ಅನರ್ಹ ಶಾಸಕ ಸೋಮಶೇಖರ್, ಎಂಟಿಬಿ ನಾಗರಾಜು ರಾಜಕೀಯ ನಿವೃತ್ತಿ ಮಾತು
Recommended Video
ಬೆಂಗಳೂರು, ಜುಲೈ 29: ಅತೃಪ್ತ ಶಾಸಕರ ಸಾಲಿನಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಎಸ್.ಟಿ.ಸೋಮಶೇಖರ್ ಮತ್ತು ಎಂಟಿಬಿ ನಾಗರಾಜು ಅವರು ಮುಂಬೈನಿಂದ ಬೆಂಗಳೂರಿಗೆ ಮರಳಿದ್ದು, ರಾಜ್ಯ ರಾಜಕೀಯ ಪಲ್ಲಟಕ್ಕೆ ಕಾರಣೀಕೃತರಾದ ಅವರು ಏಕಾ-ಏಕಿ ರಾಜಕೀಯ ನಿವೃತ್ತಿಯ ಮಾತನಾಡಿದ್ದಾರೆ.
ನಿನ್ನೆ ತಡರಾತ್ರಿ ಐವರು ಅತೃಪ್ತ ಶಾಸಕರು ಬೆಂಗಳೂರಿಗೆ ಆಗಮಿಸಿದ್ದು, ಇಂದು ಬೆಳಿಗ್ಗೆ ಎಸ್.ಟಿ.ಸೋಮಶೇಖರ್ ಅವರು ಮಾಧ್ಯಮಗಳೊಟ್ಟಿಗೆ ಮಾತನಾಡಿ, ರಾಜಕೀಯ ನಿವೃತ್ತಿಯ ಇಂಗಿತ ವ್ಯಕ್ತಪಡಿಸಿದ್ದಾರೆ. ಎಂಟಿಬಿ ನಾಗರಾಜು ಅವರು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾಳೆ ಕ್ಷೇತ್ರದ ಮುಖಂಡರ ಸಭೆ ಕರೆದಿರುವ ಎಸ್.ಟಿ.ಸೋಮಶೇಖರ್ ಅವರು ಅವರೊಂದಿಗೆ ವಿಷಯ ಚರ್ಚಿಸಿ ರಾಜಕೀಯ ನಿವೃತ್ತಿ ಬಗ್ಗೆ ಸ್ಪಷ್ಟ ನಿರ್ಧಾರ ತಳೆಯುವುದಾಗಿ ತಿಳಿಸಿದ್ದಾರೆ.
ಅತೃಪ್ತ ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ರಮೇಶ್ ಕುಮಾರ್ ಅವರ ನಡೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸೋಮಶೇಖರ್ ಅವರು, 'ರಾಜೀನಾಮೆ ನೀಡುವುದು, ಇಷ್ಟ ಬಂದ ಪಕ್ಷ ಸೇರುವುದು ಶಾಸಕರ ಹಕ್ಕು, ಅದನ್ನು ನಾವು ಚಲಾಯಿಸಿದ್ದೇವೆ ಎಂದು ಹೇಳಿದರು.

ಕ್ಷೇತ್ರದ ಜನರ ಚರ್ಚಿಸಿ ರಾಜಕೀಯ ನಿವೃತ್ತಿ: ಎಂಟಿಬಿ
ಅನರ್ಹಗೊಂಡಿರುವ ಮತ್ತೊಬ್ಬ ಶಾಸಕ ಎಂಟಿಬಿ ನಾಗರಾಜು ಅವರೂ ಸಹ ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದು. 'ಹಲವು ವರ್ಷಗಳಿಂದ ರಾಜಕೀಯ ನೋಡಿದ್ದೇನೆ, ಎರಡು ದಿನಗಳ ಕಾಲ ಕ್ಷೇತ್ರದ ಜನರೊಂದಿಗೆ ಚರ್ಚಿಸಿ ಸ್ಪಷ್ಟ ನಿರ್ಧಾರಕ್ಕೆ ಬರುತ್ತೇನೆ' ಎಂದು ಹೇಳಿದ್ದಾರೆ.

ರಾಜಕೀಯಕ್ಕೆ ಬರುವುದು ಮಗನ ಇಷ್ಟ: ಎಂಟಿಬಿ
ನಿಮ್ಮ ಸ್ಥಾನವನ್ನು ಪುತ್ರ ತುಂಬುವನೇ? ಎಂಬ ಪ್ರಶ್ನೆಗೆ ಉತ್ತರಿಸಿದ ಎಂಟಿಬಿ ನಾಗರಾಜು, ಮಗನನ್ನು ರಾಜಕೀಯಕ್ಕೆ ತರಬೇಕೆಂಬ ಆಸೆಯಿಲ್ಲ, ಅವನು ಇಷ್ಟಪಟ್ಟರೆ ಮಾತ್ರ ರಾಜಕೀಯಕ್ಕೆ ಬರಬಹುದು ಎಂದು ಹೇಳಿದರು.

ಐಟಿ, ಇಡಿ ದಾಳಿಗೆ ಹೆದರಿ ರಾಜೀನಾಮೆ ನೀಡಿಲ್ಲ: ಎಂಟಿಬಿ
ಐಟಿ, ಇಡಿ ದಾಳಿಗೆ ಹೆದರಿ ರಾಜೀನಾಮೆ ನೀಡಿಲ್ಲ ಎಂದ ಅವರು, ಕಾಲ-ಕಾಲಕ್ಕೆ ತೆರಿಗೆಗಳನ್ನು ಕಟ್ಟಿದ್ದೇನೆ, ಯಾರ ಹೆದರಿಕೂ ಒಳಗಾಗಿ ನಾನು ರಾಜೀನಾಮೆ ನೀಡಿಲ್ಲ ಎಂದು ಹೇಳಿದರು.

ಅನರ್ಹತೆ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದ್ದಾರೆ
ಅನರ್ಹರಾಗಿರುವ ಹದಿನೇಳು ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರುವ ನಿರ್ಣಯ ಮಾಡಿದ್ದು, ಸೋಮಶೇಖರ್ ಮತ್ತು ಎಂಟಿಬಿ ನಾಗರಾಜು ಅವರೂ ಸಹ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದ್ದಾರೆ.












Click it and Unblock the Notifications