ತಾಯಿ ಮೊಬೈಲ್ ಕೊಡಲಿಲ್ಲ; ವಿದ್ಯಾರ್ಥಿನಿ ನೇಣಿಗೆ ಶರಣು
ಬೆಂಗಳೂರು, ಸೆಪ್ಟೆಂಬರ್ 15 : ತಾಯಿ ಮೊಬೈಲ್ ಕೊಡಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಹನುಮಂತನಗರದ 10ನೇ ಕ್ರಾಸ್ ನಿವಾಸಿ ಪ್ರಿಯಾಂಕ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಎಸ್ಎಸ್ಎಲ್ಸಿ ಓದುತ್ತಿದ್ದ ಪ್ರಿಯಾಂಕ ಶನಿವಾರ ಶಾಲೆಗೆ ಹೋಗಿದ್ದಳು. ಸಂಜೆ ಸ್ನೇಹಿತೆ ಮನೆಗೆ ಹೋಗುವುದಾಗಿ ತಾಯಿಯ ಬಳಿ ಹೇಳಿದ್ದಳು.
ಮೊಬೈಲ್ ತೆಗೆದುಕೊಂಡು ಹೋಗುವುದಾಗಿ ತಾಯಿಯನ್ನು ಕೇಳಿದ್ದಳು. ತಾಯಿ ಮೊಬೈಲ್ ನೀಡುವುದಿಲ್ಲ ಎಂದು ಹೇಳಿ ದೇವಾಲಯಕ್ಕೆ ಹೋಗಿದ್ದಳು. ದೇವಾಲಯದಿಂದ ಬಂದು ನೋಡುವಾಗ ಪ್ರಿಯಾಂಕ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಳು.

ಹನುಂಮತನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳಿಹಿಸಲಾಗಿದೆ. ಇಂದು ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡ ತನಿಖೆ ನಡೆಸುತ್ತಿದ್ದಾರೆ.
ತಂದೆಯ ಹತ್ಯೆ : ಪಬ್ ಜಿ ಆಡಲು ಮೊಬೈಲ್ ರೀಚಾರ್ಜ್ಗೆ ತಂದೆ ಹಣಕೊಡಲಿಲ್ಲ ಎಂಬ ಕಾರಣಕ್ಕೆ ತಂದೆಯನ್ನು ಪುತ್ರನೇ ಹತ್ಯೆ ಮಾಡಿದ ಘಟನೆ ಬೆಳಗಾವಿಯಲ್ಲಿ ಮಂಗಳವಾರ ನಡೆದಿತ್ತು.












Click it and Unblock the Notifications