ಬೇಸಿಗೆಯ ಧಗೆ: ಎಳನೀರು ದೇಹಕ್ಕೆ ತಂಪು, ಜೇಬಿಗೆ ಬಿಸಿ!
ಬೆಂಗಳೂರು, ಫೆಬ್ರವರಿ 23; ಕಳೆದ ವರ್ಷ ಮುಂಗಾರು ಕೈ ಕೊಟ್ಟ ಪರಿಣಾಮ ಈ ಬಾರಿ ರಾಜ್ಯದಲ್ಲಿ ಬೇಸಿಗೆಯ ಧಗೆ ಹೆಚ್ಚಿದೆ. ವಾಡಿಕೆಗಿಂತ 3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಳವಾಗಿದ್ದು, ಬಿಸಿಲಿನಿಂದ ಜನರು ಹೈರಾಣಾಗಿದ್ದಾರೆ. ತಂಪಾದ ಪಾನೀಯಗಳ ಮೊರೆ ಹೋಗುತ್ತಿದ್ದಾರೆ.
ಬೇಸಿಗೆಯಲ್ಲಿ ಬಹುತೇಕ ಜನರ ನೆಚ್ಚಿನ ಆಯ್ಕೆ ಎಳನೀರು. ಆರೋಗ್ಯ ಕಾಪಾಡಿಕೊಳ್ಳಲು ಉತ್ತಮವಾದ ಪಾನೀಯವಾದ ಎಳನೀರು ದೇಹಕ್ಕೆ ತಂಪು. ಆದರೆ ಅದು ಈಗ ಜೇಬಿಗೆ ಬಿಸಿಯಾಗಿದೆ. ಇದಕ್ಕೆ ಕಾರಣ ದರ ಏರಿಕೆ.

ಮಾರ್ಚ್ ಆರಂಭಕ್ಕೂ ಮುನ್ನವೇ ಬೆಂಗಳೂರಿನ ಜನರು ಎಳನೀರು ದರವನ್ನು ಕೇಳಿ ಬೇಸಿಗೆಯಲ್ಲಿ ಇನ್ನಷ್ಟು ಬೆವರುತ್ತಿದ್ದಾರೆ. ನಗರದ ಹಲವು ಪ್ರದೇಶಗಳಲ್ಲಿ ಎಳನೀರು ದರ 40 ಮತ್ತು 50ರ ಗಡಿ ದಾಟಿದೆ. ಉತ್ತಮ ಗುಣಮಟ್ಟದ ಎಳನೀರು 50 ರಿಂದ 55 ಆಗಿದೆ.
ಉದ್ಯೋಗ, ವ್ಯಾಸಂಗ ಹೀಗೆ ವಿವಿಧ ಕಾರಣಕ್ಕೆ ಬಿಸಿಲಿನಲ್ಲಿ ಮನೆಯಿಂದ ಹೊರ ಬಂದ ಜನರು ಧಣಿವಾರಿಸಿಕೊಳ್ಳಲು ಎಳನೀರು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಈ ಬಾರಿ ಅಧಿಕ ಬೇಡಿಕೆ ಇರುವ ಕಾರಣ ಫೆಬ್ರವರಿ ಅಂತ್ಯದಲ್ಲಿಯೇ ಎಳನೀರು ದರ ಹೆಚ್ಚಳವಾಗಿದೆ.
ದರ ವ್ಯತ್ಯಾಸವಿದೆ: ಎನ್. ಆರ್. ಕಾಲೋನಿಯ ದ್ವಾರಕ ಹೋಟೆಲ್ ಬಳಿ ಎಳನೀರು ಮಾರುವ ಶಂಕ್ರಪ್ಪ ಪ್ರಕಾರ, "ಒದೊಂದು ಕಡೆ ಒದೊಂದು ದರವಿದೆ, ಆದರೆ 35 ರಿಂದ 45 ರೂ. ತನಕ ಇರುವ ದರ ಸಾಮಾನ್ಯವಾಗಿದೆ. 20 ರೂ.ಗೆ ನುಸಿಪೀಡೆ ತಗಲಿರುವ, ಚಿಕ್ಕ ಚಿಕ್ಕ ಎಳನೀರು ಮಾರಾಟವಾಗುತ್ತಿದೆ" ಎನ್ನುತ್ತಾರೆ.
ಬೆಂಗಳೂರು ನಗರಕ್ಕೆ ಪ್ರಮುಖವಾಗಿ ಮಂಡ್ಯದ ಮದ್ದೂರು, ಚಾಮರಾಜನಗರ ಜಿಲ್ಲೆಗಳಿಂದ ಎಳನೀರು ಸರಬರಾಜು ಆಗುತ್ತದೆ. ಈ ಬಾರಿ ಸರಿಯಾಗಿ ಮಳೆ ಸುರಿಯದ ಕಾರಣ ಬೆಳೆ ಸಹ ಕಡಿಮೆ ಆಗಿದ್ದು, ಮಾರುಕಟ್ಟೆಗೆ ಎಳನೀರು ಪೂರೈಕೆಯಲ್ಲಿಯೂ ವ್ಯತ್ಯಯವಾಗಿದೆ.
ಹಸಿರು ಎಳನೀರುಗಳು ಸಾಮಾನ್ಯವಾಗಿ 35 ರಿಂದ 50 ರೂ. ತನಕ ಮಾರಾಟವಾಗುತ್ತಿವೆ. ಹೊರ ರಾಜ್ಯಗಳಿಂದ ಬರುವ ಎಳನೀರುಗಳ ದರ 50 ರೂ. ಗಡಿಯನ್ನು ದಾಟಿದೆ. ಮಾರ್ಚ್ ತಿಂಗಳಿನಲ್ಲಿ ದರಗಳು ಇನ್ನೂ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಗಾಂಧಿ ಬಜಾರ್ನಲ್ಲಿ 40 ರೂ., ಪೀಣ್ಯದಲ್ಲಿ 40 ರೂ., ಮಲ್ಲೇಶ್ವರದಲ್ಲಿ 35-40 ರೂ., ಶ್ರೀನಗರದಲ್ಲಿ 30 ರಿಂದ 40 ರೂ. ಎಳನೀರು ದರವಿದೆ. ಗಾಡಿಗಳಲ್ಲಿ, ಸೈಕಲ್ಗಳಲ್ಲಿ 20 ರಿಂದ 35 ರೂ.ಗಳಿಗೆ ಮಾರಾಟ ಮಾಡುವುದನ್ನು ನಗರದಲ್ಲಿ ಕಾಣಬಹುದಾಗಿದೆ.
ರಾಜ್ಯದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಫೆಬ್ರವರಿ ಅಂತ್ಯದಲ್ಲಿ ಇರಬೇಕಾದ ವಾಡಿಕೆಗಿಂತ 3 ರಿಂದ 4ರಷ್ಟು ಉಷ್ಣಾಂಶ ಹೆಚ್ಚಿದೆ. ಇದರಿಂದಾಗಿ ಬೇಸಿಗೆಯ ತಾಪದಿಂದ ಪಾರಾಗಲು ಜನರು ಎಳನೀರು ಮೊರೆ ಹೋಗುವಂತೆ ಆಗಿದೆ.
ಮುಂಗಾರು ಮಳೆಯ ಕೊರತೆಯ ಕಾರಣ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿದೆ. ಆದ ಕಾರಣ ಉಷ್ಣಾಂಶ ಏರಿಕೆಯಾಗುತ್ತಿದೆ. ಶುಭ್ರ ಆಕಾಶ ಇರುವ ಕಾರಣ ತಾಪಮಾನ ಹೆಚ್ಚಳವಾಗುತ್ತಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಉಷ್ಣಾಂಶ ಇನ್ನೂ ಏರಿಕೆಯಾಗಲಿದ್ದು, ಆಗ ಎಳನೀರು ದರದಲ್ಲಿ ಇನ್ನಷ್ಟು ಹೆಚ್ಚಳ ನಿರೀಕ್ಷೆ ಮಾಡಲಾಗಿದೆ.
ಮಾರ್ಚ್ನಲ್ಲಿ ಬೆಂಗಳೂರು ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಮಳೆ ಬಂದರೆ ಉಷ್ಣಾಂಶ ಕಡಿಮೆಯಾಗಲಿದೆ. ಆದರೆ ಮಳೆ ಬಾರದಿದ್ದರೆ ಕೂಲ್ ಸಿಟಿ ಎಂದು ಹೆಸರು ಪಡೆದಿರುವ ಬೆಂಗಳೂರು ನಗರದಲ್ಲಿಯೂ ಜನರು ಬಿಸಿಲ ಝಳ ಎದುರಿಸುವುದು ಅನಿವಾರ್ಯವಾಗಿದೆ.












Click it and Unblock the Notifications