ತೇಜಸ್ವಿ ಜಾಗತೀಕರಣದ ವಿರುದ್ಧದ ಎಚ್ಚರ ಪ್ರಜ್ಞೆ: ನಾಗೇಶ್ ಹೆಗಡೆ
ಬೆಂಗಳೂರು, ಸೆಪ್ಟೆಂಬರ್ 09: ಇಂದಿನ ಕೊಳ್ಳುಬಾಕ ಸಂಸ್ಕೃತಿ ಪರಿಸರ, ಜೀವ ವೈವಿಧ್ಯ,ಕನ್ನಡವನ್ನು ನಾಶ ಮಾಡುತ್ತಿರುವಾಗ ತೇಜಸ್ವಿ ಅದರ ಎದುರಿನ ಪ್ರತಿರೋಧದ ಸಂಕೇತ ಎಂದು ಖ್ಯಾತ ಅಂಕಣ ಬರಹಗಾರ ನಾಗೇಶ ಹೆಗಡೆ ಅಭಿಪ್ರಾಯಪಟ್ಟರು.
'ಬಹುರೂಪಿ' ಪ್ರಕಾಶನ ಪೂರ್ಣಚಂದ್ರ ತೇಜಸ್ವಿಯವರ 80ನೆಯ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಿತು. ಈ ಕಾರ್ಯಕ್ರಮದಲ್ಲಿ ಕೆ ಎಸ್ ಪರಮೇಶ್ವರ ಅವರ 'ತೇಜಸ್ವಿ ಸಿಕ್ಕರು' ಕೃತಿಯನ್ನು ಬಿಡುಗಡೆ ಮಾಡಿ ನಾಗೇಶ್ ಹೆಗಡೆ ಮಾತನಾಡಿದರು.
ತೇಜಸ್ವಿ ಮೊಗೆದಷ್ಟೂ ಮುಗಿಯದ ಜ್ಞಾನ ಭಂಡಾರ. ಅವರು ನಾಳೆ ಬರಲಿರುವ ಆತಂಕಗಳನ್ನು ಇಂದೇ ಗುರುತಿಸುವ ಶಕ್ತಿಯುಳ್ಳವರಾಗಿದ್ದರು. ಅಂತಹ ತೇಜಸ್ವಿ ಅವರ ಓದು ಜಾಗತೀಕರಣದ ಇಂದಿನ ದಿನಕ್ಕೆ ಉತ್ತರವಾಗಬೇಕು ಎಂದು ಅವರು ತಿಳಿಸಿದರು.

ಖ್ಯಾತ ಪತ್ರಕರ್ತ, ಸಾಹಿತಿ ಜಿ ಎನ್ ಮೋಹನ್ ಮಾತನಾಡಿ, ತೇಜಸ್ವಿ ಒಂದು ಪ್ರತಿರೋಧದ ಸಂಕೇತವಾಗಿದ್ದರು. ಅವರು ಕನ್ನಡಕ್ಕೆ ಯೂನಿಕೋಡ್ ಬೇಕು ಎಂದು ಪಟ್ಟ ಪರಿಶ್ರಮ ಕನ್ನಡವನ್ನು ಇಂದಿಗೂ ಹೊಸ ಪೀಳಿಗೆ ಉಸಿರಾಡಲು ದಾರಿಮಾಡಿಕೊಟ್ಟಿದೆ ಎಂದರು.
ಗ್ರಾಮೀಣ ಕುಟುಂಬದ ಮುಖ್ಯಸ್ಥ ಎಂ ಎಚ್ ಶ್ರೀಧರ ಮೂರ್ತಿ ಅವರು ಮಾತನಾಡಿ ತಾವು ನಡೆಸುತ್ತಿರುವ ಸಿರಿಧಾನ್ಯ ಚಳವಳಿಗೆ ತೇಜಸ್ವಿಯವರೇ ಸ್ಫೂರ್ತಿ. ಆಹಾರವೇ ಅಸ್ತ್ರ ಆಗಬೇಕಾದ ಕಾಲ ಬಂದಿದೆ ಎಂದರು.

ಕೃತಿಕಾರ ಕೆ ಎಸ್ ಪರಮೇಶ್ವರ, ರಂಗಕರ್ಮಿ ಸವಿತಾ, ಸಾಕ್ಷಚಿತ್ರ ನಿರ್ದೇಶಕ ಪರಮೇಶ್ವರ ಗುರುಸ್ವಾಮಿ, ಬಹುರೂಪಿಯ ಮುಖ್ಯಸ್ಥರಾದ ಶ್ರೀಜಾ ವಿ ಎನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.












Click it and Unblock the Notifications