ಗುಪ್ತ ಮಾಹಿತಿ ಪತ್ತೆಗೆ ಸಜ್ಜಾಗಲಿದೆ ಟೆಕ್ಕಿಗಳ ಪ್ರತ್ಯೇಕ ಪಡೆ
ಬೆಂಗಳೂರು ಡಿ. 29: ಬಾಂಬ್ ಸ್ಫೋಟದಂತಹ ಗಂಭೀರ ಪ್ರಕರಣಗಳ ಮಾಹಿತಿಗಾಗಿ ಇನ್ನು ಮುಂದೆ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಗೂಢಚರ ಸಂಸ್ಥೆಗಳನ್ನು ಅವಲಂಬಿಸಬೇಕಾಗಿಲ್ಲ. ಏಕೆಂದರೆ ರಾಜ್ಯ ಸರ್ಕಾರವೇ ಗುಪ್ತ ಮಾಹಿತಿ ಪತ್ತೆಗೆ ಟೆಕ್ಕಿಗಳ ಪ್ರತ್ಯೇಕ ಪಡೆ ಸ್ಥಾಪಿಸಲು ನಿರ್ಧರಿಸಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಚರ್ಚ್ ಸ್ಟ್ರೀಟ್ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ನಂತರ ಪತ್ರಕರ್ತರಿಗೆ ಈ ಮಾಹಿತಿ ನೀಡಿದ್ದಾರೆ. ಪೊಲೀಸ್ ಇಲಾಖೆಗೆ 40 ಸಾಫ್ಟ್ವೇರ್ ಇಂಜಿನಿಯರ್ಗಳನ್ನು ನೇಮಿಸಿಕೊಳ್ಳಲಾಗುವುದು. ಅವರು ಸೈಬರ್ ಕ್ರೈಂಗಳನ್ನು ಪತ್ತೆಹಚ್ಚಲಿದ್ದಾರೆಂದು ತಿಳಿಸಿದರು. [ಹೊಸ ವರ್ಷಾಚರಣೆ ಕೈ ಬಿಡುವುದೇ ಲೇಸು]

ಆಂಧ್ರ ಮಾದರಿ 'ಸಾರ್ವಜನಿಕ ರಕ್ಷಣೆಗೆ ಕಾನೂನು' : ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ರಾಜ್ಯ ಸರ್ಕಾರ ಶೀಘ್ರ ಹೊಸ ಕಾನೂನು ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಆಂಧ್ರ ಪ್ರದೇಶದಲ್ಲಿ ಈಗಾಗಲೇ ಜಾರಿಯಲ್ಲಿರುವ 'ಸಾರ್ವಜನಿಕ ಸುರಕ್ಷತಾ ಜಾರಿ ಕಾಯಿದೆ, 2013' ಮಾದರಿಯಲ್ಲಿ ಈ ಕಾನೂನು ರಚಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಕಾನೂನು ಪ್ರಕಾರ 100ಕ್ಕಿಂತ ಹೆಚ್ಚು ಜನ ಸೇರುವ ಜಾಗದಲ್ಲಿ ಸಿಸಿಟಿವಿ ಅಳವಡಿಸಬೇಕು ಹಾಗೂ ಜನರ ಪ್ರವೇಶವನ್ನು ನಿಯಂತ್ರಿಸಬೇಕು. [ಬಾಂಬ್ ಬಿದ್ದರೂ ಬೆದರದ ಜನ]
10 ಲಕ್ಷ ರು. ಬಹುಮಾನ : ಪೊಲೀಸರಿಂದಾಗಲಿ, ಗೂಢಚಾರರಿಂದಾಗಲಿ ಕರ್ತವ್ಯ ಲೋಪವಾಗಿಲ್ಲ ಎಂದು ಮುಖ್ಯಮಂತ್ರಿಗಳು ಮತ್ತೆ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಉಗ್ರರ ಕುರಿತು ಸುಳಿವು ನೀಡಿದವರಿಗೆ 10 ಲಕ್ಷ ರು. ಬಹುಮಾನ ನೀಡುವುದಾಗಿಯೂ ತಿಳಿಸಿದ್ದಾರೆ.
ಬೆಂಗಳೂರು ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಉಪ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಮಧ್ಯಪ್ರದೇಶದ ಜೈಲಿನಿಂದ ಕಳೆದ ವರ್ಷ ತಪ್ಪಿಸಿಕೊಂಡಿರುವ ಐವರು ಸಿಮಿ ಉಗ್ರರು ಈ ಘಟನೆಯ ಹಿಂದಿರುವ ಕುರಿತು ತನಿಖೆ ನಡೆಸಲಾಗುತ್ತಿದೆ. [ಜಾಣ ಮೆಹದಿ ಗುಪ್ತದಳದ ಕಣ್ಣು ತಪ್ಪಿಸಿದ್ದು ಹೇಗೆ]
ಸ್ಫೋಟದಲ್ಲಿ ಮೃತಪಟ್ಟಿರುವ ಭವಾನಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಗೊಂಡವರ ಚಿಕಿತ್ಸೆ ವೆಚ್ಚ ಭರಿಸಲಾಗುವುದು. ಹೊಸ ವರ್ಷಾಚರಣೆಗೆ ರಾತ್ರಿ ಎರಡು ಗಂಟೆಯವರೆಗೆ ಅವಕಾಶ ನೀಡಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.












Click it and Unblock the Notifications