Tejasvi Surya: ಬೆಂಗಳೂರು-ತುಮಕೂರು ನಡುವೆ ಮೆಟ್ರೋ ಸ್ಟುಪಿಡ್ ಐಡಿಯಾ
ಬೆಂಗಳೂರು ನಗರದಿಂದ ತುಮಕೂರಿಗೆ ಮೆಟ್ರೋ ವಿಸ್ತರಣೆ ಯೋಜನೆಗೆ ಬಿಎಂಆರ್ಸಿಎಲ್ ವೇಗ ನೀಡಿದ್ದು, ಈಗಾಗಲೇ ಕಾರ್ಯಸಾಧ್ಯತಾ ಪರೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮತ್ತೊಂದೆಡೆ ಈ ಯೋಜನೆಗೆ ವಿರೋಧದ ಕೂಗು ಕೂಡ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ತುಮಕೂರಿಗೆ ಮೆಟ್ರೋ ವಿಸ್ತರಿಸುವ ಕರ್ನಾಟಕ ಸರ್ಕಾರದ ಯೋಚನೆ ಮೂರ್ಖತನದ್ದು ಎಂದಿದ್ದಾರೆ.
ತುಮಕೂರಿಗೆ ಮೆಟ್ರೋ ವಿಸ್ತರಣೆ ಮಾಡುವ ಬದಲಾಗಿ ಅವರು ಬಾಕಿ ಇರುವ ಮಾರ್ಗಗಳನ್ನು ಬೇಗನೆ ಪೂರ್ಣಗೊಳಿಸುವ ಮತ್ತು ಬೆಂಗಳೂರಿನೊಳಗೆ ಮೆಟ್ರೋ ಜಾಲವನ್ನು ಮತ್ತಷ್ಟು ಸಾಂದ್ರತೆಗೊಳಿಸುವತ್ತ ಗಮನಹರಿಸಬೇಕು. ಮೆಟ್ರೋ ನಗರದೊಳಗಿನ ಸಂಪರ್ಕವನ್ನು ಪರಿಹರಿಸಲು ಆದ್ಯತೆ ಕೊಡಬೇಕು. ತುಮಕೂರನ್ನು ಆರ್ಆರ್ಟಿಎಸ್ ಅಥವಾ ಉಪನಗರ ರೈಲಿನೊಂದಿಗೆ ಸಂಪರ್ಕಿಸಬೇಕು ಎಂದು ಸಲಹೆ ನೀಡಿದ್ದಾರೆ.
ಬಿಜೆಪಿ ಸಂಸದ ಪಿ.ಸಿ.ಮೋಹನ್ ಕೂಡ ತುಮಕೂರಿಗೆ ಉಪನಗರ ರೈಲು ಕಿ.ಮೀಗೆ 100ರಿಂದ 150 ಕೋಟಿ ವೆಚ್ಚವಾಗುತ್ತೆ. ಮೆಟ್ರೋ ಕಿ.ಮೀಗೆ 350 ಕೋಟಿ ರೂಪಾಯಿ ವೆಚ್ಚವಾಗುತ್ತೆ. ಇದರಲ್ಲಿ ರಿಯಲ್ ಎಸ್ಟೇಟ್ ಲಾಭವೇ 1,000 ಕೋಟಿ ರೂಪಾಯಿ ಎಂದು ದೂರಿದ್ದಾರೆ. ತುಮಕೂರು, ಹೊಸೂರು, ಹೊಸಕೋಟೆ ಅಥವಾ ಬಿಡದಿಗೆ ಮೆಟ್ರೋ ಸಂಪರ್ಕದ ಬಗ್ಗೆ ಅಲ್ಲ, ಇದು ರಿಯಲ್ ಎಸ್ಟೇಟ್ ಬೆಲೆಗಳನ್ನು ಹೆಚ್ಚಿಸುವ ಬಗ್ಗೆ ಮಾತ್ರ. ರಾಜ್ಯ ಸರ್ಕಾರವು ಉಪನಗರ ರೈಲುಗಳ ಹಳಿತಪ್ಪಿಸುವುದನ್ನು ಬಿಟ್ಟು ಬೇರೇನನ್ನೂ ನಿರ್ಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ನಮ್ಮ ಅವಧಿಯಲ್ಲೇ ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ದೊರೆಯಲಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ತುಮಕೂರಿಗೆ ಮೆಟ್ರೋ ಯೋಜನೆ ವಿಸ್ತರಣೆ ಸಂಬಂಧ ಬಿಎಂಆರ್ಸಿಎಲ್ ಈಗಾಗಲೇ ವರದಿ ನೀಡಿದೆ. ಹಾಗಾಗಿ ನಮ್ಮ ಅವಧಿಯಲ್ಲೇ ಇದನ್ನು ಕಾರ್ಯರೂಪಕ್ಕೆ ತರುತ್ತೇವೆ. ತುಮಕೂರಿನ ಜನರಿಗೆ ಕೇಂದ್ರದ ಎಲ್ಲ ಸೌಲಭ್ಯಗಳು ಸಿಗಬೇಕು. ಒಂದು ತಿಂಗಳಲ್ಲಿ ತುಮಕೂರು ಜನರಿಗೆ ದೊಡ್ಡ ಸಿಹಿ ಸುದ್ದಿ ಕೊಡ್ತೀವಿ. ಅದು ಇಡೀ ತುಮಕೂರಿನ ಚಿತ್ರಣವನ್ನೇ ಬದಲಾವಣೆ ಮಾಡಲಿದ್ದು, ತುಮಕೂರು ಎರಡನೇ ಬೆಂಗಳೂರಾಗಿ ಬೆಳೆಯುವುದು ಪಕ್ಕಾ ಎಂದಿದ್ದಾರೆ.
ಹೇಗಿದೆ ಮೆಟ್ರೋ ಪ್ಲ್ಯಾನ್?
ಬಿಎಂಆರ್ಸಿಎಲ್ ಸುಮಾರು 56.6 ಕಿ.ಮೀ. ಮೆಟ್ರೋ ಮಾರ್ಗದಲ್ಲಿ 25 ಎತ್ತರಿಸಿದ ನಿಲ್ದಾಣಗಳ ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ. ಗ್ರೀನ್ ಲೈನ್ನಲ್ಲಿ ಬರುವ ಮಾದಾವರ ನಿಲ್ದಾಣದಿಂದ ಪ್ರಾರಂಭವಾಗಿ ಶಿರಾ ಗೇಟ್ವರೆಗೆ ಮೆಟ್ರೋ ಮಾರ್ಗ ಹಾದು ಹೋಗಲಿದೆ ಎಂದು ಹೇಳಲಾಗುತ್ತಿದೆ.
ಮಾದಾವರ ಸ್ಟಾಪ್ನಿಂದ ಶುರುವಾಗಿ ಮಾಕಳಿ, ದಾಸನಪುರ, ನೆಲಮಂಗಲ, ವಿಶ್ವೇಶ್ವರಪುರ, ನೆಲಮಂಗಲ ಟೋಲ್ಗೇಟ್, ಬೂದಿಹಾಳ್, ಟಿ.ಬೇಗೂರು, ತಿಪ್ಪಗೊಂಡನಹಳ್ಳಿ, ಕುಲವನಹಳ್ಳಿ, ಬಿಲ್ಲನಕೋಟೆ, ಸೋಂಪುರ ಕೈಗಾರಿಕಾ ಪ್ರದೇಶ, ದಾಬಸ್ಪೇಟೆ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ ಕ್ಯಾತ್ಸಂದ್ರ ಬೈಪಾಸ್, ಕ್ಯಾತ್ಸಂದ್ರ, ತುಮಕೂರು ಬಸ್ ನಿಲ್ದಾಣ ಹಾಗೂ ಶಿರಾ ಗೇಟ್ ವರೆಗೆ ಈ ಮಾರ್ಗ ವಿಸ್ತರಣೆಯಾಗುವ ಸಾಧ್ಯತೆ ಇದೆ. ಆಗಲೇ ಇದಕ್ಕೆ ವಿರೋಧವೂ ಜೋರಾಗಿದೆ.












Click it and Unblock the Notifications