ಸಿಲ್ಲಿ ಪಾಲಿಟಿಕ್ಸ್: ಟೇಪ್ ಕಟ್ ಮಾಡುವ ವಿಚಾರದಲ್ಲಿ ಎಂಟಿಬಿ-ಶರತ್ ಬಚ್ಚೇಗೌಡ ಗಲಾಟೆ
ಬೆಂಗಳೂರು, ಫೆ 10: ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆಗೆ ಟೇಪ್ ಕಟ್ ಮಾಡುವ ವಿಚಾರದಲ್ಲಿ ಇಬ್ಬರು ಜನ ಪ್ರತಿನಿಧಿಗಳು ಸಾರ್ವಜನಿಕರ ಮುಂದೆಯೇ ಕಿತ್ತಾಡಿಕೊಂಡಿದ್ದಾರೆ. ಏಕವಚನದಲ್ಲೇ ಬೈದಾಡಿಕೊಂಡ ಈ ಇಬ್ಬರು ನಾಯಕರಿಗೆ ಲೋಕಲ್ ಪಾಲಿಟಿಕ್ಸ್ ನಲ್ಲಿ ಇದು ಹೊಸದೇನಲ್ಲ.
ಬೆಂಗಳೂರು ಗ್ರಾಮಾಂತರ, ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮ ಪಂಚಾಯತಿಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ಥಳೀಯ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ಮತ್ತು ಸಚಿವ ಎಂ.ಟಿ.ಬಿ ನಾಗರಾಜ್ ಆಗಮಿಸಿದ್ದರು.
ಟೇಪ್ ಕಟ್ ಮಾಡಲು ತಂದಿದ್ದ ಕತ್ತರಿಯನ್ನು ಮೊದಲು ಎತ್ತಿಕೊಂಡು ಶರತ್ ಟೇಪ್ ಕಟ್ ಮಾಡಲು ಮುಂದಾಗಿದ್ದಾರೆ. "ಸಚಿವರು ಅನ್ನುವ ಮರ್ಯಾದೆ ಬೇಡ್ವೇನಯ್ಯಾ, ಇದೇ ಆಗೋಯಿತು ನಿಂದು"ಎಂದು ಸಾರ್ವಜನಿಕರ ಸಮ್ಮುಖದಲ್ಲೇ ಎಂ.ಟಿ.ಬಿ ನಾಗರಾಜ್ ಬೇಸರ ವ್ಯಕ್ತ ಪಡಿಸಿದ್ದಾರೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಶರತ್ ಬಚ್ಚೇಗೌಡ ಟೇಪ್ ಕಟ್ ಮಾಡಿ, ಕಟ್ಟಡದ ಒಳಗೆ ಹೋಗಿದ್ದಾರೆ.

ಇಬ್ಬರೂ ವೇದಿಕೆಗೆ ಹೋಗುವ ಜಾಗದಲ್ಲಿ, "ಅಪ್ಪಮಕ್ಕಳದ್ದು ಇದೇ ಆಗೋಯಿತು, ಬಚ್ಚೇಗೌಡ್ರ ಹಸ್ತಕ್ಷೇಪ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ"ಎಂದು ಎಂಟಿಬಿಯವರು, ಶರತ್ ಅವರಿಗೆ ಕೈತೋರಿಸಿ ಮಾತನಾಡಿದ್ದಾರೆ. ಇದಕ್ಕೆ ಶರತ್ ಬಚ್ಚೇಗೌಡ ಏರುಧ್ವನಿಯಲ್ಲಿ ತಿರುಗೇಟು ನೀಡಿದ್ದಾರೆ.
"ಕೈತೋರಿಸಿ ಮಾತನಾಡಬೇಡಿ, ಮರ್ಯಾದೆ ಕೊಟ್ಟು ಮಾತನಾಡಿ, ನನ್ನ ಬಗ್ಗೆ ಬೇಕಾದರೆ ಮಾತನಾಡಿ, ನನ್ನ ತಂದೆ ಬಚ್ಚೇಗೌಡ್ರ ವಿಚಾರವನ್ನು ಯಾಕೆ ಪ್ರಸ್ತಾವಿಸುತ್ತೀರಾ, ಅವರೇನು ಮಾಡಿದ್ದಾರೆ"ಎಂದು ಶರತ್ ಬಚ್ಚೇಗೌಡ ಆಕ್ರೋಶ ಹೊರಹಾಕಿದ್ದಾರೆ. ಆಗ ಅಲ್ಲಿದ್ದ ಎರಡೂ ನಾಯಕರ ಹಿಂಬಾಲಕರು ಇಬ್ಬರನ್ನೂ ಸಮಾಧಾನ ಪಡಿಸಿದ್ದಾರೆ. ಅಲ್ಲಿಗೂ ಮುಗಿಯಲಿಲ್ಲ..
ಕಾರ್ಯಕ್ರಮದ ಸಭಾ ವೇದಿಕೆಯಲ್ಲೂ ಇಬ್ಬರು ನಾಯಕರು ಕಿತ್ತಾಟ ಮುಂದುವರಿದಿತ್ತು. ಆಯೋಜಕರು ಇದೊಂದು ಸರಕಾರೀ ಕಾರ್ಯಕ್ರಮ ಇಬ್ಬರೂ ಜನಪ್ರತಿನಿಧಿಗಳು ಮಾತನಾಡಬೇಕು, ರಾಜಕೀಯ ವೇದಿಕೆಯಲ್ಲಿ ಬಿಡಿ, ಬಂದ ಸಾರ್ವಜನಿಕರಿಗೆ ಸರಕಾರೀ ಕಾರ್ಯಕ್ರಮದ ಬಗ್ಗೆ ವಿವರಣೆಯನ್ನು ನೀಡಿ ಎಂದು ಪರಿಪರಿಯಾಗಿ ಒತ್ತಾಯಿಸಿದರು. ಆದರೂ, ಇಬ್ಬರ ಜಗಳ ಮುಂದುವರಿಯುತ್ತಲೇ ಇತ್ತು. ಕೊನೆಗೆ, ಪೊಲೀಸರು ಮಧ್ಯಪ್ರವೇಶಿಸಿ ಇಬ್ಬರು ನಾಯಕರನ್ನು ಸಮಾಧಾನ ಪಡಿಸಿ ಉಸ್ಸಪ್ಪಾ.. ಎಂದರು.












Click it and Unblock the Notifications