ತಮಿಳುನಾಡಿನಿಂದ ಕರ್ನಾಟಕಕ್ಕೆ ಬಸ್ ಸಂಚಾರ ಆರಂಭ
ಬೆಂಗಳೂರು, ಸೆ. 11: ಕರ್ನಾಟಕ ಬಂದ್, ಕಾವೇರಿ ವಿವಾದದ ಹಿನ್ನೆಲೆಯಲ್ಲಿ ತಮಿಳುನಾಡು ಹಾಗೂ ಕರ್ನಾಟಕ ನಡುವೆ ಸಾರಿಗೆ ಸಂಪರ್ಕ ಅಸ್ತವ್ಯಸ್ತಗೊಂಡಿದ್ದು ತಿಳಿದಿರಬಹುದು. ಸರಿ ಸುಮಾರು ಒಂದು ವಾರದಿಂದ ವ್ಯತ್ಯಯಗೊಂಡಿದ್ದ ಸಾರಿಗೆ ವ್ಯವಸ್ಥೆ ಭಾನುವಾರದಿಂದ ಮತ್ತೆ ಆರಂಭಗೊಂಡಿದೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ ಉಭಯ ರಾಜ್ಯಗಳ ನಡುವೆ ಸಾರಿಗೆ ಸಂಪರ್ಕ, ಟ್ರಕ್, ಲಾರಿ ಸಂಚಾರ ಕೂಡಾ ಸ್ಥಗಿತಗೊಂಡಿತ್ತು.

ಕರ್ನಾಟಕ ರಾಜ್ಯಾದ್ಯಂತ ಪ್ರತಿಭಟನೆ, ಹಿಂಸಾಚಾರ ನಡೆದ ಕಾರಣ ಕಳೆದ ಎಂಟು ದಿನಗಳಿಂದ ತಮಿಳುನಾಡಿನಿಂದ ಕರ್ನಾಟಕಕ್ಕೆ ಸರ್ಕಾರಿ ಬಸ್ ಸಂಚಾರವಿರಲಿಲ್ಲ. ಕಳೆದ ನಾಲ್ಕೈದು ದಿನಗಳಿಂದ ತಮಿಳುನಾಡಿನ ಸರ್ಕಾರಿ ಬಸ್ ಗಳನ್ನು ಗಡಿ ಭಾಗದಲ್ಲಿಯೇ ನಿಲ್ಲಿಸಲಾಗಿತ್ತು.
ಭಾನುವಾರ ಬೆಳಗ್ಗೆ ಸುಮಾರು 35ಕ್ಕೂ ಅಧಿಕ ಬಸ್ ಗಳು ಸುರಕ್ಷಿತವಾಗಿ ಬೆಂಗಳೂರು ತಲುಪಿವೆ. ಎರಡು ರಾಜ್ಯಗಳ ನಡುವೆ ಸಾರ್ವಜನಿಕರ ಸಂಚಾರ, ದಿನನಿತ್ಯದ ವ್ಯಾಪಾರಿಗಳು, ಹೋಟೆಲ್ ಉದ್ಯಮಕ್ಕೆ ಇದರಿಂದ ನೆರವಾಗಿದೆ.
ಎರಡು ವಾರಗಳಿಂದ ಸಮಸ್ಯೆ: ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂಬ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಖಂಡಿಸಿ ಕೊಂಗನಾಡು ಜನನಾಯಕ ಕಚ್ಚಿ ಸೇರಿದಂತೆ ವಿವಿಧ ಪಕ್ಷಗಳು ಮಂಗಳವಾರ (ಆಗಸ್ಟ್ 30) ತಮಿಳುನಾಡು ಬಂದ್ ಗೆ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಂದು ಬಂದ್ ನಿಂದಾಗಿ ಕರ್ನಾಟಕ- ತಮಿಳುನಾಡು ನಡುವೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಸುಮಾರು 600ಕ್ಕೂ ಅಧಿಕ ಬಸ್ ಗಳನ್ನು ಡಿಪೋದಲ್ಲೇ ನಿಲ್ಲಿಸಲಾಗಿತ್ತು,












Click it and Unblock the Notifications