ದಿನಗೂಲಿ ನೌಕರರ ಬೇಡಿಕೆಗಳಿಗೆ ಸ್ಪಂದಿಸಿದ ಸರ್ಕಾರ
ಬೆಂಗಳೂರು, ಜನವರಿ 12: ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಿದೆ.
ನಿನ್ನೆ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಭವನದಲ್ಲಿ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವನ್ನು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘವು ಹಮ್ಮಿಕೊಂಡಿತ್ತು.
ಬಿಬಿಎಂಪಿ ಸಭೆಯಲ್ಲಿ ಬೊಮ್ಮನಹಳ್ಳಿ ವಲಯ ಅಧಿಕಾರಿಗಳಿಗೆ ಮೇಯರ್ ಕ್ಲಾಸ್
ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ.ಕೋಳಿ ಮಾತನಾಡಿ, ನಮ್ಮ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಒಪ್ಪಿಕೊಂಡು ಗೃಹ ಭತ್ಯೆ ಮತ್ತು ತುಟ್ಟಿ ಭತ್ಯೆಯನ್ನು ಶೇ.75 ರಿಂದ ಶೇ.90 ರಷ್ಟು ಹೆಚ್ಚಿಸಿ, ದಿನಾಂಕ 1-12-2019 ರಿಂದ ಜಾರಿಗೆ ಬರುವಂತೆ ಆದೇಶ ನೀಡಿದೆ. ಇನ್ನು ಹಲವು ಬೇಡಿಕೆಗಳನ್ನು ಶೀಘ್ರವೇ ಈಡೇರಿಸಲು ಮನವಿ ಮಾಡಿದರು.
ಸರ್ಕಾರಿ ದಿನಗೂಲಿ ನೌಕರರಿಗೆ ಸೇವಾ ಭದ್ರತೆಯನ್ನು ನೀಡಲು 2012 ರ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯಗಳನ್ನು ದಿನಗೂಲಿ ನೌಕರರಿಗೂ ವಿಸ್ತರಿಸಬೇಕೆಂದು ಹಲವು ಬಾರಿ ಸಚಿವರಾದ ಶ್ರೀರಾಮುಲು, ಸಿ.ಟಿ.ರವಿ ಸೇರಿದಂತೆ ಹಲವರಿಗೆ ಮನವಿ ಮಾಡಿಕೊಂಡ ಬಳಿಕ ಸರ್ಕಾರ ಸ್ಪಂದಿಸಿದೆ.
ಸರ್ಕಾರವು ಗೃಹ ಬಾಡಿಗೆ ಭತ್ಯೆ ಮತ್ತು ತುಟ್ಟಿ ಭತ್ಯೆಯನ್ನು ಶೇ.75 ರಿಂದ ಶೇ. 90 ಕ್ಕೆ ಹೆಚ್ಚಿಸಿದ್ದಕ್ಕಾಗಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿ, ಉಳಿದ ಬೇಡಿಕೆಗಳನ್ನು ಇದೇ ಸಾಲಿನ ಬಜೆಟ್ ನಲ್ಲಿ ಈಡೇರಿಸಬೇಕೆಂದು ಸರ್ಕಾರಿ ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಹನುಮಂತಪ್ಪ.ಕೆ.ಕೋಳಿ, ಕಾರ್ಯಾಧ್ಯಕ್ಷ ಶೇಖ ಅಲಿ, ಪ್ರಧಾನ ಕಾರ್ಯದರ್ಶಿ ಶಿವಬಸಪ್ಪ ಸವದತ್ತಿ ಸೇರಿದಂತೆ ಉಳಿದ ಸದಸ್ಯರು ಒತ್ತಾಯಿಸಿದ್ದಾರೆ