ಏಕಾಂಗಿಯಾಗಿ ಹೋರಾಡಿದ್ದರೆ ಕಾಂಗ್ರೆಸ್ 10 ಸ್ಥಾನ ಗೆಲ್ಲುತ್ತಿತ್ತು: ಸುಮಲತಾ
Recommended Video
ಬೆಂಗಳೂರು, ಜೂನ್ 06: "ಕಾಂಗ್ರೆಸ್ ಪಕ್ಷವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳದೆ ಚುನಾವಣೆ ಎದುರಿಸಿದ್ದರೆ 10 ಸ್ಥಾನಗಳಲ್ಲಾದರೂ ಗೆಲುವು ಸಾಧಿಸುತ್ತಿತ್ತು" ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ ಎಂದು 'ದಿ ಎಕನಾಮಿಕ್ ಟೈಮ್ಸ್' ವರದಿ ಮಾಡಿದೆ.
"ಜನರು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯನ್ನು ಒಪ್ಪಿಕೊಂಡಿಲ್ಲ. ನಾನು ಸಹ ಇದೇ ವಿಷಯದ ಬಗ್ಗೆ ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕರಿಗೆ ಮನವರಿಕೆ ಮಾಡಿಕೊಡಲು ಯತ್ನಸಿದೆ, ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಅವರು ನನ್ನ ಮಾತು ಕೇಳದೆ ಜೆಡಿಎಸ್ ಹೇಳಿದ ಮಾತನ್ನೇ ಕೇಳಿದರು. ಆದ್ದರಿಂದಲೇ ಅವರು ಸೋತರು" ಎಂದು ಸುಮಲತಾ ಅಂಬರೀಶ್ ಹೇಳಿದರು.
ಸಂಸದೆ 'ಗಟ್ಟಿಗಿತ್ತಿ' ಸುಮಲತಾ ಕ್ಷಮೆಯಾಚಿಸಿದ ಎಚ್ ವಿಶ್ವನಾಥ್
ಕಾಂಗ್ರೆಸ್ ನಲ್ಲಿ ಅತ್ಯುತ್ತಮ ಅಭ್ಯರ್ಥಿಗಳಿದ್ದರು. ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತ್ತು. ಆದರೂ ಚುನಾವಣೆಯಲ್ಲಿ ಸೋಲಬೇಕಾಯ್ತು ಎಂದು ಅವರು ಹೇಳಿದರು.
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಸುಮಲತಾ ಕಾಂಗ್ರೆಸ್ ಗೆ ಎಂಬ ವದಂತಿ!
ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಅವರು ಸುಮಲತಾ ಅವರಿಗೆ ಶುಭ ಕೋರುತ್ತಿರುವ ಮತ್ತು ಕಾಂಗ್ರೆಸ್ ನ ಇನ್ನೂ ಹಲವು ನಾಯಕರ ಫ್ಲೆಕ್ಸ್ ಗಳಲ್ಲಿ ಸುಮಲತಾ ಅವರ ಚಿತ್ರಗಳು ರಾರಾಜಿಸುತ್ತಿದ್ದು, ಸುಮಲತಾ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಮಂಡ್ಯ ಭಾಗದಲ್ಲಿ ಎದ್ದಿದೆ.
ಕಾಂಗ್ರೆಸ್ ನಿಂದ ಪರೋಕ್ಷ ಬೆಂಬಲ
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲೇಬೇಕು ಎಂಬ ಉದ್ದೇಶದಿಂದ ಹಲವು ಕಾಂಗ್ರೆಸ್ ನಾಯರು ಸುಮಲತಾ ಅವರಿಗೆ ಪರೋಕ್ಷ ಬೆಂಬಲ ನೀದಿದ್ದಲ್ಲದೆ, ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕದಂತೆ ಒಳಗೊಳಗೇ ಮತದಾರರಲ್ಲಿ ಮನವಿ ಮಾಡಿ, ಸುಮಲತಾ ಅವರ ಗೆಲುವಿಗೆ ಹಲವು ಕಾಂಗ್ರೆಸ್ ಮುಖಂಡರು ಕಾರಣರಾಗಿದ್ದಾರೆ ಎಂಬವದಂತಿ ಇದೆ. ಈ ಪಟ್ಟಿಯಲ್ಲಿ ಚೆಲುವರಾಯಸ್ವಾಮಿ ಮುಂಚೂಣಿಯಲ್ಲಿರುವುದು ವಿಶೇಷ.
ಕಾಂಗ್ರೆಸ್ ಪಕ್ಷ ಸೇರಲಿದ್ದಾರೆಯೇ ಮಂಡ್ಯ ಸಂಸದೆ ಸುಮಲತಾ?
ಸೆಳೆಯುವ ಯತ್ನ ಮಾಡುತ್ತದೆಯೇ ಬಿಜೆಪಿ ?
ಸುಮಲತಾ ಅವರನ್ನು ಬಿಜೆಪಿ ಸೆಳೆಯುವ ಯತ್ನ ಮಾಡಬಹುದು ಎಂದು ಲೋಕಸಭೆ ಚುನಾವಣೆಗೂ ಮುನ್ನ ಹೇಳಲಾಗಿತ್ತು. ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಲೇಬೇಕೆಂಬ ಪಟ್ಟಿಗೆ ಬಿದ್ದು, ಸುಮಲತಾ ಅವರನ್ನು ಬೆಂಬಲಿಸುವಂತೆ ಸ್ವತಃ ನರೇಮದ್ರ ಮೋದಿ ಅವರೇ ಮಂಡ್ಯ ಜನತೆಯಲ್ಲಿ ಮನವಿ ಮಾಡಿದ್ದರು. ಮಾತ್ರವಲ್ಲ, ಬಿಜೆಪಿ ಅಭ್ಯರ್ಥಿಯನ್ನೇ ನಿಲ್ಲಿಸದೆ ತನ್ನ ಬೆಂಬಲ ಸೂಚಿಸಿತ್ತು. ಆದರೆ ಈಗ ಬಿಜೆಪಿಗೆ ಸಂಖ್ಯೆಯ ದೃಷ್ಟಿಯಿಂದ ಸುಮಲತಾ ಅವರ ಬೆಂಬಲ ಅಗತ್ಯವಿಲ್ಲ್. ಆದರೆ ಮಂಡ್ಯ ಭಾಗದಲ್ಲಿ ಪಕ್ಷದ ನೆಲೆಯನ್ನು ಗಟ್ಟಿಗೊಳಿಸಲು ಅಗತ್ಯವಿದ್ದೇ ಇದೆ.
ಕ್ಷಮೆ ಕೇಳಿದ್ದ ವಿಶ್ವನಾಥ್
ಇತ್ತೀಚೆಗಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಚ್ ವಿಶ್ವನಾಥ್ ಸುಮಲತಾ ಅವರ ಕ್ಷಮೆ ಕೇಳಿದ್ದರು. ಸುಮಲತಾ ಅವರು ಮಂಡ್ಯದ ಸೊಸೆ, ನಮ್ಮ ಮನೆ ಮಗಳು, ಅವರ ಮನಸ್ಸಿಗೆ ನೋವಾಗುವಂತೆ ಯಾರೇ ಮಾತನಾಡಿದ್ದರೂ, ನಿಂದನೆ ಮಾಡಿದ್ದರು ಈ ಬಗ್ಗೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದ್ದರು.