ಶ್ರೀ ಗುರು ರಾಘವೇಂದ್ರ ಬ್ಯಾಂಕ್ ಮಾಜಿ ಸಿಇಒ ವಾಸುದೇವ ಮಯ್ಯಾ ಆತ್ಮಹತ್ಯೆ
ಬೆಂಗಳೂರು, ಜುಲೈ 6: ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣ ಪ್ರಕರಣದ ಪ್ರಮುಖ ಆರೋಪಿ ಬ್ಯಾಂಕ್ ನ ಮಾಜಿ ಸಿಇಒ ಹಾಗೂ ಹಾಲಿ ಮಾರ್ಗದರ್ಶಕ ವಾಸುದೇವ್ ಮಯ್ಯ(73) ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪೂರ್ಣಪ್ರಜ್ಞಾ ಲೇಔಟ್ನಲ್ಲಿ ತಮ್ಮ ಕಾರಿನಲ್ಲೇ ವಿಷಸೇವಿಸಿ ಆತ್ಮಹತ್ಯೆ ಶರಣಾಗಿರುವ ವಾಸುದೇವ ಮಯ್ಯಾ, ಬ್ಯಾಂಕಿನ ವಿಚಾರಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೋ ಅಥವಾ ಖಾಸಗಿ ವಿಚಾರವೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಇತ್ತೀಚೆಗಷ್ಟೇ ಹಣಕಾಸು ಅವ್ಯವಹಾರ ಸಂಬಂಧ ಬಸವನಗುಡಿಯ ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕಿನ ಪ್ರಕರಣವನ್ನು ಎಸಿಬಿಯಿಂದ ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಸಾವಿರಾರು ಕೋಟಿ ರುಪಾಯಿ ವಂಚನೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಹೈಕೋರ್ಟ್ ಸೂಚನೆ ಮೇರೆಗೆ ಸಿಐಡಿಗೆ ಹಸ್ತಾಂತರ ಮಾಡಲಾಗಿತ್ತು. ಈ ಅವ್ಯವಹಾರದಲ್ಲಿ ವಾಸುದೇವ ಮಯ್ಯಾ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿದ್ದರು.

ಇದರ ಜೊತೆಗೆ ಈ ಹಿಂದೆ ಮಾಜಿ ಸಿಇಒ ವಾಸುದೇವ ಮಯ್ಯಾ ಮನೆ ಸೇರಿದಂತೆ ಶ್ರೀ ಗುರು ರಾಘವೇಂದ್ರ ಬ್ಯಾಂಕಿನ ಕೇಂದ್ರ ಕಚೇರಿ ಸೇರಿ ಐದು ಕಡೆ ಎಸಿಬಿ ದಾಳಿ ನಡೆಸಿತ್ತು. ಜೊತೆಗೆ ಬ್ಯಾಂಕ್ ಅಧಿಕಾರಿಗಳು ತೆರೆದಿದ್ದಾರೆನ್ನಲಾದ ನಕಲಿ ಖಾತೆಗಳಿಗೆ ಸಂಬಂಧಿಸಿದ ದಾಖಲೆ, ಬ್ಯಾಂಕ್ ನೀಡಿದ ಸಾಲದ ವಿವರ, ವಸೂಲಾಗದ ಸಾಲದ ದಾಖಲೆ, ಬ್ಯಾಂಕ್ನ ಕಂಪ್ಯೂಟರ್ ಡೇಟಾ ಜಪ್ತಿ ಮಾಡಲಾಗಿತ್ತು.












Click it and Unblock the Notifications