಲು ಮುಕ್ತ ಅವಕಾಶ ನೀಡಲಾಗಿಲ್ಲ. ಜನರ ಸ್ಪಂದನೆ ಕೊರತೆ ಹಿನ್ನೆಲೆಯಲ್ಲಿ ಸದ್ಯ ಬೋಟಿಂಗ್ ಸಹ ಪರಿಣಾಮಕಾರಿ ರೀತಿಯಲ್ಲಿ ನಡೆಯುತ್ತಿಲ್ಲ.












Click it and Unblock the Notifications