ಖಾಸಗಿ ಆಸ್ಪತ್ರೆಗಳಲ್ಲಿ 50ರಷ್ಟು ಹಾಸಿಗೆ ಸರ್ಕಾರ ಕಳುಹಿಸುವ ರೋಗಿಗೆ
ಬೆಂಗಳೂರು, ಜೂನ್ 23: ಕೊರೊನಾ ವೈರಸ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಇದೆ ಎಂಬ ಆರೋಪದ ನಡುವೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Recommended Video
ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕೊವಿಡ್ ರೋಗಿಗಳಿಗಾಗಿ ಸಿದ್ದಪಡಿಸಲಾಗಿರುವ ನೂರು ಬೆಡ್ ಗಳ ವಾರ್ಡ್ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಶ್ರೀರಾಮುಲು ''ಕೊರೊನಾ ಪೇಷೆಂಟ್ ಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಮೊದಲ ಆದ್ಯತೆ. ಖಾಸಗಿ ಆಸ್ಪತ್ರೆಗಳಲ್ಲಿಯೂ ಶೇಕಡಾ 50 ರಷ್ಟು ಹಾಸಿಗೆಗಳನ್ನು ಸರ್ಕಾರ ಕರೆತರುವ ರೋಗಿಗಳಿಗೆ ಮೀಸಲಿಡಬೇಕು'' ಎಂದಿದ್ದಾರೆ.
ಬೆಂಗಳೂರಿನ ಆಸ್ಪತ್ರೆಗಳಲ್ಲಿ 2 ಸಾವಿರ ಬೆಡ್ ಇದೆ- ಆರ್ ಅಶೋಕ್
''ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 50 ರಷ್ಟು ಹಾಸಿಗೆಗಳನ್ನು ಸರ್ಕಾರ ಕರೆತರುವ ರೋಗಿಗಳಿಗೆ ಮೀಸಲಿಡಬೇಕು. ಖಾಸಗಿ ಆಸ್ಪತ್ರೆಗಳಿಗೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ಸರ್ಕಾರ ಸೂಚಿಸುವ ರೋಗಿಗಳಿಗೆ ಸರ್ಕಾರ ನಿಗದಿ ಮಾಡಿರುವ ದರ ಪಡೆಯಬೇಕು. ಖಾಸಗಿ ಆಸ್ಪತ್ರೆಗೆ ನೇರವಾಗಿ ಹೋಗಿ ದಾಖಲಾಗುವ ರೋಗಿಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ'' ಎಂದರು.
''ಬೆಂಗಳೂರಿನಲ್ಲಿ 1750 ಹಾಸಿಗೆಗಳು ಲಭ್ಯವಿದೆ. ವೈದ್ಯಕೀಯ ಕಾಲೇಜುಗಳನ್ನೂ ಬಳಕೆ ಮಾಡಿಕೊಳ್ಳಲಾಗುತ್ತದೆ. ಒಂದು ವೇಳೆ ರೋಗಿಗಳು ಅಪೇಕ್ಷೆಪಟ್ಟಲ್ಲಿ ನಾವೇ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುತ್ತದೆ'' ಎಂದು ಮಾಹಿತಿ ನೀಡಿದರು.
ಇನ್ನು ಪ್ರಮುಖ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂಬ ವಿಚಾರಕ್ಕೆ ಸ್ಪಂದಿಸಿದ ಶ್ರೀರಾಮುಲು ''ವಿಕ್ಟೋರಿಯಾ ಮತ್ತು ರಾಜೀವ್ ಗಾಂಧಿ ಆಸ್ಪತ್ರೆಯ ಅವ್ಯವಸ್ಥೆ ಹಾಗು ಊಟದ ವಿಷಯ ಗಮನಕ್ಕೆ ಬಂದಿದೆ.ಈ ಬಗ್ಗೆ ಸಿಎಂ ಕೂಡ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ರೀತಿ ಸಮಸ್ಯೆ ಮತ್ತೆ ಮರುಕಳಿಸಿದಂತೆ ಗಮನ ಹರಿಸುತ್ತೇವೆ'' ಎಂದಿದ್ದಾರೆ.