ಬೆಂಗಳೂರು ನಗರದ ರಸ್ತೆಗುಂಡಿ ಮುಚ್ಚಲು ಕಾರ್ಯಪಡೆ ರಚನೆ
ಬೆಂಗಳೂರು, ಅಕ್ಟೋಬರ್ 10 : ಬೆಂಗಳೂರು ನಗರವನ್ನು ಕಸ ಮುಕ್ತ, ರಸ್ತೆಗುಂಡಿ ಮುಕ್ತವಾಗಿಸಲು ಕಾರ್ಯಪಡೆ ರಚನೆಯಾಗಲಿದೆ. ರಸ್ತೆಗುಂಡಿಗಳ ಬಗ್ಗೆ ದೂರಗಳು ಬಂದರೆ ಇಂಜಿನಿಯರ್ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರು, ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಈ ಕುರಿತು ಮಾಹಿತಿ ನೀಡಿದ್ದಾರೆ. 'ಬೆಂಗಳೂರು ನಗರವನ್ನು ಕಸಮುಕ್ತ, ರಸ್ತೆಗುಂಡಿ ಮುಕ್ತಗೊಳಿಸಲು ಕಾರ್ಯಪಡೆ ರಚನೆ ಮಾಡಲು ತೀರ್ಮಾನಿಸಲಾಗಿದೆ' ಎಂದು ಹೇಳಿದ್ದಾರೆ.

'ಆದಷ್ಟು ಶೀಘ್ರದಲ್ಲಿ ಕಾರ್ಯಪಡೆ ಅಸ್ತಿತ್ವಕ್ಕೆ ಬರಲಿದೆ. ಕಾರ್ಯಪಡೆ ನಗರವನ್ನು ಕಟ್ಟಡಗಳ ತ್ಯಾಜ್ಯಮುಕ್ತ, ಮೋರಿಗಳು ಹೂಳು ಮುಕ್ತವಾಗಿರುವಂತೆ ನೋಡಿಕೊಳ್ಳಲಿದೆ' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
'ಬಿಬಿಎಂಪಿ ಸದಸ್ಯರು ಮತ್ತು ಶಾಸಕರು ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ರಸ್ತೆಗುಂಡಿಗಳಿವೆ ಎಂದು ದೂರು ನೀಡಿದರೆ ಇಂಜಿನಿಯರ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. 198 ವಾರ್ಡ್ ಗಳ ಪಾಲಿಕೆ ಸದಸ್ಯರ ಸಭೆ ಕರೆದು, ರಸ್ತೆ ಗುಂಡಿಗಳ ಬಗ್ಗೆ ಮಾಹಿತಿ ಪಡೆದು ಇಂಜಿನಿಯರ್ಗಳ ಗಮನಕ್ಕೆ ತರಲು ಬಿಬಿಎಂಪಿ ಮೇಯರ್ಗೆ ಸೂಚಿಸಿದ್ದೇನೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು ನಗರದ ಎಲ್ಲ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿ ಹದಿನೈದು ದಿನಗಳ ಗಡುವು ನೀಡಿದ್ದೇನೆ: @siddaramaiah
— CM of Karnataka (@CMofKarnataka) October 9, 2017
ಒಂದು ರಸ್ತೆಯಲ್ಲಿ ಒಂದಕ್ಕಿಂತ ಹೆಚ್ಚು ಗುಂಡಿಗಳಿದ್ದರೆ ಗುಂಡಿ ಬಿದ್ದ ಜಾಗವನ್ನು ಮಾತ್ರ ಮುಚ್ಚದೇ, ಆ ಭಾಗದಲ್ಲಿನ ಇಡೀ ರಸ್ತೆಗೆ ಒಂದು ಪದರದ ಡಾಂಬರು ಹಾಕಲು ಬಿಬಿಎಂಪಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಮಳೆ ನಿಂತ ನಂತರ ಗುಂಡಿ ಮುಚ್ಚುವ ಕಾರ್ಯವನ್ನು ಬಿಬಿಎಂಪಿ ಕೈಗೆತ್ತಿಕೊಳ್ಳಲಿದೆ.











Click it and Unblock the Notifications