Ration Card: ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳಿಗೆ ಸಂಕಷ್ಟ ತಂದಿಟ್ಟ ಪಡಿತರ ಚೀಟಿ ಕಡ್ಡಾಯ
Ration Card: ಪಡಿತರ ಚೀಟಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಇದನ್ನು ಕಡ್ಡಾಯಗೊಳಿಸಿದ ಹಿನ್ನೆಲೆ ರಾಜ ರಾಜಧಾನಿ ಬೆಂಗಳೂರಿನಲ್ಲಿ ತುಂಬಾ ಜನ ಬೀದಿ ಬದಿ ವ್ಯಾಪಾರಿಗಳಿಗೆ ಸಮಸ್ಯೆ ಎದುರಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಹಾಗಾದರೆ ಯಾವ ರೀತಿ ಸಮಸ್ಯೆಯಾಗಿದೆ ಹಾಗೂ ಸರ್ಕಾರ ಇದಕ್ಕೆ ಯಾವ ರೀತಿಯಾಗಿ ಸೂಕ್ತ ಕ್ರಮ ಕೈಗೊಳ್ಳಬಹುದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಈಗಾಗಲೇ ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಪಡೆದಂತಹ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಲು ಸರ್ಕಾರ ಮುಂದಾಗಿದ್ದು, ಅಂತಹವರನ್ನು ಎಪಿಎಲ್ಗೆ ವರ್ಗಾಹಿಸುವ ಕೆಲಸವನ್ನು ಮುಂದುವರೆಸಿತ್ತು. ಮತ್ತೊಂದೆಡೆ ಸರ್ಕಾರವು ಅರ್ಹರ ಬಳಿಯೂ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು.

ಈ ಕುರಿತು ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ಹೊರಹಾಕಿದ ಘಟನೆಗಳು ನಡೆದಿದ್ದವು. ಬಳಿಕ ಎಚ್ಚತ್ತ ಸರ್ಕಾರ ಅರ್ಹರ ಬಿಪಿಎಲ್ ಕಾರ್ಡ್ಗಳನ್ನು ಮತ್ತೆ ಹಿಂತಿರುಗಿಸಿ ಅವರಿಗೆ ತಲುಪಬೇಕಾದ ಪಡಿತರವನ್ನು ತಲುಪಿಸುವುದಾಗಿಯೂ ಹೇಳಿತ್ತು. ಮತ್ತೊಂದೆಡೆ ಇದೀಗ ಬೆಂಗಳೂರಿನಲ್ಲಿ ಪಡಿತರ ಚೀಟಿ ಕಡ್ಡಾಯಗೊಳಿಸಿದ ಹಿನ್ನೆಲೆ ಬೀದಿ ಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವ ಗಂಭೀರ ಆರೋಪವೊಂದು ಕೇಳಿಬಂದಿದೆ.
7 ವರ್ಷಗಳ ಬಳಿಕ ಬೆಂಗಳೂರಿನ ಬೀದಿ ಬದಿ ವ್ಯಾಪಾರಗಳ ಸರ್ವೇ ನಡೆಸಲಾಗುತ್ತಿದ್ದು, ಪಡಿತರ ಚೀಟಿ ಕಡ್ಡಾಯಗೊಳಿಸಿದ ಹಿನ್ನೆಲೆ ಸಾವಿರಾರು ಮಂದಿ ಬೀದಿ ವ್ಯಾಪಾರಿಗಳು ಸರ್ವೇಯಿಂದ ಹೊರ ಉಳಿಯುವಂತಾಗಿದೆ ಎನ್ನುವ ಗಂಭೀರ ಆರೋಪವೊಂದು ಕೇಳಿಬಂದಿದೆ.
ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಲು 2014ರಲ್ಲಿ ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದಿದೆ. ಅದರಡಿಯಲ್ಲಿ ನಿಯಮಾವಳಿಗಳನ್ನು ರೂಪಿಸುವುದು, ವ್ಯಾಪಾರಿಗಳ ಸರ್ವೆ ಕಾರ್ಯ ನಡೆಸುವುದು ಮತ್ತು ಅವರ ಸ್ಥಿತಿಯನ್ನಾಧರಿಸಿ ಯೋಜನೆಗಳನ್ನ ರೂಪಿಸುವುದು, ಪಟ್ಟಣ ವ್ಯಾಪಾರ ಸಮಿತಿಗಳನ್ನು ರಚನೆ ಮಾಡುವುದು ರಾಜ್ಯ ಸರ್ಕಾರಗಳ ಜವಾಬ್ದಾರಿ ಆಗಿದೆ.
ಇನ್ನು ಈ ಪ್ರಕಾರ ಬಿಬಿಎಂಪಿಯು 2017ರಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಸುಮಾರು 25,000 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿನ ಚೀಟಿ ನೀಡಲಾಗಿತ್ತು. ನಂತರ ಬಿಬಿಎಂಪಿಯು ಸರ್ವೆ ಮಾಡುವುದಕ್ಕೆ ಮುಂದಾಗಿರಲಿಲ್ಲ. ಇದೀಗ ಬಿಬಿಎಂಪಿ ಮತ್ತೆ 8 ವಲಯಗಳಿಗೆ ಪ್ರತ್ಯೇಕ ಆ್ಯಪ್ನಲ್ಲಿ ಬೀದಿ ಬದಿ ವ್ಯಾಪಾರಿಗಳ ಸ್ಥಳ, ಫೋಟೋ, ವಿಳಾಸ ಸೇರಿದಂತೆ ಎಲ್ಲ ಮಾಹಿತಿಯನ್ನು ದಾಖಲು ಮಾಡುವ ವ್ಯವಸ್ಥೆ ಮಾಡಿಕೊಂಡು ಸರ್ವೇ ನಡೆಸಿದೆ ಎಂದು ಎಂದು ಸುವರ್ಣ ನ್ಯೂಸ್ ವರದಿ ಮಾಡಿದೆ.
ಸರ್ವೇ ವೇಳೆ ಬೀದಿ ವ್ಯಾಪಾರಿಗಳಿಗೆ ಪಡಿತರ ಚೀಟಿ ಕಡ್ಡಾಯ ದಾಖಲೆ ಸಲ್ಲಿಸುವುದಕ್ಕೆ ತಿಳಿಸಲಾಗಿದ್ದು, ಹಲವು ಬೀದಿ ಬದಿ ವ್ಯಾಪಾರಿಗಳು ಸರ್ವೇಯಿಂದ ಹೊರ ಉಳಿಯುವುದಕ್ಕೆ ಪ್ರಮುಖಾ ಕಾರಣವಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಸರ್ವೇ ವೇಳೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಬುಕ್, ಕುಟುಂಬ ಪಡಿತರ ಚೀಟಿ, ಕುಟುಂಬ ಸದಸ್ಯರ ಮಾಹಿತಿ, ಸ್ವಯಂ ಘೋಷಣೆ ಪ್ರಮಾಣ ಪತ್ರ ನೀಡಬೇಕೆಂದು ಬಿಬಿಎಂಪಿ ಸೂಚನೆ ನೀಡಿದೆ.
ಕೇಂದ್ರ ಸರ್ಕಾರ ಪಿಎಂ ಸ್ವನಿಧಿ ಯೋಜನೆಯಡಿ ನಗರದ ಸುಮಾರು 80,000 ಬೀದಿ ಬದಿ ವ್ಯಾಪಾರಿಗಳಿಗೆ ಬ್ಯಾಂಕ್ ಮೂಲಕ ಸಾಲ ನೀಡಲಾಗಿದೆ. ಆದರೆ, ಬಿಬಿಎಂಪಿಯು ಸರ್ವೇ ವೇಳೆ ಸಾಲ ಪಡೆದವರ ಅರ್ಧದಷ್ಟು ಮಂದಿಯನ್ನು ಗುರುತಿಸುವ ಕೆಲಸ ಮಾಡಿಲ್ಲ. ಆದ್ದರಿಂದ ನಗರದ ಬೀದಿ ವ್ಯಾಪಾರಿಗಳ ಸಂಖ್ಯೆ 30,000 ದಾಟಿಲ್ಲ ಎಂದು ತಿಳಿದುಬಂದಿದೆ.
ಬಿಬಿಎಂಪಿಯ ಅಧಿಕಾರಿಗಳು ನಗರದ ದೊಡ್ಡ ದೊಡ್ಡ ಮಾರುಕಟ್ಟೆ ಪ್ರದೇಶದಲ್ಲಿ ಮಾತ್ರ ಸರ್ವೇ ಕಾರ್ಯ ನಡೆಸಿದ್ದಾರೆ. ಸಣ್ಣ-ಸಣ್ಣ ವ್ಯಾಪಾರಿಗಳ ಪ್ರದೇಶಗಳಲ್ಲಿ ಸರ್ವೇ ನಡೆಸಿಲ್ಲ. ಆದ್ದರಿಂದ ಹಲವು ಬೀದಿ ಬದಿ ವ್ಯಾಪಾರಿಗಳು ಸಮೀಕ್ಷೆಗೆ ಒಳಪಟ್ಟಿಲ್ಲ. ಡಿಸೆಂಬರ್ 20ಕ್ಕೆ ಸರ್ವೇ ಕೊನೆಗೊಳಿಸುವುದಾಗಿ ಬಿಬಿಎಂಪಿ ಹೇಳಿತ್ತು. ಯಾವುದೇ ಕಾರಣಕ್ಕೂ ಸರ್ವೇ ನಿಲ್ಲಿಸಬಾರದು. ಮುಂದುವರೆಸಬೇಕೆಂದು ಬೀದಿ ಬದಿ ವ್ಯಾಪಾರಿಗಳ ಸಂಘಟನೆ ಒತ್ತಾಯಿಸಿದೆ ಎಂದು ತಿಳಿದುಬಂದಿದೆ.
ಒಂದು ಕುಟುಂಬಕ್ಕೆ ಒಬ್ಬರಿಗೆ ಬೀದಿ ವ್ಯಾಪಾರಿ ಗುರುತಿನ ಚೀಟಿ ನೀಡುವ ನಿಯಮವಿದೆ. ಆದ್ದರಿಂದ ಪಡಿತರ ಚೀಟಿ ದಾಖಲೆ ಕಡ್ಡಾಯಗೊಳಿಸಲಾಗಿದೆ. ಕರ್ನಾಟಕದ ರೇಷನ್ ಕಾರ್ಡ್ ಹೊರತುಪಡಿಸಿ ಯಾವುದೇ ರಾಜ್ಯದ ರೇಷನ್ ಕಾರ್ಡ್ ಕೊಟ್ಟರೂ, ಪಡೆದು ದಾಖಲಾತಿ ಮಾಡಲಾಗುತ್ತದೆ ಎಂದು ಬಿಬಿಎಂಪಿ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೀದಿ ಬದಿ ವ್ಯಾಪಾರಿಗಳ ವಿವರ: ಬೆಂಗಳೂರು ಪಶ್ಚಿಮ-6,959, ಬೆಂಗಳೂರು ದಕ್ಷಿಣ-5,016, ಆರ್.ಆರ್ ನಗರ-4,028, ಪೂರ್ವ-3,915, ಬೊಮ್ಮನಹಳ್ಳಿ- 2,223, ಮಹದೇವಪುರ-2,157, ಯಲಹಂಕ-1,789, ದಾಸರಹಳ್ಳಿ-1,517, ಒಟ್ಟು 27,604 ಬೀದಿ ಬದಿ ವ್ಯಾಪಾರಿಗಳಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications