ಅಮಾನವೀಯ ಘಟನೆ: ವಿಷ ಸೇವಿಸಿ ಐಸಿಯು ಸೇರಿದ್ದ ವ್ಯಕ್ತಿಗೆ ಥಳಿಸಿದ ಕೆಸಿ ಜನರಲ್ ಆಸ್ಪತ್ರೆಯ ಸಿಬ್ಬಂದಿ!
ಬೆಂಗಳೂರು ಮೇ 25: ಐಸಿಯು(ICU)ನಲ್ಲಿ ಇದ್ದ ವ್ಯಕ್ತಿಗೆ ಸಿಬ್ಬಂದಿ ರಕ್ತ ಬರುವಂತೆ ಥಳಿಸಿದ ಅಮಾನವೀಯ ಘಟನೆ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.
ಮೇ 22ರಂದು ವಿಷ ಕುಡಿದ ಹಿನ್ನೆಲೆಯಲ್ಲಿ ನೆಲಮಂಗಲ ಮೂಲದ ವೆಂಕಟೇಶ್ ಎಂಬುವವರು ಆಸ್ಪತ್ರೆಗೆ ದಾಖಲಾಗಿದ್ದರು. ವೆಂಕಟೇಶ್ ಅವರನ್ನು ಐಸಿಯು ವಾರ್ಡ್ ಗೆ ಸೇರಿಸಲಾಗಿತ್ತು. ಈ ವೇಳೆ ಆಸ್ಪತ್ರೆಯ ವಾರ್ಡ್ ಬಾಯ್ ಧನಂಜಯ್ ಎಂಬಾತ ಮನಬಂದಂತೆ ರೋಗಿಯನ್ನು ಥಳಿಸಿದ್ದಾನೆ ಎಂದು ಆರೋಪಿಸಲಾಗಿದೆ.

ತೀವ್ರ ಅಸ್ವಸ್ಥನಾಗಿದ್ದ ರೋಗಿ ವೆಂಕಟೇಶ್ ಚಿಕಿತ್ಸೆ ವೇಳೆ ಕೂಗಾಡಿದ ಎನ್ನುವ ಕಾರಣಕ್ಕೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಮಾನವೀಯತೆ ಮರೆತು ವರ್ತಿಸಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವೆಂಕಟೇಶ್ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನೇಕಲ್ ಆಸ್ಪತ್ರೆಯೊಂದರಲ್ಲಿ ಮೊದಲು ಚಿಕಿತ್ಸೆ ಪಡೆದು ಬಳಿಕ ಮೇ 22ರಂದು ವಿಷ ಕುಡಿದ ಹಿನ್ನೆಲೆಯಲ್ಲಿ ವೆಂಕಟೇಶ್ ಅವರು ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಆಡ್ಮಿಟ್ ಆಗಿದ್ದರು. ಐಸಿಯುನಲ್ಲಿ ವೆಂಕಟೇಶ್ ಅವರನ್ನು ಅಡ್ಮಿಟ್ ಮಾಡಿದ್ದರಿಂದ ಕುಟುಂಬಸ್ಥರಿಗೆ ಒಳಗಡೆ ಪ್ರವೇಶ ಇರಲಿಲ್ಲ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ವೆಂಕಟೇಶ್ ಅವರನ್ನು ಥಳಿಸಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.
'ನಮ್ಮ ವೈದ್ಯರು ಸಹ ಉತ್ತಮ ರೀತಿಯಲ್ಲಿ ಚಿಕಿತ್ಸೆ ಕೊಟ್ಟಿದ್ದಾರೆ. ಸೂಕ್ಷ್ಮ ಚಿಕಿತ್ಸೆ ಕೊಡುವಾಗ ರೋಗಿಗಳು ಒಮ್ಮೊಮ್ಮೆ ವ್ಯತಿರಿಕ್ತವಾಗಿ ವರ್ತಿಸುತ್ತಾರೆ. ಅದರಲ್ಲೂ ಅವರು ತೀವ್ರ ನಿಗಾ ಘಟಕದಲ್ಲಿ ಇರೋದರಿಂದ ಅವರನ್ನು ಕಂಟ್ರೋಲ್ ಮಾಡೋದು ಕಷ್ಟ' ಎಂದು ಕೆಜಿ ಜನರಲ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಇಂದಿರಾ ಕಬಾಡೆ ಅವರ ಸ್ಪಷ್ಟನೆ ನೀಡಿದರು.
ನಮ್ಮ ಆಸ್ಪತ್ರೆ ಸಿಸಿಟಿವಿ ಸಹ ಸರಿಯಾಗಿ ವರ್ಕ್ ಆಗುತ್ತಿಲ್ಲ. ನಾವು ಆಸ್ಪತ್ರೆ ಸಿಬ್ಬಂದಿಗಳೊಂದಿಗೆ ಘಟನೆಯ ಬಗ್ಗೆ ವಿವರಣೆ ಪಡೆದುಕೊಂಡಿದ್ದೇನೆ. ಇಲ್ಲಿ ಹಲವು ಅಭಿವೃದ್ದಿ ಕಾರ್ಯ ಆಗದೆ ಇರುವುದರಿಂದ ನಿನ್ನೆ ಘಟನೆ ಏನಾಗಿದೆ ಎಂದು ತಿಳಿಯುತ್ತಿಲ್ಲ. ನಮ್ಮ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎಂದು ನಂಬಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಇಂದಿರಾ ಹೇಳಿದ್ದಾರೆ.
ನಮ್ಮ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಅನ್ನೋದು ಸುಳ್ಳು. ಧನಂಜಯ್ ಸೆಕೆಂಡ್ ಶಿಫ್ಟ್ನಲ್ಲಿದ್ದಾರೆ. ಅವರು ಬಂದ್ಮೇಲೆ ರೋಗಿಯ ಕುಟುಂಬದ ಮುಂದೆನೇ ವಿಚಾರಣೆ ಮಾಡುತ್ತೇನೆ. ಆತ ಹಲ್ಲೆ ಮಾಡಿದ್ರೆ ಆತನ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಮೇಲ್ನೋಟಕ್ಕೆ ಹಲ್ಲೆ ಆಗಿದೆ ಎನ್ನುವುದಾಗಿ ಕಾಣಿತ್ತಿಲ್ಲ ಎಂದರು.
'ನಮ್ಮವರು ವಿಷ ಕುಡಿದು ಕೆಜಿ ಜನರಲ್ ಆಸ್ಪತ್ರೆ ಐಸಿಯುನಲ್ಲಿ ಸೇರಿದ್ದರು. ಈ ವೇಳೆ ಧನಂಜಯ ಎಂಬ ವಾರ್ಡ್ ಬಾಯ್ ಪೇಷಂಟ್ ಕೂಗಾಡುತ್ತಿದ್ದ ಎಂದು ಹೇಳಿ ಬಾಯಿ, ಮೂಗಿನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪೊಲೀಸರಿಗೂ ಸಹ ದೂರು ನೀಡಿದ್ದೇವೆ. ನಿನ್ನೆ ರಾತ್ರಿ 7.30ರ ಸುಮಾರಿಗೆ ಈ ಘಟನೆ ನಡೆದಿದೆ' ಎಂದು ರೋಗಿ ಸಂಬಂಧಿ ಲಲಿತ ಎಂಬುವವರು ಹೇಳಿದ್ದಾರೆ.
ಈ ಬಗ್ಗೆ ವೈದ್ಯರಿಗೂ ಸಹ ಮಾಹಿತಿ ನೀಡಿದ್ದೇವೆ. ಹಲ್ಲೆ ಮಾಡಿದ ವಾರ್ಡ್ ಬಾಯ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಿಸಿಟಿವಿ ಕ್ಯಾಮೆರಾ ಪರಿಶೀಲಿಸುವಂತೆ ಹೇಳಿದರೆ, ಅದು ವರ್ಕ್ ಆಗುತ್ತಿಲ್ಲ. ಮೊದಲು ರೋಗಿ ಗುಣ ಆಗುವ ಕಡೆ ಗಮನವಹಿಸಿ ಅಂತಿದ್ದಾರೆ ಎಂದು ರೋಗಿ ಸಂಬಂಧಿ ಲಲಿತ ಹೇಳಿದರು.












Click it and Unblock the Notifications