'ಪಕ್ಷಕ್ಕೆ ವಾಪಸ್ ಬರುವೆವು' ಎಂದಿದ್ದರು ಕೆಲವು ಅನರ್ಹರು
ಬೆಂಗಳೂರು, ಡಿಸೆಂಬರ್ 04: ಜೆಡಿಎಸ್-ಕಾಂಗ್ರೆಸ್ ಪಕ್ಷ ತೊರೆದ ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ ಆಗಿ ಈಗ ಉಪಚುನಾವಣೆಯನ್ನೂ ಎದುರಿಸುತ್ತಿದ್ದಾರೆ.
ಆದರೆ ಇದೇ ಅನರ್ಹ ಶಾಸಕರಲ್ಲಿ ಕೆಲವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರವನ್ನು ಉರುಳಿಸಿದ ಬಳಿಕ ಪಕ್ಷಕ್ಕೆ ವಾಪಸ್ಸಾಗುವುದಾಗಿ ಗೋಗರೆದಿದ್ದರಂತೆ.
ಹೌದು ಕೆಲವು ಕಾಂಗ್ರೆಸ್ ಶಾಸಕರು ತಾವು ಪಕ್ಷಕ್ಕೆ ಮರಳಲು ಸಿದ್ಧರಿರುವುದಾಗಿ ಪಕ್ಷದ ಮುಖಂಡರ ಬಳಿ ಹೇಳಿಕೊಂಡಿದ್ದರು. ಆದರೆ ಕಾಂಗ್ರೆಸ್ ಪಕ್ಷ ಅವರನ್ನು ವಾಪಸ್ ಸೇರಿಸಿಕೊಂಡಿಲ್ಲ. ಹೀಗೆಂದು ಸ್ವತಃ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಗೆ ಹೋಗಿದ್ದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಮುನಿರತ್ನ ಅವರುಗಳು ಪಕ್ಷಕ್ಕೆ ವಾಪಸ್ ಬರುವುದಾಗಿ ಕೇಳಿಕೊಂಡಿದ್ದರು. ಆದರೆ ನಾವು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಮೂವರೂ ಕಾಂಗ್ರೆಸ್ ನ ಹಿರಿಯ ಸದಸ್ಯರಾಗಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗ ಬಿಜೆಪಿಯಿಂದ ಟಿಕೆಟ್ ಪಡೆದು ಉಪಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಮುನಿರತ್ನ ಅವರ ಕ್ಷೇತ್ರ ರಾಜರಾಜೇಶ್ವರಿ ನಗರದಲ್ಲಿ ಉಪಚುನಾವಣೆ ನಡೆಯುತ್ತಿಲ್ಲವಾದ್ದರಿಂದ ಅವರು ಚುನಾವಣೆಗೆ ಸ್ಪರ್ಧಿಸಿಲ್ಲ.











Click it and Unblock the Notifications