ಟ್ಯಾಕ್ಸಿಗಳ ಪರಿಷ್ಕೃತ ದರ ಜಾರಿಗೆ ಕಾಲಾವಕಾಶ: ಬಿ.ದಯಾನಂದ್
ಬೆಂಗಳೂರು, ಜನವರಿ 17: ಪರಿಷ್ಕೃತ ದರ ಜಾರಿಗೆ ಓಲಾ, ಊಬರ್ ಹಾಗೂ ಮತ್ತಿತರೆ ಟ್ಯಾಕ್ಸಿ ಕಂಪನಿಗಳು ಕಾಲಾವಕಾಶ ಕೋರಿದ್ದು ಅದಕ್ಕೆ ಅನುಮತಿ ನೀಡಲಾಗಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಪರಿಷ್ಕೃತ ದರದನ್ವಯ ಅಪ್ಲಿಕೇಷನ್ ಮತ್ತು ತಂತ್ರಜ್ಞಾನದಲ್ಲಿ ಮಾರ್ಪಾಡು ಮಾಡಿಕೊಳ್ಳಲು ಕಾಲಾವಕಾಶ ನೀಡುವಂತೆ ಟ್ಯಾಕ್ಸಿ ಕಂಪನಿಗಳು ಮನವಿ ಮಾಡಿವೆ. ಹಾಗಾಗಿ, ಪರಿಷ್ಕೃತ ದರ ಜಾರಿಗೆ ಬಂದಿಲ್ಲ, ಟ್ಯಾಕ್ಸಿ ಶೇರಿಂಗ್ ಗೆ ಪ್ರತ್ಯೇಕ ದರ ವಿಧಿಸಿಲ್ಲ ಎಂದರು.
ಸರ್ಕಾರ ನಿಗದಿಪಡಿಸಿರುವ ದರವನ್ನೇ ಶೇರಿಂಗ್ ವ್ಯವಸ್ಥೆಗೂ ಅನ್ವಯವಾಗುತ್ತದೆ. ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ನಿಯಮಕ್ಕೆ ಸಂಬಂಧಿಸಿದ ಪ್ರಕರಣವು ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. ಪ್ರಕರಣ ಇತ್ಯರ್ಥಗೊಂಡ ಬಳಿಕ ಆಟೋ ಮತ್ತು ಬೈಕ್ ಟ್ಯಾಕ್ಸಿಗಳನ್ನು ಸಹ ಈ ನಿಯಮಗಳಡಿಯಲ್ಲಿ ತರಲಾಗುವುದು ಎಂದು ಮಾಹಿತಿ ನೀಡಿದರು.

84 ಮಾಲಿನ್ಯ ಕೇಂದ್ರಗಳಲ್ಲಿ ನ್ಯೂನತೆ: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 882 ವಾಯುಮಾಲಿನ್ಯ ತಪಾಸಣೆ ಕೇಂದ್ರಗಳಿಗೆ ಅನುಜ್ಞಾ ಪತ್ರ ನೀಡಲಾಗಿದೆ. ಇದರಲ್ಲಿ ಕೆಎಸ್ ಆರ್ ಟಿಸಿ ಕೂಡ ಸೇರಿದೆ. ಈ ಕೇಂದ್ರಗಳ ಆನ್ ಲೈನ್ ನೆಟ್ ವರ್ಕಿಂಗ್ ವ್ಯವಸ್ಥೆಯನ್ನು ಇಲಾಖೆಯಿಂದಲೇ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
15 ವರ್ಷ ಮೀರಿದ ವಾಹನಗಳನ್ನು ನೆಲಮಂಗಲದಲ್ಲಿನ ಸ್ವಯಂಚಾಲಿತ ಕೇಂದ್ರದಲ್ಲಿ ಪರೀಕ್ಷೆಗೊಳಪಡಿಸಿ, ಎಫ್ ಸಿ ನೀಡಲಾಗುತ್ತಿದೆ. ಇದರಲ್ಲಿ ಮನುಷ್ಯನ ಹಸ್ತಕ್ಷೇಪ ಇರುವುದಿಲ್ಲ, ಅದೇ ರೀತಿ ಫೆ. 1 ರಿಂದ ನಗರದಲ್ಲಿ ನೋಂದಣಿ ಆಗಿರುವ ಎಲ್ಲ ಆಂಬುಲೆನ್ಸ್ ಗಳನ್ನು ಎಫ್ ಸಿಗಾಗಿ ನೆಲಮಂಗಲದ ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ ಎಂದರು.












Click it and Unblock the Notifications