ಕ್ಷಮಿಸಿ ಸ್ನೇಹಿತರೆ ಇದು ನಮ್ಮ ಸಮಯವಲ್ಲ: ರವಿಕೃಷ್ಣಾ ರೆಡ್ಡಿ
ಬೆಂಗಳೂರು, ಜೂನ್ 13: ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ರವಿಕೃಷ್ಣಾರೆಡ್ಡಿ ಫೇಸ್ಬುಕ್ ಮೂಲಕ ತಮ್ಮ ಸೋಲಿನ ಪರಾಮರ್ಶೆ ಮಾಡಿಕೊಂಡಿದ್ದಾರೆ.
ತಮ್ಮ ಬೆಂಬಲಿಗರು ಕುಟುಂಬದವರು ಹಾಗೂ ಸ್ನೇಹಿತರ ಬಳಿ ಕ್ಷಮೆಯಾಚಿಸಿದ್ದು, ಕ್ಷಮಿಸಿ ಇದು ನಮ್ಮ ಸಮಯವಲ್ಲ ಎಂದು ಬರೆದುಕೊಂಡಿದ್ದಾರೆ. ಜಯನಗರದಲ್ಲಿ ಸುಮಾರು ವರ್ಷಗಳಿಂದ ಕಾರ್ಯಪ್ರವೃತ್ತರಾಗಿದ್ದ ರವಿಕೃಷ್ಣಾರೆಡ್ಡಿ ತುಂಬಾ ಹೀನಾಯ ಸೋಲು ಕಂಡಿದ್ದು ಅವರಿಗೆ ನೋವು ತಂದಿದೆ. ಬುದ್ಧಿಜೀವಿಗಳು ಚಿಂತಕರು ಇವರ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದು ರಾಷ್ಟ್ರೀಯ ಪಕ್ಷಕ್ಕೆ ವಿರುದ್ಧ ಜಯ ಕಾಣುವ ಕನಸು ಕನಸಾಗೆ ಉಳಿದಿದೆ.
ಅವರು ಮಂಗಳವಾರ ಫೇಸ್ಬುಕ್ನಲ್ಲಿ ವವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದು ಅದರಲ್ಲಿ 2017ರ ನವೆಂಬರ್ 11ರಿಂದ ಸತತ ಏಳು ತಿಂಗಳುಗಳ ಕಾಲ ಮನೆಮನೆಯ ಪ್ರಚಾರವನ್ನು ನಡೆಸಿದ್ದೇವೆ, ಆ ಸಂದರ್ಭದಲ್ಲಿ ಸಾವಿರಾರು ಜನರನ್ನು ಭೇಟಿ ಮಾಡಿದ್ದೇವೆ, ಅವರ ಕಷ್ಟಗಳನ್ನು ಆಲಿಸಿದ್ದೇವೆ, ಕೆಲವು ಪರಿಹಾರವನ್ನೂ ದೊರಕಿಸಿದ್ದೇವೆ. ಈ ಚುನಾವಣೆ ಹಿಂದೆಂದೂ ಆಗದ ಜಾಗೃತಿ ಚುನಾವಣೆಯಾಗಿದೆ ಎಂದು ಹೇಳಿದ್ದಾರೆ.
ಜಯನಗರ ಜನರಿಗೆ ನನ್ನ ಮೇಲೆ ಒಳ್ಳೆಯ ಅಭಿಪ್ರಾಯವಿದೆ, ಪೊಲೀಸ್ ಇಲಾಖೆ, ಚುನಾವಣಾ ಆಯೋಗ ನ್ಯಾಯಸಮ್ಮತ ಚುನಾವಣೆ ಮಾಡುವಲ್ಲಿ ಬದ್ಧತೆಯನ್ನು ಉಳಿಸಿಕೊಂಡಿರಲಿಲ್ಲ. ಜಯನಗರದ ಜನರು ನನಗೆ ಪ್ರೀತಿ ನೀಡಿದ್ದಾರೆ, ಮೊದಲ ಬಾರಿ ಆ ಪ್ರೀತಿಯನ್ನು ಅನುಭವಿಸಿದ್ದೇನೆ, ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ.

ಕಸಮುಕ್ತ, ಲಂಚಮುಕ್ತ ಜಯನಗರವನ್ನು ಮಾಡಿಯೇ ಮಾಡುತ್ತೇನೆ, ಜಯನಗರ ಕಚೇರಿ ಇಲ್ಲಿಯೇ ಇರುತ್ತದೆ ಯಾರು ಯಾವಾಗ ಬೇಕಾದರೂ ಬಂದು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಜಯನಗರ ಚುನಾವಣೆಯಲ್ಲಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ 54 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು, ಬಿಜೆಪಿಯ ಬಿ.ಎನ್.ಪ್ರಹ್ಲಾದ್ ಅವರನ್ನು ಸೋಲಿಸಿದ್ದಾರೆ. ರವಿಕೃಷ್ಣಾರೆಡ್ಡಿ 1500ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ.












Click it and Unblock the Notifications