ಬೆಂಗಳೂರು ರೌಡಿಗಳ ಬಾಲ ಕಟ್ ಮಾಡಲಿಕ್ಕೆ ಕೋರ್ಟ್ ಮಾನಿಟರ್ ಸೆಲ್ ಸ್ಥಾಪನೆ!
ಬೆಂಗಳೂರು,ನ. 12: ಕೋರ್ಟ್ಗೆ ಸುಳ್ಳು ಮಾಹಿತಿ ನೀಡಿ ವಿಚಾರಣೆಗೆ ಹಾಜರಾಗದೇ ಹೋದರೆ ರೌಡಿಗಳು ಇನ್ಮುಂದೆ ಕಂಬಿ ಎಣಿಸಬೇಕಾಗುತ್ತದೆ. ವಿನಾಕಾರಣ ನ್ಯಾಯಾಲಯದಲ್ಲಿ ಸಮಯ ತೆಗೆದುಕೊಳ್ಳುವುದು, ಕೋರ್ಟ್ಗೆ ಹಾಜರಾಗದೇ ತಲೆ ಮರೆಸಿಕೊಳ್ಳುವುದನ್ನು ನಿಯಂತ್ರಿಸಲು ದಕ್ಷಿಣ ವಿಭಾಗದ ಪೊಲೀಸರು ವಿನೂತನ ವ್ಯವಸ್ಥೆ ಜಾರಿ ಮಾಡಿದ್ದಾರೆ. ರೌಡಿಗಳ ಮೇಲೆ ಹದ್ದಿನ ಕಣ್ಣಿಡಲು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಕೋರ್ಟ್ ಮಾನೀಟರಿಂಗ್ ಸೆಲ್ ಆರಂಭಿಸಿದ್ದಾರೆ.
2021 ಸೆಪ್ಟೆಂಬರ್ನಿಂದಲೇ ಕೋರ್ಟ್ ಮಾನೀಟರಿಂಗ್ ಸೆಲ್ಗೆ ಚಾಲನೆ ನೀಡಲಾಗಿದೆ. ಅಪರಾಧ ಪ್ರಕರಣಗಳ ವಿಚಾರಣೆಗೆ ರೌಡಿಗಳು ಗೈರು ಹಾಜರಾಗುವಂತಿಲ್ಲ. ವಿನಾಕಾರಣ ನ್ಯಾಯಾಲಯದ ವಿಚಾರಣೆಯಿಂದ ತಪ್ಪಿಸಿಕೊಳ್ಳುವಂತಿಲ್ಲ. ಕೋರ್ಟ್ಗೆ ಸುಳ್ಳು ಮಾಹಿತಿ ನೀಡಿ ವಿನಾಕಾರಣ ಪ್ರಕರಣಗಳ ವಿಲೇವಾರಿಗೆ ತಡಮಾಡಿದರೆ ಅಂತಹ ರೌಡಿಗಳ ಜಾಮೀನು ಅರ್ಜಿ ರದ್ದು ಪಡಿಸಿ ಜೈಲಿಗೆ ಕಳುಹಿಸುವ ಕೆಲಸವನ್ನು ಕೋರ್ಟ್ ಮಾನೀಟರಿಂಗ್ ಸೆಲ್ ನಿರ್ವಹಿಸಲಿದೆ. ಮೊದಲ ಹಂತವಾಗಿ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಪ್ರಾರಂಭಿಸಿದ್ದು, ಇದರ ಯಶಸ್ಸು ನೋಡಿಕೊಂಡು ಮುಂದಿನ ದಿನಗಳಲ್ಲಿ ಬೆಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಜಾರಿಗೆ ಬರುವ ಸಾಧ್ಯತೆಯಿದೆ.
ಒಬ್ಬ ಪಿಎಸ್ಐ, ಎಎಸ್ಐ ಹಾಗೂ ಪೊಲೀಸ್ ಸಿಬ್ಬಂದಿ ಒಳಗೊಂಡ ತಂಡ, ದಕ್ಷಿಣ ವಿಭಾಗದಲ್ಲಿರುವ ರೌಡಿಗಳ ಸಂಖ್ಯೆ, ಅವರ ಮೇಲೆ ದಾಖಲಾಗಿರುವ ಪ್ರಕರಣಗಳ ವಿವರ, ಕೋರ್ಟ್ ವಿಚಾರಣೆ, ರೌಡಿಗಳ ಕೋರ್ಟ್ ಅಟೆಂಡೆನ್ಸ್ ನಿರ್ವಹಣೆ ಮತ್ತು ಚಟುವಟಿಕೆ ಮೇಲೆ ವಿಶೇಷ ನಿಗಾ ಇಡಲಿದೆ. ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೋರ್ಟ್ಗೆ ಹಾಜರಾಗದೇ ಹೋದರೆ ಅಂತಹ ರೌಡಿಗಳ ವಿವರ ಸಂಗ್ರಹಿಸಿ ಜಾಮೀನು ರದ್ದು ಮಾಡುವಂತೆ ಕೋರ್ಟ್ ಮಾನೀಟರಿಂಗ್ ಸೆಲ್ ಕಾರ್ಯ ನಿರ್ವಹಿಸಲಿದೆ.
ಕಳೆದ ಅಗಸ್ಟ್ನಲ್ಲಿ ನ್ಯಾಯಾಲಯಗಳಿಗೆ ಹಾಜರಾಗದೇ ರೌಡಿಗಳ ಮೇಲೆ 30 ಪ್ರಕರಣಗಳಿದ್ದವು. ನ್ಯಾಯಾಲಯದಲ್ಲಿ ರೌಡಿಗಳ ಮೇಲಿನ ಪ್ರಕರಣಗಳ ವಿಚಾರಣೆ ಮುಂದೂಡಿಕೆ ಪ್ರಕರಣ 200 ಇದ್ದವು.
ಕೋರ್ಟ್ ಮಾನೀಟರಿಂಗ್ ಸೆಲ್ ದಾಖಲೆ ನಿರ್ವಹಣೆ ಮಾಡಿದ ಪರಿಣಾಮ ನಾನ್ ಬೇಲೆಬಲ್ ವಾರಂಟ್ ಜಾರಿ ಮಾಡಿರುವ ಪ್ರಕರಣಗಳ ಸಂಖ್ಯೆ 192ಕ್ಕೇರಿವೆ. ವಿಚಾರಣೆ ಮುಂದೂಡಿಸಿಕೊಂಡಿದ್ದ 200 ಪ್ರಕರಣಗಳ ಪೈಕಿ 115 ಕ್ಕೆ ಇಳಿದಿವೆ. ಕೋರ್ಟ್ಗೆ ಸುಳ್ಳು ಮಾಹಿತಿ ನೀಡಿ ತಿರುಗಾಡಿಕೊಂಡಿದ್ದ 26 ರೌಡಿ ಶೀಟರ್ಗಳ ಜಾಮೀನು ಅರ್ಜಿಗಳನ್ನು ಕೋರ್ಟ್ ಮಾನೀಟರಿಂಗ್ ಸೆಲ್ ವಜಾ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಸುಳ್ಳು ಮಾಹಿತಿ ನೀಡಿದ ರೌಡಿಗಳ ಮೇಲೆ ಐಪಿಸಿ 229a ಅಡಿಯಲ್ಲಿ ಜಾಮೀನು ಕ್ಯಾನ್ಸಲ್ ಮಾಡಿಸೋ ಕೆಲಸವನ್ನ ಪೊಲೀಸರು ಮಾಡ್ತಿದ್ದಾರೆ.
ಕೋರ್ಟ್ ಮಾನೀಟರಿಂಗ್ ಸೆಲ್ ನಲ್ಲಿ ಒಬ್ಬರು ಸಬ್ ಇನ್ಸ್ ಪೆಕ್ಟರ್, ಒಬ್ಬರು ಎಎಸ್ ಐ, ಮೂವರು ಪಿಸಿಗಳು ಹಾಗೂ ಒಬ್ಬರು ಡಬ್ಲ್ಯುಪಿಸಿಗಳು ಕಾರ್ಯನಿರ್ವಹಿಸ್ತಿರ್ತಾರೆ. ದಕ್ಷಿಣ ವಿಭಾಗದ ಪೊಲೀಸ್ ಠಾಣೆಗಳಲ್ಲಿ ರೌಡಿಗಳ ಮೇಲೆ ದಾಖಲಾಗಿರುವ ಪ್ರಕರಣಗಳ ವಿಚಾರಣೆ, ಜಾಮೀನು ಅರ್ಜಿಗಳ ಸ್ಥಿತಿ, ಸಾಕ್ಷ್ಯಾಧಾರಗಳ ರಕ್ಷಣೆ ಮಾಡುವ ಜವಾಬ್ಧಾರಿಯನ್ನು ಈ ಸೆಲ್ಗೆ ನೀಡಲಾಗಿದೆ. ಈ ಮೂಲಕ ಅಪರಾಧ ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ ಬಳಿಕವೂ ಅವುಗಳ ಸ್ಥಿತಿ ಗತಿ ತಿಳಿದುಕೊಳ್ಳುವ ಹೊಸ ವ್ಯವಸ್ಥೆಗೆ ದಕ್ಷಿಣ ವಿಭಾಗದ ಪೊಲೀಸರು ಚಾಲನೆ ನೀಡಿದ್ದಾರೆ. ಇದು ಪೊಲೀಸ್ ಇಲಾಖೆ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟು ಹಾಕಿದೆ.
Recommended Video
ಸಾಮಾನ್ಯವಾಗಿ ರೌಡಿಗಳು ಅಪರಾಧ ಕೃತ್ಯಗಳಲ್ಲಿ ಬಂಧನಕ್ಕೆ ಒಳಗಾಗಿ ಬಿಡುಗಡೆಯಾದ ಬಳಿಕ ಅವರ ಬಗ್ಗೆ ಪೊಲೀಸರು ಅಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಮತ್ತೊಂದು ಅಪರಾಧ ಪ್ರಕರಣ ವರದಿಯಾಗುವ ವರೆಗೂ ಅತ್ತ ಸುಳಿಯುವುದಿಲ್ಲ. ಆದರೆ ಮಾನೀಟರಿಂಗ್ ಸೆಲ್ ಸ್ಥಾಪನೆ ಮೂಲಕ ರೌಡಿಗಳ ಮೇಲೆ ನಿಗಾ ಇಡಲಾಗುತ್ತದೆ. ಅನಾಯಸವಾಗಿ ಅವರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಅಡ್ಡಿಯುಂಟು ಮಾಡಿದರೆ, ವಿಚಾರಣೆ ತಡ ಮಾಡಿದರೆ ಅಂತಹ ರೌಡಿಗಳ ವಿರುದ್ಧ ಈ ಮಾನೀಟರಿಂಗ್ ಸೆಲ್ ಕಾರ್ಯ ಚರಣೆ ನಡೆಸಲಿದೆ. ಜಾಮೀನು ರದ್ದು ಪಡಿಸಿ ಮತ್ತೆ ಜೈಲಿಗೆ ಕಳುಹಿಸುವ ಕೆಲಸವನ್ನು ನಿರ್ವಹಿಸುತ್ತಿದೆ.